ಇಂದಿನಿಂದ ಹೊಸ ಲೋಕಸಭೆ ಕಲಾಪ: ಸಂಸದರ ಪದಗ್ರಹಣ

| Published : Jun 24 2024, 01:37 AM IST / Updated: Jun 24 2024, 03:54 AM IST

ಸಾರಾಂಶ

ಸೋಮವಾರದಿಂದ 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಲಿದೆ. ಈ ವೇಳೆ ಹೊಸ ಚುನಾಯಿತ ಸದಸ್ಯರ ಪ್ರಮಾಣ ವಚನ ಸ್ವೀಕಾರ ನಡೆಯಲಿದ್ದು, ಜೂನ್ 26ರಂದು ಲೋಕಸಭೆ ಸ್ಪೀಕರ್ ಆಯ್ಕೆ ನಡೆಯಲಿದೆ ಹಾಗೂ ಜೂ.27ರಂದು ಅಧ್ಯಕ್ಷೆ ದ್ರೌಪದಿ ಮುರ್ಮು ಉಭಯ ಸದನಗಳ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

 ನವದೆಹಲಿ : ಸೋಮವಾರದಿಂದ 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಲಿದೆ. ಈ ವೇಳೆ ಹೊಸ ಚುನಾಯಿತ ಸದಸ್ಯರ ಪ್ರಮಾಣ ವಚನ ಸ್ವೀಕಾರ ನಡೆಯಲಿದ್ದು, ಜೂನ್ 26ರಂದು ಲೋಕಸಭೆ ಸ್ಪೀಕರ್ ಆಯ್ಕೆ ನಡೆಯಲಿದೆ ಹಾಗೂ ಜೂ.27ರಂದು ಅಧ್ಯಕ್ಷೆ ದ್ರೌಪದಿ ಮುರ್ಮು ಉಭಯ ಸದನಗಳ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಆದರೆ ಮೊದಲ ಅಧಿವೇಶನದಲ್ಲಿ ಹಂಗಾಮಿ ಸ್ಪೀಕರ್ ಆಗಿ ಬಿಜೆಪಿ ನಾಯಕ ಮತ್ತು ಸತತ 7 ಅವಧಿಯ ಸಂಸದ ಭರ್ತೃಹರಿ ಮಹ್ತಬ್‌ ಅವರ ನೇಮಕದ ಕರಿನೆರಳು ಬೀಳುವ ಸಾಧ್ಯತೆಯಿದೆ. 

ಏಕೆಂದರೆ 8 ಬಾರಿಯ ಕಾಂಗ್ರೆಸ್‌ ಸಂಸದ ಕೋಡಿಕುನ್ನಿಲ್‌ ಸುರೇಶ್‌ ಅವರನ್ನು ನಿರ್ಲಕ್ಷಿಸಿ 7 ಬಾರಿಯ ಸಂಸದ ಮಹ್ತಬ್‌ ಅವರನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಿಸಿದ್ದು, ವಿಪಕ್ಷ ಸದಸ್ಯರನ್ನು ಕೆರಳಿಸಿದೆ. ಹೀಗಾಗಿಯೇ ಮಹ್ತಬ್‌ ಅವರ ಅನುಪಸ್ಥಿತಿಯಲ್ಲಿ ಹೊಸ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲು ನೇಮಕ ಆಗಿರುವ ಹಂಗಾಮಿ ಸ್ಪೀಕರ್‌ ಸಮಿತಿಯ ವಿಪಕ್ಷ ಸದಸ್ಯರು ತಮ್ಮ ಕರ್ತವ್ಯ ಬಹಿಷ್ಕರಿಸುವ ಸಾಧ್ಯತೆ ಇದೆ.

ಈ ನಡುವೆ ಹೊಸ ಸದಸ್ಯರ ಪ್ರಮಾಣವಚನ ಬಳಿಕ ಜೂ.27 ರಂದು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾತನಾಡಲಿದ್ದಾರೆ. ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯು ಜೂ.28 ರಂದು ಪ್ರಾರಂಭವಾಗಲಿದೆ. ಜು.2 ಅಥವಾ 3 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆಗೆ ಪ್ರತಿಕ್ರಿಯಿಸುವ ನಿರೀಕ್ಷೆಯಿದೆ.

