ಸಾರಾಂಶ
ನವದೆಹಲಿ: ಲಕ್ಷದ್ವೀಪ ಪ್ರವಾಸ ಉತ್ತೇಜಿಸಿದ ಪ್ರಧಾನಿ ನರೇಂದ್ರ ಮೋದಿ ನಡೆಯನ್ನು ಟೀಕಿಸಿ ಭಾರತೀಯರು ಮತ್ತು ಸ್ವತಃ ಸ್ವದೇಶಿಯರಿಂದ ತೀವ್ರ ಟೀಕೆಗೆ ಗುರಿಯಾಗಿರುವ ಮಾಲ್ಡೀವಸ್ ಸಂಸದ ಜಹೀದ್ ರಮೀಜ್ ಪೂರ್ತಿ ತಣ್ಣಗಾಗಿದ್ದಾರೆ.
ಮಂಗಳವಾರ ಅವರು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ. ‘ಗೌರವಾನ್ವಿತ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ಗೆ ಜನ್ಮದಿನದ ಶುಭಾಶಯಗಳು. ಈ ವರ್ಷ ನಿಮಗೆ ಯಶಸ್ಸು ಮತ್ತು ಸಕಾರಾತ್ಮಕ ರಾಜತಾಂತ್ರಿಕ ಪ್ರಯತ್ನಗಳಿಂದ ತುಂಬಿರಲಿ ಎಂದು ಹಾರೈಸುತ್ತೇನೆ’ ಎಂದಿದ್ದಾರೆ.
ಮೋದಿ ಟ್ವೀಟ್ ಬಗ್ಗೆ ವ್ಯಂಗ್ಯವಾಡಿದ್ದ ಜಹೀದ್, ‘ಮಾಲ್ಡೀವ್ಸ್ನೊಂದಿಗೆ ಸ್ಪರ್ಧಿಸುವ ನಿಮ್ಮ ಕಲ್ಪನೆ ಕೇವಲ ಭ್ರಮೆ. ನಾವು ನೀಡುವ ಸೇವೆಯನ್ನು ಅವರು ಹೇಗೆ ನೀಡಲು ಸಾಧ್ಯ. ಭಾರತದ ಹೋಟೆಲಿನ ಕೊಠಡಿಗಳು ದುರ್ವಾಸನೆಯಿಂದ ಕೂಡಿರುತ್ತವೆ’ ಎಂದು ಕೀಳು ಹೇಳಿಕೆ ನೀಡಿದ್ದರು.
ಮಾಲ್ಡೀವ್ಸ್ ವಿವಾದ: ಪ್ರಧಾನಿ ಮೋದಿ ಬೆಂಬಲಿಸಿದ ಪವಾರ್, ಮಲ್ಲಿಕಾರ್ಜುನ ಖರ್ಗೆ ವಿರೋಧ
ಪ್ರಧಾನಿ ನರೇಂದ್ರ ಮೋದಿ ಕುರಿತ ಮಾಲ್ಡೀವ್ಸ್ ಸಚಿವರ ಹೇಳಿಕೆ ಬಗ್ಗೆ ಪ್ರತಿಪಕ್ಷಗಳ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಮಾಲ್ಡೀವ್ಸ್ ಸಚಿವ ಹೇಳಿಕೆಯನ್ನು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಪ್ರಧಾನಿ ಟೀಕಿಸಿದ್ದಾರೆ.
‘ಮೋದಿ ನಮ್ಮ ದೇಶದ ಪ್ರಧಾನಿ, ಇತರ ಯಾವುದೇ ದೇಶದ ನಾಯಕರು ಅವರ ವಿರುದ್ಧ ನೀಡುವ ಹೇಳಿಕೆಗಳು ಸ್ವೀಕಾರ್ಹವಲ್ಲ. ಪ್ರಧಾನಿ ಸ್ಥಾನವನ್ನು ನಾವು ಗೌರವಿಸಲೇಬೇಕು’ ಎಂದಿದ್ದಾರೆ. ಆದರೆ ‘ಪ್ರಧಾನಿ ಮೋದಿ ಎಲ್ಲವನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು, ಸಕಾಲಿಕವಾಗಿ ವರ್ತಿಸಬೇಕು’ ಎಂದು ಖರ್ಗೆ ಮೋದಿಗೆ ವಿರುದ್ಧವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.