ಸಾರಾಂಶ
ನವದೆಹಲಿ: ಜಗದ್ವಿಖ್ಯಾತ ಧಾರ್ಮಿಕ ಕ್ಷೇತ್ರ ವಾರಾಣಸಿಯ ನದಿ ದಡದಲ್ಲಿರುವ ಘಾಟ್ಗಳು ನೀರಿನ ಹೆಚ್ಚಳದಿಂದಾಗಿ ಕ್ರಮೇಣ ಮುಳುಗುತ್ತಿವೆ ಎಂಬುದಾಗಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಭೂವಿಜ್ಞಾನಿಗಳು ನಡೆಸಿದ ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಶೋಧನೆಯನ್ನು 2017 ಮತ್ತು 2023ರ ನಡುವೆ ವಾರಾಣಸಿಯ 12 ಘಾಟ್ಗಳಲ್ಲಿ ಉಂಟಾದ ಬದಲಾವಣೆಯನ್ನು ಆಧರಿಸಿ ವರದಿ ತಯಾರಿಸಲಾಗಿದೆ.
ಅದರಲ್ಲಿ ವಾರಾಣಸಿಯ ಘಾಟ್ಗಳು ವಾರ್ಷಿಕವಾಗಿ ಸರಾಸರಿ 2-8 ಮಿ.ಮೀನಷ್ಟು ಮುಳುಗುತ್ತಿದ್ದು, ವಿಶ್ವನಾಥ ಮಂದಿರದ ಬಳಿಯಿರುವ ಮಣಿಕರ್ಣಿಕಾ ಮತ್ತು ದಶಾಶ್ವಮೇಧ ಘಾಟ್ 6 ವರ್ಷದಲ್ಲಿ 23 ಮಿ.ಮೀನಷ್ಟು ಮುಳುಗಿವೆ ಎಂದು ವರದಿ ಉಲ್ಲೇಖಿಸಿದೆ.
ನದಿ ಸ್ವಲ್ಪ ತಿರುವಿರುವ ಸಾಮ್ನೆ ಘಾಟ್ ಹೆಚ್ಚು ಅಪಾಯದಲ್ಲಿದ್ದು, 6 ವರ್ಷಗಳ ಅವಧಿಯಲ್ಲಿ 50 ಮಿ.ಮೀ ನಷ್ಟು ಮುಳುಗಿದೆ ಎಂದು ತಿಳಿಸಿದೆ.
ಕಾರಣಗಳು: ವಾರಾಣಸಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಉದ್ಯೋಗ ಅರಸಿ ಬರುತ್ತಿರುವುದರಿಂದ ಅಂತರ್ಜಲ ನೀರಿಗೆ ಒತ್ತಡ ಉಂಟಾಗಿ ನದಿ ನೀರಿನ ಹರಿವು ಹೆಚ್ಚುತ್ತಿದೆ.
ಇದರಿಂದ ಮಣ್ಣಿನ ಸವಕಳಿ ಉಂಟಾಗಿ ನೀರಿನ ವೇಗ ಕೂಡ ಹೆಚ್ಚುತ್ತಿದ್ದು, ಘಾಟ್ಗಳು ಮುಳುಗಲು ಪುಷ್ಟಿ ನೀಡುತ್ತಿವೆ.
ಅಲ್ಲದೆ ವಾರಾಣಸಿ ಬಳಿ ಗಂಗಾ ನದಿಯಲ್ಲಿ ಹೆಚ್ಚು ತಿರುವುಗಳಿರುವ ಕಾರಣ ಈಶಾನ್ಯಕ್ಕೆ ತಿರುಗುವ ಕಡೆಗಳಲ್ಲಿ ಎಡ ಬದಿಯಲ್ಲಿರುವ ಘಾಟ್ಗಳು ಹೆಚ್ಚು ಅಪಾಯಕ್ಕೆ ಸಿಲುಕಿವೆ ಎಂದು ವರದಿ ಉಲ್ಲೇಖಿಸಿದೆ.