ಬಳಿಕ ಉಭಯ ಸದನಗಳು ಸಂಕ್ಷಿಪ್ತ ವಿರಾಮಕ್ಕೆ ಹೋಗಿ ಜು.22ರಂದು ಕೇಂದ್ರ ಬಜೆಟ್ ಮಂಡನೆಗಾಗಿ ಮರು-ಸಂಯೋಜನೆಗೊಳ್ಳಲಿವೆ.

ಇಂದು ಸಂಸತ್ತಿನಲ್ಲಿ ಏನು?:ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಮಹ್ತಬ್‌ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ನಂತರ ಮಹ್ತಬ್‌ ಅವರು ಸಂಸತ್ ಭವನಕ್ಕೆ ಆಗಮಿಸಿ ಬೆಳಗ್ಗೆ 11 ಗಂಟೆಗೆ ಲೋಕಸಭೆ ಕಲಾಪ ಆರಂಭಿಸಲಿದ್ದಾರೆ.18ನೇ ಲೋಕಸಭೆಯ ಮೊದಲ ಅಧಿವೇಶನದ ಕಲಾಪವು, ಸದಸ್ಯರು ಮೌನ ಆಚರಿಸುವುದರೊಂದಿಗೆ ಆರಂಭವಾಗಲಿದೆ. 

ಇದರ ನಂತರ ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್ ಅವರು ಕೆಳಮನೆಗೆ ಆಯ್ಕೆಯಾದ ಸದಸ್ಯರ ಪಟ್ಟಿಯನ್ನು ಸದನದ ಮೇಜಿನ ಮೇಲೆ ಇಡುತ್ತಾರೆ.ಬಳಿಕ ಮಹ್ತಬ್‌ ಅವರು ಲೋಕಸಭೆಯ ಸದನ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಸಭೆ ಸದಸ್ಯರಾಗಿ ಪ್ರಮಾಣ ವಚನ ಬೋಧಿಸುತ್ತಾರೆ. 

ನಂತರ ತಮ್ಮ ಅನುಪಸ್ಥಿತಿಯಲ್ಲಿ ಹಂಗಾಮಿ ಸ್ಪೀಕರ್‌ ಆಗಿ ಕೆಲಸ ಮಾಡುವ ಐವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆಕೋಡಿಕುನ್ನಿಲ್ ಸುರೇಶ್ (ಕಾಂಗ್ರೆಸ್), ಟಿ.ಆರ್.ಬಾಲು (ಡಿಎಂಕೆ), ರಾಧಾ ಮೋಹನ್ ಸಿಂಗ್ ಮತ್ತು ಫಗ್ಗನ್ ಸಿಂಗ್ ಕುಲಸ್ತೆ (ಇಬ್ಬರೂ ಬಿಜೆಪಿ) ಮತ್ತು ಸುದೀಪ್ ಬಂಡೋಪಾಧ್ಯಾಯ (ಟಿಎಂಸಿ)- ಇವರು ಸ್ಪೀಕರ್ ಸಮಿತಿಯಲ್ಲಿರುವ ಸದಸ್ಯರು.

ಬಳಿಕ ಹಂಗಾಮಿ ಸ್ಪೀಕರ್ ಅವರು ಮೋದಿ ಸರ್ಕಾರದ ಮಂತ್ರಿ ಪರಿಷತ್ತಿಗೆ ಲೋಕಸಭೆ ಸದಸ್ಯರಾಗಿ ಪ್ರಮಾಣ ವಚನ ಬೋಧಿಸುತ್ತಾರೆ. ಲೋಕಸಭೆಯ ಸ್ಪೀಕರ್ ಹುದ್ದೆಗೆ ಬುಧವಾರ ಚುನಾವಣೆ ನಡೆಯಲಿದೆ. ಬಳಿಕ ಮೋದಿ ಅವರು ತಮ್ಮ ಸಚಿವ ಸಂಪುಟವನ್ನು ಸದನಕ್ಕೆ ಪರಿಚಯಿಸಲಿದ್ದಾರೆ.