ಸಾರಾಂಶ
ನವದೆಹಲಿ: ದೆಹಲಿಯಲ್ಲಿ ಗಣರಾಜ್ಯೋತ್ಸವಕ್ಕೂ ಮುನ್ನ ಭರ್ಜರಿ ಉಗ್ರ ಬೇಟೆ ನಡೆದಿದೆ. ಬಹುದಿನಗಳಿಂದ ಭದ್ರತಾ ಪಡೆಗಳು ಹುಡುಕುತ್ತಿದ್ದ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಕಾಶ್ಮೀರ ಮೂಲದ ಉಗ್ರ ಜಾವೇದ್ ಅಹ್ಮದ್ ಮಟ್ಟೂನನ್ನು ಗುರುವಾರ ಬಂಧಿಸಲಾಗಿದೆ. ಮಟ್ಟೂ ಸುಮಾರು 11 ಉಗ್ರ ಕೃತ್ಯಗಳಲ್ಲಿ ಪೊಲೀಸರಿಗೆ ಬೇಕಾಗಿದ್ದು, ಈತನ ತಲೆಗೆ 10 ಲಕ್ಷ ರು. ಬಹುಮಾನವಿತ್ತು.
ಕೇಂದ್ರೀಯ ತನಿಖಾ ಸಂಸ್ಥೆಗಳು ಮತ್ತು ದೆಹಲಿ ಪೊಲೀಸ್ ಇಲಾಖೆಯ ವಿಶೇಷ ತನಿಖಾ ದಳ ಈ ಕಾರ್ಯಾಚರಣೆ ನಡೆಸಿದ್ದು, ಬಂಧಿತ ಮಟ್ಟೂನಿಂದ ಒಂದು ಪಿಸ್ತೂಲ್, 6 ಜೀವಂತ ಗುಂಡುಗಳು ಮತ್ತು ಒಂದು ಕದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.ಈತ ದೆಹಲಿಗೆ ಆಗಮಿಸುವ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಪಡೆದುಕೊಂಡಿದ್ದ ದೆಹಲಿ ಪೊಲೀಸರು ಈತನನ್ನು ಬಂಧಿಸಲು ಜಾಲ ಹೆಣೆದಿದ್ದರು.
ಈತ ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ನಿವಾಸಿಯಾಗಿದ್ದು, ಜಮ್ಮು-ಕಾಶ್ಮೀರದಲ್ಲಿ ಹಲವು ಉಗ್ರ ಕೃತ್ಯಗಳನ್ನು ನಡೆಸಿದ್ದ. ಹಲವು ಬಾರಿ ಅಕ್ರಮವಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ. ಈತ ಕಾಶ್ಮೀರದಲ್ಲಿ ಉಗ್ರ ಕೃತ್ಯ ಕೈಗೊಳ್ಳಲು ಶಸ್ತ್ರಾಸ್ತ್ರ ಸಾಗಣೆಗೆ ಸಂಚು ರೂಪಿಸಿದ್ದ. ಪಾಕಿಸ್ತಾನದಲ್ಲಿರುವ ಸಂಘಟನೆಯ ಮತ್ತೊಬ್ಬ ಉಗ್ರನನ್ನು ಈತ ಸಂಪರ್ಕಿಸಿದ್ದ. ಈತನ ಸುಳಿವು ನೀಡಿದವರಿಗೆ ಪೊಲೀಸ್ ಇಲಾಖೆ ಬಹುಮಾನ ಘೋಷಿಸಿತ್ತು.ಕಳೆದ ವರ್ಷ ಸ್ವಾತಂತ್ರ್ಯೋತ್ಸವದ ಸಮಯದಲ್ಲಿ ಈತನ ಸೋದರ ಸೋಪೋರ್ನ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಗಮನ ಸೆಳೆದಿದ್ದ.