- ಅಕ್ರಮ ಕೃಷಿ ಪಂಪ್‌ಸೆಟ್‌ ಸಕ್ರಮಕ್ಕೆ 2004ರಲ್ಲೇ ಯೋಜನೆ ಜಾರಿ

- ಸಕ್ರಮಕ್ಕೆ ನಿಗದಿ ಮಾಡಿದ್ದ 4.50 ಲಕ್ಷ ಮೊತ್ತ 1.50 ಲಕ್ಷಕ್ಕೆ ಇಳಿಕೆ

- ಆದರೂ ಇಷ್ಟು ಹಣ ಪಾವತಿ ಮಾಡಿಕೊಳ್ಳದ ರೈತ ಸಮುದಾಯ

- ಇಂಥ ರೈತರಿಗೆ ಸಕ್ರಮಕ್ಕೆ ಸರ್ಕಾರದಿಂದ 3 ತಿಂಗಳ ಗಡುವು

--ಕನ್ನಡಪ್ರಭ ವಾರ್ತೆ ವಿಧಾನಪರಿಷತ್ತು


ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮ ವಿದ್ಯುತ್‌ ಸಂಪರ್ಕ ಪಡೆದಿರುವುದನ್ನು 1.50 ಲಕ್ಷ ರು. ಪಾವತಿಸಿ ಸಕ್ರಮ ಮಾಡಿಕೊಳ್ಳಲು ಮೂರು ತಿಂಗಳ ಸಮಯಾವಕಾಶ ನೀಡಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

ಜೆಡಿಎಸ್‌ನ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಕೆ.ಜೆ.ಜಾರ್ಜ್‌ ಅವರು, ಕೃಷಿ ಪಂಪ್‌ಸೆಟ್‌ಗಳ ಅಕ್ರಮ ಸಂಪರ್ಕವನ್ನು ಸಕ್ರಮ ಮಾಡಲು 2004ರಲ್ಲಿ ಅಕ್ರಮ-ಸಕ್ರಮ ಯೋಜನೆ ಜಾರಿಗೊಳಿಸಲಾಗಿದೆ. ಇದರಲ್ಲಿ ಮೂಲಸೌಕರ್ಯ ಒದಗಿಸಲು ಅಕ್ರಮ ಸಂಪರ್ಕ ಪಡೆದಿರುವವರು 4.50 ಲಕ್ಷ ರು. ಪಾವತಿಸಬೇಕೆಂದಿತ್ತು. ಆದರೆ, ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿ 3 ಲಕ್ಷ ರು. ಮನ್ನಾ ಮಾಡಿ, 1.50 ಲಕ್ಷ ರು. ಪಾವತಿಸಿದವರಿಗೂ ಸಕ್ರಮ ಮಾಡಿಕೊಡಲಾಗುತ್ತಿದೆ. ಹೀಗೆ ಸಕ್ರಮ ಮಾಡಿಕೊಳ್ಳಲು ಒಂದು ಗಡುವು ನಿಗದಿ ಮಾಡಬೇಕೆಂದು ನಿರ್ಧರಿಸಿ, 3 ತಿಂಗಳ ಕಾಲಾವಕಾಶ ನೀಡಲಾಗಿದೆ. ಆದರೂ, ಹಲವರು ಇನ್ನೂ ಹಣ ಪಾವತಿಸಲು ಮುಂದಾಗಿಲ್ಲ ಎಂದರು.

24 ಸಾವಿರ ಕೋಟಿ ಸಬ್ಸಿಡಿ:

ಇನ್ನು, ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಸಲು ನೀಡಲಾಗುವ ಸಬ್ಸಿಡಿ ಮೊತ್ತ ವಾರ್ಷಿಕ 24 ಸಾವಿರ ಕೋಟಿ ರು.ಗಳಾಗುತ್ತದೆ. ಅದರ ಜತೆಗೆ ಗೃಹ ಜ್ಯೋತಿ ಯೋಜನೆಗಾಗಿ ವಾರ್ಷಿಕವಾಗಿ 9 ಸಾವಿರ ಕೋಟಿ ರು. ಬೇಕಾಗಲಿದೆ. ಈ ಎರಡಕ್ಕೂ ರಾಜ್ಯ ಸರ್ಕಾರದಿಂದಲೇ ಅನುದಾನ ನೀಡಲಾಗುತ್ತದೆ. ಅದರಿಂದಾಗಿ ಎಸ್ಕಾಂಗಳಿಗೆ ಕೃಷಿ ಪಂಪ್‌ಸೆಟ್‌ ಸಬ್ಸಿಡಿ ಮತ್ತು ಗೃಹ ಲಕ್ಷ್ಮೀ ಯೋಜನೆಗಳು ಹೊರೆಯಾಗುವುದಿಲ್ಲ ಎಂದು ಹೇಳಿದರು.

ರಾಜ್ಯದ ವಿದ್ಯುತ್‌ ಸರಬರಾಜು ಸಂಸ್ಥೆ (ಎಸ್ಕಾಂ)ಗಳು ಸದ್ಯ 42 ಸಾವಿರ ಕೋಟಿ ರು. ದೀರ್ಘಾವಧಿ ಸಾಲ ಹೊಂದಿದ್ದು, ಅದರಲ್ಲಿ ಬೆಸ್ಕಾಂ ಒಂದೇ ಸಂಸ್ಥೆ 17,556 ಕೋಟಿ ರು. ಸಾಲ ಹೊಂದಿದೆ. ಇನ್ನು, ಕೆಪಿಎಸ್‌ಎಲ್‌ಗೆ 2005ರಿಂದ 3,478 ಕೋಟಿ ರು. ಬಾಕಿ ನೀಡಬೇಕಿತ್ತು. 5,277 ಕೋಟಿ ರು. ಬಡ್ಡಿ ಮತ್ತು ದಂಡ ಸೇರಿ ಅದೀಗ 8,755 ಕೋಟಿ ರು.ಗಳಾಗಿದೆ. ಅಷ್ಟು ಮೊತ್ತ ಪಾವತಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಕೆಪಿಸಿಎಲ್‌ ಜತೆಗೆ ಮಾತುಕತೆ ನಡೆಸಿ ಬಡ್ಡಿ ಮತ್ತು ದಂಡ ಮನ್ನಾ ಮಾಡಿ ಬಾಕಿ ಮೊತ್ತ ಪಾವತಿಸುವಂತೆ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದರು.