ಸಾರಾಂಶ
‘ಮಿಷನ್ ದಿವ್ಯಾಸ್ತ್ರ’ ಎಂದೇ ಖ್ಯಾತಿ ಪಡೆದಿರುವ ಎಂಐಆರ್ವಿ ತಂತ್ರಜ್ಞಾನದ ಸ್ವದೇಶಿ ಅಗ್ನಿ-5 ಕ್ಷಿಪಣಿ ಯಶಸ್ಸಿನ ಹಿಂದೆ ಶೀನಾ ರಾಣಿ ಎಂಬ ಮಹಿಳಾ ವಿಜ್ಞಾನಿಯ ಅಪಾರ ಶ್ರಮ ಇದೆ.
ನವದೆಹಲಿ: ‘ಮಿಷನ್ ದಿವ್ಯಾಸ್ತ್ರ’ ಎಂದೇ ಖ್ಯಾತಿ ಪಡೆದಿರುವ ಎಂಐಆರ್ವಿ ತಂತ್ರಜ್ಞಾನದ ಸ್ವದೇಶಿ ಅಗ್ನಿ-5 ಕ್ಷಿಪಣಿ ಯಶಸ್ಸಿನ ಹಿಂದೆ ಶೀನಾ ರಾಣಿ ಎಂಬ ಮಹಿಳಾ ವಿಜ್ಞಾನಿಯ ಅಪಾರ ಶ್ರಮ ಇದೆ. ಶೀನಾ ರಾಣಿ 1999ರಿಂದಲೇ ಅಗ್ನಿ ಕ್ಷಿಪಣಿ ಅಭಿವೃದ್ಧಿಪಡಿಸುವ ಯೋಜನೆಯಲ್ಲಿದ್ದು, ಇತ್ತೀಚಿನ ಯಶಸ್ಸಿಗೆ ಪ್ರಮುಖ ಕಾರಣಕರ್ತೆ ಆಗಿದ್ದಾರೆ.
ಶೀನಾ ಅವರು ತಿರುವನಂತಪುರದ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿ ಬಳಿಕ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದರು. 1998ರಲ್ಲಿ ಪೋಖ್ರಣ್ ಅಣ್ವಸ್ತ್ರ ಪರೀಕ್ಷೆಯ ಬಳಿಕ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ(ಡಿಆರ್ಡಿಒ) ಪ್ರವೇಶ ಪಡೆದಿದ್ದರು.ಬಳಿಕ ಅಗ್ನಿ ಸರಣಿಯ ಕ್ಷಿಪಣಿಯ ತಯಾರಿಕೆ, ಉಡಾವಣೆ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಕೆಲಸ ಮಾಡಿ ಶಕ್ತಿಕೇಂದ್ರದ ಇಂಧನ ಎಂದೇ ಖ್ಯಾತಿ ಗಳಿಸಿದ್ದಾರೆ. ಪ್ರಸ್ತುತ ಅವರು ಹೈದರಾಬಾದ್ನ ಡಿಆರ್ಡಿಒ ಸುಧಾರಿತ ಸಲಕರಣೆಗಳ ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಲಾಂ, ಅಗ್ನಿಪುತ್ರಿ ಪ್ರೇರಣೆ:ಭಾರತದ ಅಣ್ವಸ್ತ್ರ ಪಿತಾಮಹ ಡಾ। ಎಪಿಜೆ ಅಬ್ದುಲ್ ಕಲಾಂ ಮೊದಲು ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿದ್ದು ನಂತರ ಡಿಆರ್ಡಿಒ ಸೇರಿಕೊಂಡಿದ್ದರು. ಶೀನಾ ಕೂಡ ಕಲಾಂ ರೀತಿ ಸಾರಾಭಾಯಿ ಕೇಂದ್ರದಿಂದ ಡಿಆರ್ಡಿಒಗೆ ಪ್ರಯಾಣ ಬೆಳೆಸಿದ್ದು ಇಲ್ಲಿ ಗಮನಾರ್ಹ,
ಇನ್ನು ಅಗ್ನಿ ಕ್ಷಿಪಣಿಗಳ ನಿರ್ವಹಣೆಯಲ್ಲಿ ಪಳಗಿ ಅಗ್ನಿಪುತ್ರಿ ಎಂದೇ ಖ್ಯಾತಿ ಗಳಿಸಿದ್ದ ಟೆಸ್ಸಿ ಥಾಮಸ್ ಅವರ ಹಾದಿಯಲ್ಲೇ ಸಾಗಿ ಕ್ಷಿಪಣಿ ನಿರ್ವಹಣೆ ಮಾಡುತ್ತಿರುವುದಾಗಿ ಶೀನಾ ತಿಳಿಸಿದ್ದಾರೆ.