ರಾಜ್ಯದ 70 ರೈತರು ಮ.ಪ್ರದೇಶದಲ್ಲಿ ವಶ

| Published : Feb 13 2024, 12:49 AM IST / Updated: Feb 13 2024, 02:42 PM IST

ಸಾರಾಂಶ

ದೆಹಲಿಯಲ್ಲಿ ಮಂಗಳವಾರ ನಡೆಸಲು ಉದ್ದೇಶಿಸಿರುವ ರೈತರ ಬೃಹತ್‌ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ ದೆಹಲಿಗೆ ತೆರಳುತ್ತಿದ್ದ ಸುಮಾರು 70 ರೈತರನ್ನು ಸೋಮವಾರ ನಸುಕಿನ ಜಾವ ಮಧ್ಯಪ್ರದೇಶದ ಭೋಪಾಲ್‌ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ನವದೆಹಲಿ/ಮೈಸೂರು/ಭೋಪಾಲ್‌

ದೆಹಲಿಯಲ್ಲಿ ಮಂಗಳವಾರ ನಡೆಸಲು ಉದ್ದೇಶಿಸಿರುವ ರೈತರ ಬೃಹತ್‌ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ ದೆಹಲಿಗೆ ತೆರಳುತ್ತಿದ್ದ ಸುಮಾರು 70 ರೈತರನ್ನು ಸೋಮವಾರ ನಸುಕಿನ ಜಾವ ಮಧ್ಯಪ್ರದೇಶದ ಭೋಪಾಲ್‌ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಈ ಕ್ರಮ ಖಂಡಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ, ರೈತನಾಯಕ ಕುರುಬೂರು ಶಾಂತಕುಮಾರ್‌ ಅವರ ಪತ್ನಿ ಪದ್ಮಾ ಸೇರಿ ಹಲವರು ಗಾಯಗೊಂಡಿದ್ದಾರೆ. ಈ ಮಧ್ಯೆ, ರೈತರ ವಶ ವಿರೋಧಿಸಿ, ಮೈಸೂರಿನ ಗನ್‌ ಹೌಸ್‌ ಬಳಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದವರು ಪ್ರತಿಭಟನೆ ನಡೆಸಿದರು.

‘ದೆಹಲಿ ಚಲೋ’ದಲ್ಲಿ ಪಾಲ್ಗೊಳ್ಳಲು ಕುರುಬೂರು ಶಾಂತಕುಮಾರ್‌ ಪತ್ನಿ ಪದ್ಮಾ ಸೇರಿ ಕರ್ನಾಟಕದಿಂದ ಸುಮಾರು 70 ರೈತರು ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಭೋಪಾಲ್‌ನಲ್ಲಿ ರೈಲು ನಿಂತೊಡನೆ, ರೈಲ್ವೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದು, ದೆಹಲಿಗೆ ಪ್ರಯಾಣ ಬೆಳೆಸದಂತೆ ತಡೆದರು. ಪೊಲೀಸರ ಈ ಕ್ರಮ ಖಂಡಿಸಿ, ರೈತರು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ, ಅವರನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಲಾಯಿತು.

ಈ ವೇಳೆ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಧಾರವಾಡ ಜಿಲ್ಲಾ ಕಾರ್ಯದರ್ಶಿ ಪರಶುರಾಮ್‌ ಎತ್ತಿನಗುಡ್ಡ ಮಾತನಾಡಿ, ಪೊಲೀಸರು ನಮ್ಮನ್ನು ವಿನಾಕಾರಣ ಬಂಧಿಸಿದ್ದಾರೆ. ನಮ್ಮ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಬಿಸಿ ನೀರನ್ನೂ ಕೊಡದೆ ಚಳಿಯಲ್ಲಿ ಕೊರೆಯುವ ಹಾಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಮಧ್ಯೆ, ರೈತರ ಬಂಧನ ಖಂಡಿಸಿ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದವರು ಮೈಸೂರಿನ ಗನ್ ಹೌಸ್ ಬಳಿ ರಸ್ತೆ ತಡೆದು, ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.