ಸಾರಾಂಶ
ಮೈತ್ರಿ ಪತನದ ಬಳಿಕ ಲಾಲು-ನಿತೀಶ್ ಮುಖಾಮುಖಿಯಾಗಿದ್ದು, ನಿತೀಶ್ ಕುಮಾರ್ಗೆ ನಮ್ಮ ಮೈತ್ರಿಯ ಬಾಗಿಲು ಸದಾ ತೆರೆದಿರಲಿದೆ ಎಂದು ಲಾಲು ಪ್ರಸಾದ್ ಯಾದವ್ ತಿಳಿಸಿದ್ದಾರೆ.
ಪಟನಾ: ಬಿಹಾರದಲ್ಲಿ ಮಹಾಗಠಬಂಧನ್ ಮೈತ್ರಿ ಪತನದ ಬಳಿಕ ಮೊದಲ ಬಾರಿಗೆ ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಪ್ರತಿಕ್ರಿಯಿಸಿದ್ದು, ಜೆಡಿಯು ನಾಯಕ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಮೈತ್ರಿಯ ಬಾಗಿಲು ಸದಾ ತೆರೆದಿದೆ ಎಂದು ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ, ‘ನಿತೀಶ್ ಕುಮಾರ್ ಅವರು ಮೊದಲಿಗೆ ತಮ್ಮ ಬಳಿ ಬರಲಿ. ಬಳಿಕ ನೋಡೋಣ’ ಎಂದು ಉತ್ತರಿಸಿದರೂ ಕ್ರಮೇಣ ಮೈತ್ರಿಯ ಬಾಗಿಲು ಸದಾ ತೆರೆದಿದೆ ಎಂದು ತಿಳಿಸಿದರು.
ಅಲ್ಲದೇ ಲಾಲು ಮತ್ತು ನಿತೀಶ್ ಅವರು ವಿಧಾನಸಭೆಯಲ್ಲಿ ಪರಸ್ಪರ ಮುಖಾಮುಖಿಯಾಗಿ ಕುಶಲೋಪರಿ ನಡೆಸಿದ್ದು ಗಮನ ಸೆಳೆಯಿತು.