ಸಾರಾಂಶ
ಮಾನಹಾನಿ ಪ್ರಕರಣವನ್ನು ಕ್ರಿಮಿನಲ್ ಅಪರಾಧದ ವ್ಯಾಪ್ತಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಕಾನೂನು ಆಯೋಗ ಶಿಫಾರಸು ಮಾಡಿದೆ.
ನವದೆಹಲಿ: ಕ್ರಿಮಿನಲ್ ಮಾನಹಾನಿ ಪ್ರಕರಣಗಳನ್ನು ಕ್ರಿಮಿನಲ್ ಕಾನೂನು ವ್ಯಾಪ್ತಿಯಲ್ಲಿ ‘ಅಪರಾಧ’ ಎಂದು ಪರಿಗಣಿಸುವುದನ್ನು ಮುಂದುವರೆಸಬೇಕು ಎಂದು ಕೇಂದ್ರ ಕಾನೂನು ಆಯೋಗ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.ಘನತೆ ಕಾಪಾಡಿಕೊಳ್ಳುವುದು ಕೂಡಾ ಸಂವಿಧಾದನ 21ನೇ ವಿಧಿಯ ವ್ಯಾಪ್ತಿಗೆ ಒಳಪಡುತ್ತದೆ. ಜೊತೆಗೆ ಇಂಥ ಘನತೆಯು ಬದುಕುವ ಹಕ್ಕು ಮತ್ತು ಖಾಸಗಿತನದ ಹಕ್ಕಿನ ಮುಖವಾಣಿಯಾಗಿರುವ ಕಾರಣ, ದ್ವೇಷದ ಭಾಷಣ ಮತ್ತು ಸುಳ್ಳು ಆರೋಪಗಳಿಂದ ವ್ಯಕ್ತಿಯ ಘನತೆಯನ್ನು ಸೂಕ್ತವಾಗಿ ರಕ್ಷಿಸುವುದು ಅತ್ಯಗತ್ಯ ಎಂದು ಆಯೋಗ ಹೇಳಿದೆ.ಘನತೆ ಎಂಬುದು ಯಾರಿಗೂ ಕಾಣುವಂಥದ್ದಲ್ಲ, ಬದಲಾಗಿ ಅದು ಸಂಪಾದಿಸುವಂಥದ್ದು. ಇದು ಜೀವಮಾನವಿಡೀ ಸಂಪಾದಿಸುವ ಆಸ್ತಿಯಾಗಿದ್ದು, ಕೆಲವೇ ಸೆಕೆಂಡ್ಗಳಲ್ಲಿ ನಷ್ಟವಾಗಬಹುದು. ಹೀಗಾಗಿಯೇ ವ್ಯಕ್ತಿಯೊಬ್ಬನ ಘನತೆಯನ್ನು ರಕ್ಷಿಸುವ ಪ್ರಮುಖ ಉದ್ದೇಶ ಒಳಗೊಂಡ ಕ್ರಿಮಿನಲ್ ಮಾನಹಾನಿ ಕಾಯ್ದೆಯನ್ನು ಕ್ರಿಮಿನಲ್ ಕಾಯ್ದೆಯಡಿ ಉಳಿಸಿಕೊಳ್ಳಬೇಕು ಎಂದು ಆಯೋಗ ಸಲಹೆ ಮಾಡಿದೆ.