- ಸಿದ್ದು ಬಜೆಟ್ ಬಗ್ಗೆ ಉಭಯ ಸದನಗಳಲ್ಲೂ ಚರ್ಚೆ- ಸಾಲದ ಹೊರೆ ಬಗ್ಗೆ ಚಾಟಿ ಬೀಸಲು ವಿಪಕ್ಷ ಸಜ್ಜು- ಕೇಂದ್ರದ ಸಾಲ ಪ್ರಸ್ತಾಪಕ್ಕೆ ಸರ್ಕಾರದ ತಯಾರಿಇಂದಿನಿಂದ ಸಂಸತ್ಅಧಿವೇಶನದ ಭಾಗ 2- ಸ್ಪೀಕರ್ ವಿರುದ್ಧ ಅವಿಶ್ವಾಸಕ್ಕೆಪ್ರತಿಪಕ್ಷಗಳಿಂದ ಭರದ ಸಿದ್ಧತೆ
ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ 2ನೇ ಹಂತ ಸೋಮವಾರದಿಂದ ಆರಂಭವಾಗಲಿದ್ದು, ಏ.2ರಂದು ಮುಕ್ತಾಯವಾಗಲಿದೆ. ಸದನದಲ್ಲಿ ಪಕ್ಷಪಾತಿ ಧೋರಣೆ ತಳೆದಿದ್ದಾರೆಂದು ಆರೋಪಿಸಿ ವಿಪಕ್ಷಗಳು ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಜ್ಜಾಗಿವೆ. ಮಧ್ಯಪ್ರಾಚ್ಯ ಯುದ್ಧದಲ್ಲಿ ಭಾರತದ ನಿಲುವು ಬಗ್ಗೆಯೂ ಜಟಾಪಟಿ ನಡೆಯುವ ನಿರೀಕ್ಷೆ ಇದೆ.ವಿವರ 7
---ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಧಾನಮಂಡಲ ಉಭಯ ಸದನಗಳಲ್ಲಿ ಸೋಮವಾರದಿಂದ ಬಜೆಟ್ ಮೇಲಿನ ಚರ್ಚೆ ಶುರುವಾಗಲಿದ್ದು ಸಾಲದ ಹೊರೆ, ನೇಮಕಾತಿ ವಿಳಂಬ, ಗುತ್ತಿಗೆದಾರರ ಬಿಲ್ ಬಾಕಿ, ಎಸ್ಸಿಪಿ-ಟಿಎಸ್ಪಿ ಹಣ ಗ್ಯಾರಂಟಿಗಳಿಗೆ ಬಳಕೆ, ಮುಖ್ಯಮಂತ್ರಿ ಹುದ್ದೆ ಗೊಂದಲ ಮತ್ತಿತರ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ.
ಪ್ರತಿಪಕ್ಷಗಳ ಆರೋಪಗಳಿಗೆ ತಕ್ಕ ಪ್ರತ್ಯುತ್ತರ ನೀಡುವ ಜತೆಗೆ ಅಡುಗೆ ಅನಿಲ ದರ ಹೆಚ್ಚಳ, ಕೇಂದ್ರದ ಅನುದಾನ ತಾರತಮ್ಯ, ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪ್ರಕರಣ ಮತ್ತಿತರ ವಿಚಾರ ಮುಂದಿಟ್ಟುಕೊಂಡು ತಿರುಗೇಟು ನೀಡಲು ಆಡಳಿತಾರೂಢ ಕಾಂಗ್ರೆಸ್ ಪಕ್ಷ ಕೂಡ ಸಿದ್ಧವಾಗಿದೆ.
