ಸಾರಾಂಶ
ಶಾಂಘೈ ಸಹಕಾರ ಸಂಘಟನೆ’ (ಎಸ್ಸಿಒ) ಶೃಂಗಸಭೆ - ಭಾರತದ ಪರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾಗಿ ಆಗಲಿದ್ದು, ಪಾಕಿಸ್ತಾನಕ್ಕೆ 10 ವರ್ಷದಲ್ಲಿ ಭೇಟಿ ನೀಡುತ್ತಿರುವ ಭಾರತದ ಮೊದಲ ವಿದೇಶಾಂಗ ಸಚಿವ ಎನ್ನಿಸಿಕೊಳ್ಳಲಿದ್ದಾರೆ.
ಇಸ್ಲಾಮಾಬಾದ್: ಒಂಬತ್ತು ದೇಶಗಳ ಒಕ್ಕೂಟವಾದ ‘ಶಾಂಘೈ ಸಹಕಾರ ಸಂಘಟನೆ’ (ಎಸ್ಸಿಒ) ಶೃಂಗಸಭೆ ಮಂಗಳವಾರ ಹಾಗೂ ಬುಧವಾರ ಇಸ್ಲಾಮಾಬಾದ್ನಲ್ಲಿ ನಡೆಯಲಿದೆ. ಇದರಲ್ಲಿ ಭಾರತದ ಪರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾಗಿ ಆಗಲಿದ್ದು, ಪಾಕಿಸ್ತಾನಕ್ಕೆ 10 ವರ್ಷದಲ್ಲಿ ಭೇಟಿ ನೀಡುತ್ತಿರುವ ಭಾರತದ ಮೊದಲ ವಿದೇಶಾಂಗ ಸಚಿವ ಎನ್ನಿಸಿಕೊಳ್ಳಲಿದ್ದಾರೆ.
ಈ ಮೊದಲೇ ಹೇಳಿದಂತೆ ಜೈಶಂಕರ್ ಅವರು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರೊಂದಿಗಾಗಲೀ ಅಥವಾ ಅಲ್ಲಿನ ವಿದೇಶಾಂಗ ಸಚಿವರ ಜತೆಗಾಗಲಿ ದ್ವಿಪಕ್ಷೀಯ ಮಾತುಕತೆ ನಡೆಸುವುದಿಲ್ಲ. ಆದರೆ ಷರೀಫ್ ಹಮ್ಮಿಕೊಂಡ ಔತಣಕೂಟದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಭಾರತ-ಪಾಕ್ ನಡುವಿನ ಗಡಿ ವಿವಾದ ದ್ವಿಪಕ್ಷೀಯ ಆಗಿರುವ ಕಾರಣ ಶೃಂಗದ ವೇಳೆ ಆ ಬಗ್ಗೆ ಪಾಕ್ ಜತೆ ಯಾವುದೇ ಮಾತುಕತೆ ನಡೆಸುವುದಿಲ್ಲ. ಆದರೆ ಭಾರತ, ಪಾಕಿಸ್ತಾನ, ರಷ್ಯಾ, ಚೀನಾ, ಇರಾನ್ ಮತ್ತು ಮಧ್ಯ ಏಷ್ಯಾದ 4 ದೇಶಗಳು ಸದಸ್ಯ ಆಗಿರುವ ಈ ಒಕ್ಕೂಟಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಮಾತ್ರ ಪಾಕ್ಗೆ ತೆರಳಲಿದ್ದು, ಭಾಷಣ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.
ಇಸ್ಲಾಮಾಬಾದ್ಗೆ ಮಂಗಳವಾರ ಸಂಜೆ ಜೈಶಂಕರ್ ಆಗಮಿಸಲಿದ್ದಾರೆ. ಇಲ್ಲಿ 24 ತಾಸಿಗಿಂತ ಹೆಚ್ಚು ಸಮಯ ಕಳೆಯುವುದಿಲ್ಲ. ಮಂಗಳವಾರ ಮಧ್ಯಾಹ್ನ ಶೃಂಗ ಮುಗಿಸಿಕೊಂಡ ಭಾರತಕ್ಕೆ ವಾಪಸಾಗುವ ಸಾಧ್ಯತೆ ಇದೆ ಎಂದು ಅವು ಹೇಳಿವೆ.
ಶೃಂಗದಲ್ಲಿ ಎಲ್ಲ ಸದಸ್ಯ ದೇಶಗಳು ಆರ್ಥಿಕತೆ, ವ್ಯಾಪಾರ, ಪರಿಸರ, ಸಾಮಾಜಿಕ-ಸಾಂಸ್ಕೃತಿಕ ಸಂಬಂಧ ಹಾಗೂ ಸದಸ್ಯ ದೇಶಗಳ ನಡುವೆ ಸಹಕಾರ ಹೆಚ್ಚಳದ ಬಗ್ಗೆ ಮಾತುಕತೆ ನಡೆಸುವ ನಿರೀಕ್ಷೆ ಇದೆ.
ಚೀನಾ ಪರವಾಗಿ ಅಲ್ಲಿನ ಪ್ರಧಾನಿ ಲೀ ಖಿಯಾಂಗ್ ಶೃಂಗದಲ್ಲಿ ಪಾಲ್ಗೊಂಡಿದ್ದಾರೆ. ಪಾಕ್ ಪ್ರಧಾನಿ ಷರೀಫ್ ಅಧ್ಯಕ್ಷತೆ ವಹಿಸಲಿದ್ದಾರೆ.