ಸಾರಾಂಶ
ಪಿಟಿಐ ನವದೆಹಲಿ
ಬಹುಭಾಗದಲ್ಲಿ ಬರಗಾಲ ಇರುವುದರಿಂದ ಕರ್ನಾಟಕದಲ್ಲಿ ಕುಡಿಯುವ ನೀರಿಗೂ ತೀವ್ರ ಸಮಸ್ಯೆ ಎದುರಾಗಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕ ಜನರಿಗೆ ಪರಿಹಾರ ನೀಡಲು ನಿರಾಕರಿಸುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಮೋದಿ ಅವರು ಶಿವಮೊಗ್ಗದಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾದ ದಿನವೇ ಈ ಟೀಕೆ ಮಾಡಿರುವ ಕಾಂಗ್ರೆಸ್ ಮಾಧ್ಯಮ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು, 236 ತಾಲೂಕುಗಳ ಪೈಕಿ 223ರಲ್ಲಿ ಬರಗಾಲ ಇರುವುದರಿಂದ ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಬರ ಪರಿಹಾರ ಕಾಮಗಾರಿ ಕೈಗೊಳ್ಳಲು 18,172 ಕೋಟಿ ರು. ನೀಡುವಂತೆ ಕರ್ನಾಟಕ ಸರ್ಕಾರ ಮೋದಿ ಸರ್ಕಾರಕ್ಕೆ ಮೊರೆ ಇಟ್ಟಿದೆ. ಆದರೆ ಮೋದಿ ಸರ್ಕಾರ ಏಕೆ ಕರ್ನಾಟಕ ಜನರ ಬೇಡಿಕೆಯನ್ನು ತಿರಸ್ಕರಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಗ್ರಾಮೀಣ ಆರ್ಥಿಕತೆ ಮೇಲೆ ಬರದಿಂದ ಉಂಟಾಗಿರುವ ಒತ್ತಡವನ್ನು ತಗ್ಗಿಸಲು ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಮೆ ದಿನಗಳ ಸಂಖ್ಯೆಯನ್ನು 100ರಿಂದ 150ಕ್ಕೆ ಹೆಚ್ಚಿಸುವಂತೆ ಕರ್ನಾಟಕ ಸರ್ಕಾರ ಕೇಳಿತ್ತು. ಅದಕ್ಕೆ ಅವಕಾಶವಿದ್ದರೂ ಮೋದಿ ಸರ್ಕಾರ ಅನುಮತಿ ನೀಡಿಲ್ಲ ಎಂದು ದೂರಿದ್ದಾರೆ.