ಸಾರಾಂಶ
ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿ ಒಂದು ದಿನ ಕಳೆದಿದೆ. ಸಂತ್ರಸ್ತರಿಗೆ ಅವರ ಕುಟುಂಬಗಳಿಗೆ ಆತಂಕ ಮಾತ್ರ ದೂರವಾಗಿಲ್ಲ. ಕೆಲವರು ಕುಟುಂಬದಿಂದ ದೂರವಾಗಿ ಮತ್ತೆ ಮನೆ ಸೇರಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರೆ, ಇನ್ನು ಕೆಲವರು ಕಳೆದು ಹೋಗಿರುವ ತಮ್ಮವರಿಗಾಗಿ ಕಣ್ಣು ಮಿಟುಕಿಸದೇ ಕಾಯುತ್ತಿದ್ದಾರೆ.
ಮಹಾಕುಂಭ ನಗರ: ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿ ಒಂದು ದಿನ ಕಳೆದಿದೆ. ಆದರೂ ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಆತಂಕ ಮಾತ್ರ ದೂರವಾಗಿಲ್ಲ. ಕೆಲವರು ಕುಟುಂಬದಿಂದ ದೂರವಾಗಿ ಮತ್ತೆ ಮನೆ ಸೇರಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರೆ, ಇನ್ನು ಕೆಲವರು ಕಳೆದು ಹೋಗಿರುವ ತಮ್ಮವರಿಗಾಗಿ ಕಣ್ಣು ಮಿಟುಕಿಸದೇ ಕಾಯುತ್ತಿದ್ದಾರೆ.
ಘಟನೆ ಬಳಿಕ ಸಂಪರ್ಕಕ್ಕೆ ಸಿಗುತ್ತಿಲ್ಲ:
ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಲು ಗ್ವಾಲಿಯರ್ನಿಂದ 15 ಜನರ ತಂಡದೊಂದಿಗೆ ತೆರಳಿದ್ದ 70 ವರ್ಷದ ಶಕುಂತಲಾ ದೇವಿ ಎನ್ನುವವರು ನಾಪತ್ತೆಯಾಗಿದ್ದಾರೆ. ಅವರ ಸಂಬಂಧಿ ಜಿತೇಂದ್ರ ಸಾಹು ಒಂದು ಕ್ಷಣವೂ ಕಣ್ಣು ಮಿಟುಕಿಸದೇ ಶಕುಂತಲಾ ಅವರಿಗೆ ಹುಡುಕಾಡುತ್ತಿದ್ದಾರೆ. ಈ ಬಗ್ಗೆ ಅವರ ಅಳಲು ತೋಡಿಕೊಂಡಿದ್ದು, ‘ ಘಟನೆ ಬಳಿಕ ಚಿಕ್ಕಮ್ಮನೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ. ಆಕೆಯ ಫೋನ್ ತಲುಪಲು ಸಾಧ್ಯವಾಗುತ್ತಿಲ್ಲ. ಅವರು ಕೂಡ ಇದುವರೆಗೆ ಯಾರನ್ನೂ ಸಂಪರ್ಕಿಸಿಲ್ಲ. ಏನು ಮಾಡಬೇಕೆಂದು ತಿಳಿದಿಲ್ಲ’ ಎಂದಿದ್ದಾರೆ.
ಹಮೀರಪುರದ ಧೇಹಾ ಡೇರಾ ಗ್ರಾಮದ ಫೂಲಿ ನಿಶಾದ್ ಎನ್ನುವವರು ಮೌನಿ ಅಮಾವಾಸ್ಯೆಯಂದು ನಾಪತ್ತೆಯಾಗಿದ್ದಾರೆ. ಕುಟುಂಬದ ಜೊತೆಗೆ ತೆರಳಿದ್ದ ಅವರು ಪುಣ್ಯ ಸ್ನಾನ ಮಾಡಿದ ತಮ್ಮ ಕುಟುಂಬದವರ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.
ಇದು ಕೇವಲ ಜಿತೇಂದ್ರ, ನಿಶಾದ್ ಕುಟುಂಬದ ಕಥೆಯಲ್ಲ.ಹಲವು ಕುಟುಂಬಗಳದ್ದು ಇದೇ ಸ್ಥಿತಿ. ನಾಪತ್ತೆಯಾಗಿರುವ ತಮ್ಮವರು ಮರಳಿ ಬರುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಕಾಣೆಯಾಗಿರುವವರಲ್ಲಿ ಹೆಚ್ಚಿನವರು ಮಹಿಳೆಯರು. ಇದೆಲ್ಲದರ ನಡುವೆ ಕೆಲವರು ಮತ್ತೆ ಮನೆಯವರನ್ನ ಸೇರಿಕೊಂಡು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.
ಕೋಟ್ಯಂತರ ಜನರು ಸೇರಿದ್ದ ಸ್ಥಳದಲ್ಲಿ ಕಾಲ್ತುಳಿತ ನಡೆದ ಸಂದರ್ಭದಲ್ಲಿ ನಾಪತ್ತೆಯಾದವರ ಪತ್ತೆ ಹಚ್ಚುವುದು ಪೊಲೀಸರು ತಲೆ ಸವಾಲಾಗಿದೆ.ರಕ್ಷಣಾ ಸಿಬ್ಬಂದಿ ಶೋಧ ನಡೆಸುತ್ತಿದ್ದು, ಪತ್ತೆಯಾದವರನ್ನು ಮತ್ತೆ ಕುಟುಂಬಕ್ಕೆ ಸೇರಿಸುವ ಕೆಲಸದಲ್ಲಿ ತೊಡಗಿದ್ದಾರೆ.