ಸಾರಾಂಶ
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಬಜೆಟ್ ಅಧಿವೇಶನದಲ್ಲಿ ಕೇವಲ ಒಂದೂವರೆ ನಿಮಿಷದಲ್ಲಿ 62 ಪುಟಗಳ ಭಾಷಣವನ್ನು ಓದಿ ಹಿಂದಿರುಗಿದ ಪ್ರಸಂಗ ನಡೆಯಿತು.
ತಿರುವನಂತಪುರ: ಕೇರಳ ವಿಧಾನಸಭೆಯ ಬಜೆಟ್ ಅಧಿವೇಶನದ ಮೊದಲ ದಿನವಾದ ಗುರುವಾರ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ವಿಧಾನಸಭೆಯ ಮೊದಲ ದಿನ ಸರ್ಕಾರ ಸಿದ್ಧಪಡಿಸಿದ ಭಾಷಣ ಓದುವ ಸಂಪ್ರದಾಯವನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕೇವಲ ಒಂದೂವರೆ ನಿಮಿಷದಲ್ಲಿ ಮುಗಿಸಿ ತೆರಳಿದ್ದಾರೆ.
ಬೆಳಗ್ಗೆ 9 ಗಂಟೆಗೆ ವಿಧಾನಸಭೆಗೆ ಬಂದ ರಾಜ್ಯಪಾಲರು, 9.02ಕ್ಕೆ ಭಾಷಣ ಓದಲು ಆರಂಭಿಸಿ 9.04ಕ್ಕೆ ಮೊದಲೇ ಭಾಷಣ ಮುಗಿಸಿ ತೆರಳಿದರು. ಸರ್ಕಾರ ಸಿದ್ಧಪಡಿಸಿದ 62 ಪುಟಗಳ ಭಾಷಣದ ಮೊದಲ ಮತ್ತು ಕೊನೆಯ ಪ್ಯಾರಾವನ್ನು ಮಾತ್ರವೇ ಅವರು ಓದಿದರು.ರಾಜ್ಯದಲ್ಲಿ ಆಡಳಿತಾರೂಢ ಎಲ್ಡಿಎಫ್ ಮತ್ತು ರಾಜ್ಯಪಾಲರ ನಡುವೆ ಹಲವು ಸಮಯದಿಂದ ಸಂಘರ್ಷ ನಡೆಯುತ್ತಿದ್ದು, ಗುರುವಾರದ ಘಟನೆಯೊಂದಿಗೆ ಅದು ಮತ್ತಷ್ಟು ತೀವ್ರಗೊಂಡಿದೆ.