ಸಾರಾಂಶ
ಮಂಡ್ಲಾ (ಮ.ಪ್ರ): ಫ್ರಿಡ್ಜ್ನಲ್ಲಿ ಗೋಮಾಂಸ ಹಾಗೂ ಕೊಠಡಿಗಳಲ್ಲಿ ದನದ ಮೂಳೆ ಹಾಗೂ ಚರ್ಮಗಳನ್ನು ಶೇಖರಿಸಿಟ್ಟಿದ್ದ 11 ಜನರ ಮನೆಯನ್ನು ಸರ್ಕಾರವು ಧ್ವಂಸ ಮಾಡಿದೆ . ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಾರಣ ನೀಡಿ ಇವರ ಮನೆಯನ್ನು ಕೆಡವಲಾಗಿದೆ.
ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಅಕ್ರಮ ಗೋಮಾಂಸದ ವಿರುದ್ಧ ಕಾರ್ಯಾಚರಣೆ ತೀವ್ರಗೊಂಡಿದೆ. ಇದರ ಭಾಗವಾಗಿ ಭೈನ್ವಾಹಿ ಎಂಬಲ್ಲಿ ದನಗಳನ್ನು ಕಡಿಯಲು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕ ಬಳಿಕ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಆರೋಪಿಗಳ ಮನೆಯ ಹಿಂಭಾಗದಲ್ಲಿ 150 ಗೋವುಗಳನ್ನು ಕಟ್ಟಿಹಾಕಿದ್ದನ್ನು ಪತ್ತೆಹಚ್ಚಿದ್ದಾರೆ. ಬಳಿಕ ಮನೆಯ ಬೀಗ ಒಡೆದು ಒಳನುಗ್ಗಿದಾಗ ಮನೆಯ ಫ್ರಿಡ್ಜ್ನಲ್ಲಿ ಗೋಮಾಂಸ, ಕೊಠಡಿಯಲ್ಲಿ, ದನದ ಚರ್ಮ, ಮೂಳೆ ಹಾಗೂ ಬೊಜ್ಜು ಸಂಗ್ರಹಿಸಿಟ್ಟಿರುವುದು ಕಂಡುಬಂದಿದೆ. ಕೂಡಲೇ ಅವುಗಳನ್ನು ವಶಪಡಿಸಿಕೊಂಡ ಪೊಲೀಸರು, ದನಗಳನ್ನು ಗೋಶಾಲೆಗೆ ಸೇರಿಸಿ ಮನೆಯನ್ನು ಧ್ವಂಸ ಮಾಡಿದ್ದಾರೆ. ‘ಸರ್ಕಾರಿ ಜಾಗ ಒತ್ತುವರಿ ಮಾಡಿ ಮನೆಗಳನ್ನು ನಿರ್ಮಿಸಿದ ಕಾರಣ ಅವನ್ನು ಕೆಡವಲಾಗಿದೆ’ ಎಂದಿದ್ದಾರೆ.
ಈ ನಡುವೆ, ‘ಮುಸ್ಲಿಂ ಸಮುದಾಯಕ್ಕೆ ಸೇರಿರುವ ಎಲ್ಲ 11 ಆರೋಪಿಗಳ ಪೈಕಿ ಕೇವಲ ಒಬ್ಬ ಮಾತ್ರ ಸಿಕ್ಕಿದ್ದು, ಉಳಿದ 10 ಮಂದಿಗಾಗಿ ಶೋಧ ಮುಂದುವರೆದಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.