ಮಾ.27ರ ವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 4.48 ಲಕ್ಷ ಕೋಟಿ ರು. ಗಾತ್ರದ ಬಜೆಟ್ ಕುರಿತು ಸೋಮವಾರದಿಂದಲೇ ಚರ್ಚೆ ಆರಂಭವಾಗಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಮಾತಿನ ಜಟಾಪಟಿ ನಿರೀಕ್ಷಿಸಲಾಗಿದೆ. ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡಿಲ್ಲ, ಸಾಲವನ್ನು 8.20 ಲಕ್ಷ ಕೋಟಿ ರು.ಗೆ ಕೊಂಡೊಯ್ಯುವ ಮೂಲಕ ರಾಜ್ಯವನ್ನು ದಿವಾಳಿ ಮಾಡಲಾಗಿದೆ, ಬಂಡವಾಳ ವೆಚ್ಚಕ್ಕೆ ಕೇವಲ 70 ಸಾವಿರ ಕೋಟಿ ರು. ನೀಡಲಾಗಿದೆ ಎಂದು ಆರೋಪಿಸುವ ಜತೆಗೆ, ಖಾಲಿ ಹುದ್ದೆ, ಎಸ್ಸಿ ಒಳ ಮೀಸಲಾತಿ ಮತ್ತಿತರ ವಿಷಯಗಳನ್ನು ಪ್ರತಿಪಕ್ಷಗಳು ಪ್ರಸ್ತಾಪಿಸಿ ಸರ್ಕಾರವನ್ನು ಕಟ್ಟಿ ಹಾಕುವ ಪ್ರಯತ್ನ ನಡೆಸುವ ಸಾಧ್ಯತೆ ಇದೆ.ಜತೆಗೆ ಕೆಪಿಎಸ್ಸಿ ನೇಮಕಾತಿ ಹಗರಣ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯ, ಮೆಟ್ರೋ ದರ ಏರಿಕೆ, ವಿದ್ಯುತ್ ದರ ಪರಿಷ್ಕರಣೆ ಹಾಗೂ ಬಸ್ಸುಗಳ ಪ್ರಯಾಣ ದರ ಹೆಚ್ಚಳಕ್ಕೆ ಮಾಡಿಕೊಳ್ಳುತ್ತಿರುವ ಸಿದ್ಧತೆ ಬಗ್ಗೆ ಪ್ರಸ್ತಾಪಿಸಿ ಹರಿಹಾಯಲಿದೆ ಎಂದೂ ಹೇಳಲಾಗಿದೆ.
ಕೇಂದ್ರದ ಅನ್ಯಾಯ ಪ್ರಸ್ತಾಪ:ಆಡಳಿತ ಪಕ್ಷದ ಸದಸ್ಯರು ಕೇಂದ್ರದ 15ನೇ ಹಣಕಾಸು ಶಿಫಾರಸುಗಳ ಅನ್ಯಾಯ, ಜಿಎಸ್ಟಿ ಆದಾಯ ಕಡಿತ, ವಿಬಿಜಿ ರಾಮ್ ಜಿಯಿಂದ ಆದ ಅನುದಾನ ಕಡಿತ, ಜಲಜೀವನ್ ಮಿಷನ್ನಲ್ಲಿ ಬಾಕಿ ಉಳಿಸಿಕೊಂಡಿರುವ 15,000 ಕೋಟಿ ರು, ರಾಜ್ಯದ ನೀರಾವರಿ ಯೋಜನೆಗಳಿಗೆ ಅಸಹಾಕಾರ ಸೇರಿ ಕೇಂದ್ರದಿಂದ ಆಗುತ್ತಿರುವ ಅನ್ಯಾಯಗಳನ್ನು ಪ್ರಸ್ತಾಪಿಸುವ ನಿರೀಕ್ಷೆ ಇದೆ. ಇದರೊಂದಿಗೆ, ರಾಜ್ಯ ಸರ್ಕಾರ ಮೇಲಿನ ಸಾಲದ ಆರೋಪಕ್ಕೆ ಮೋದಿ ಸರ್ಕಾರ ತನ್ನ ಅವಧಿಯಲ್ಲಿ 165 ಲಕ್ಷ ಕೋಟಿ ರು. ಸಾಲ ಮಾಡಿರುವುದನ್ನು ಪ್ರಸ್ತಾಪಿಸಿ ತಿರುಗೇಟು ನೀಡುವ ಸಾಧ್ಯತೆಯಿದೆ. ಜತೆಗೆ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಸೇರಿರುವ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಪ್ರಕರಣವನ್ನೂ ಪ್ರಸ್ತಾಪಿಸಿ ಪ್ರತಿಪಕ್ಷ ಮುಖಂಡರ ಬಾಯ್ಮುಚ್ಚಿಸುವ ಪ್ರಯತ್ನ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.