ಸಾರಾಂಶ
ನವದೆಹಲಿ: ಶನಿವಾರ ಭೋಪಾಲ್-ದೆಹಲಿ ನಡುವೆ ಪ್ರಯಾಣಿಸಿದ ಏರ್ ಇಂಡಿಯಾ ವಿಮಾನದಲ್ಲಿ ತಮ್ಮ ಸೀಟು ಮುರಿದಿತ್ತು ಎಂಬ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಆರೋಪ ಏರ್ ಇಂಡಿಯಾ ಮೂಲಗಳು ತಳ್ಳಿಹಾಕಿವೆ.‘ಏರ್ಬಸ್ನಲ್ಲಿ ಅವರ ಆಸನವು ಮುರಿದಿರಲಿಲ್ಲ.
ವಿಮಾನದ ತೂಕವನ್ನು ಕಡಿಮೆ ಮಾಡಲು ಮತ್ತು ಇಂಧನ ಬಳಕೆಯನ್ನು ಉಳಿಸಲು ವಿಮಾನಯಾನ ಸಂಸ್ಥೆಗಳು ಹೆಚ್ಚಾಗಿ ಆಯ್ಕೆ ಮಾಡುವ ಹೊಸ ಹಗುರವಾದ ಆಸನ ಅದು. ಅದಕ್ಕೆ ಅಳವಡಿಸಲಾದ ಕುಶನ್ಗೆ ಲೀನ್ ಕುಶನ್ ಎನ್ನುತ್ತಾರೆ. ಎಲ್ಲಾ ಪ್ರಯಾಣಿಕರ ತೂಕವನ್ನು ತಾಳಿಕೊಳ್ಳುತ್ತದೆ. ಇದರಿಂದಾಗಿ ಮುಳುಗಿದ ಪರಿಣಾಮ ಉಂಟಾಗುತ್ತದೆ’ ಎಂದು ಮೂಲಗಳು ಹೇಳಿವೆ.
ಅಲ್ಲದೆ, ‘ಆಸನವು ಹಿಂದೆ ಒರಗಿಕೊಂಡಿತ್ತು ಮತ್ತು ಮುರಿದಿಲ್ಲ. ಅದನ್ನು ಎಂಜಿನಿಯರ್ಗಳು ಪರಿಶೀಲಿಸಿದ್ದಾರೆ. ಆದರೆ ಈ ತೆಳುವಾದ ಮೆತ್ತನೆಯು ಆಗಾಗ್ಗೆ ಕುಸಿದ (ಮುಳುಗಿದ) ಅನುಭವವನ್ನು ನೀಡುತ್ತದೆ, ವಿಶೇಷವಾಗಿ ಪ್ರಕ್ಷುಬ್ಧತೆಯ ಸಮಯದಲ್ಲಿ ಪ್ರಯಾಣಿಕರು ಆಸನವು ಚಲಿಸುತ್ತಿರುವಂತೆ ಭಾವಿಸಬಹುದು " ಎಂದು ಅವು ತಿಳಿಸಿವೆ.ಈ ಬಗ್ಗೆ ಏರ್ ಇಂಡಿಯಾ ಇನ್ನೂ ತನ್ನ ವರದಿಯನ್ನು ಸಲ್ಲಿಸಿಲ್ಲ. ಶೀಘ್ರ ಸಲ್ಲಿಸಲಿದೆ ಎಂದು ಹಿರಿಯ ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.