ಸಾರಾಂಶ
ನವದೆಹಲಿ : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿ ವಿದೇಶಕ್ಕೆ ‘ಪರಾರಿ’ ಆಗಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಿದೇಶಾಂಗ ಸಚಿವಾಲಯವು ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡುವ ಕುರಿತು ಶೋಕಾಸ್ ನೋಟಿಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಪ್ರಕರಣದಲ್ಲಿ ಮೊದಲ ಬಾರಿ ಕೇಂದ್ರ ಕಠಿಣ ಕ್ರಮ ಅನುಸರಿಸಿದ್ದು, ಸಂಸದನಿಗೆ ಇದು ಸಂಕಷ್ಟ ತಂದೊಡ್ಡಬಹುದು ಎಂದು ವಿಶ್ಲೇಷಿಸಲಾಗಿದೆ.
ಪ್ರಜ್ವಲ್ ಅವರಿಗೆ ಇ-ಮೇಲ್ ಮೂಲಕ ನೋಟಿಸ್ ನೀಡಲಾಗಿದ್ದು, ‘ರಾಜ್ಯ ಸರ್ಕಾರದ ಕೋರಿಕೆಯಂತೆ ಏಕೆ ನಿಮ್ಮ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡಲು ಅಗತ್ಯ ಕ್ರಮ ಕೈಗೊಳ್ಳಬಾರದು?’ ಎಂದು ಪ್ರಶ್ನಿಸಲಾಗಿದೆ ಮೂಲಗಳು ತಿಳಿಸಿವೆ.
‘ಇದು ಪ್ರಜ್ವಲ್ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದತಿಯ ಮೊದಲ ಹೆಜ್ಜೆಯಾಗಿದೆ. ಒಂದು ವೇಳೆ ಅವರ ಪಾಸ್ಪೋರ್ಟ್ ರದ್ದಾದರೆ ಅವರು ವಿದೇಶದಲ್ಲಿ ನೆಲೆಸುವುದು ಕಾನೂನುಬಾಹಿರವಾಗಲಿದೆ. ಆಗ ಅವರು ಯಾವ ದೇಶದಲ್ಲಿದ್ದಾರೋ ಆ ದೇಶದ ಸರ್ಕಾರ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ’ ಎಂದು ಮೂಲಗಳು ಹೇಳಿವೆ.
ತಮ್ಮ ಮೇಲೆ ಲೈಂಗಿಕ ಹಗರಣ ಆರೋಪ ಕೇಳಿ ಬಂದ ಕಾರಣ ಪ್ರಜ್ವಲ್ ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ ನಡೆದ ಮರುದಿನ ಜರ್ಮನಿಗೆ ತೆರಳಿದ್ದಾರೆ. ಬಳಿಕ ಅವರ ಮೇಲೆ ಕರ್ನಾಟಕದ ವಿಶೇಷ ತನಿಖಾ ತಂಡ (ಎಸ್ಐಟಿ) ಶಿಫಾರಸಿನ ಮೇರೆಗೆ ಮೇಲೆ ಬ್ಲೂಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಆದರೂ ಅವರು ಇರುವ ನಿಖರ ಸ್ಥಳ ಪತ್ತೆ ಆಗಿಲ್ಲ.
ಬಳಿಕ ಪ್ರಜ್ವಲ್ ಅವರ ಪಾಸ್ಪೋರ್ಟ್ ಅಮಾನ್ಯ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದು ವಿನಂತಿಸಿದ್ದರು. ವಿದೇಶಾಂಗ ಸಚಿವಾಲಯಕ್ಕೂ ಕರ್ನಾಟಕ ಸರ್ಕಾರ ಪತ್ರ ಬರೆದಿತ್ತು. ಆ ಪ್ರಕಾರ ಈಗ ನೋಟಿಸ್ ನೀಡಲಾಗಿದೆ.