ಮೇ 1ರ ಬುದ್ಧ ಪೂರ್ಣಿಮೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಮೈಸೂರು ಜಿಲ್ಲೆಯ ಬೈಲಕುಪ್ಪೆಯ ಬೌದ್ಧ ವಿಹಾರವನ್ನು ಸ್ಮರಿಸಿ, ಪ್ರಕೃತಿ ರಕ್ಷಣೆಗೆ ಅದು ನಡೆಸುತ್ತಿರುವ ಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೈಲಕುಪ್ಪೆಯಲ್ಲಿನ 100 ಎಕರೆ ಕಾಡಿನ ಬಗ್ಗೆ ಪ್ರಶಂಸಿಸಿದ್ದಾರೆ.

ನವದೆಹಲಿ: ಮೇ 1ರ ಬುದ್ಧ ಪೂರ್ಣಿಮೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಮೈಸೂರು ಜಿಲ್ಲೆಯ ಬೈಲಕುಪ್ಪೆಯ ಬೌದ್ಧ ವಿಹಾರವನ್ನು ಸ್ಮರಿಸಿ, ಪ್ರಕೃತಿ ರಕ್ಷಣೆಗೆ ಅದು ನಡೆಸುತ್ತಿರುವ ಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೈಲಕುಪ್ಪೆಯಲ್ಲಿನ 100 ಎಕರೆ ಕಾಡಿನ ಬಗ್ಗೆ ಪ್ರಶಂಸಿಸಿದ್ದಾರೆ.

ತಮ್ಮ ಮಾಸಿಕ ಮನ್‌ ಕೀ ಬಾತ್‌ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮೇನಲ್ಲಿ ನಾವು ಬುದ್ಧ ಪೂರ್ಣಿಮೆ ಆಚರಿಸುತ್ತೇವೆ. ಎಲ್ಲ ದೇಶವಾಸಿಗಳಿಗೆ ನಾನು ಅನಂತ ಶುಭಾಶಯ ಕೋರುತ್ತೇನೆ. ಭಗವಾನ್ ಗೌತಮ ಬುದ್ಧನ ಜೀವನ ಸಂದೇಶವು ಇಂದಿಗೂ ಪ್ರಸ್ತುತ’ ಎಂದು ಹೇಳಿದ್ದಾರೆ. ಅಲ್ಲದೆ ಬೌದ್ಧ ಸಂಪ್ರದಾಯವು ಹೇಗೆ ಪ್ರಕೃತಿಯೊಂದಿಗೆ ಸಂಬಂಧ ಹೊಂದಿದೆ ಎಂಬುದನ್ನು ಬೈಲಕುಪ್ಪೆಯ ಬೌದ್ಧ ವಿಹಾರದ ಉದಾಹರಣೆಯೊಂದಿಗೆ ವಿವರಿಸಿದ್ದಾರೆ.

‘ಬೌದ್ಧ ಸಂಪ್ರದಾಯವು ನಮಗೆ ಪ್ರಕೃತಿಯೊಂದಿಗೆ ಸಂಪರ್ಕ ಹೊಂದುವುದನ್ನು ಕಲಿಸುತ್ತದೆ. ಭಗವಾನ್ ಬುದ್ಧನಿಗೆ ಒಂದು ಮರದ ಕೆಳಗೆ ಜ್ಞಾನೋದಯವಾಯಿತು. ಪ್ರಕೃತಿ ನಮ್ಮ ಜೀವನದ ಅವಿಭಾಜ್ಯ ಅಂಗ. ದೇಶಾದ್ಯಂತ ಇಂತಹ ಯತ್ನ ನಡೆಯುತ್ತಲೇ ಇವೆ. ಕರ್ನಾಟಕದಲ್ಲಿರುವ ಕರ್ಮ ವಿಹಾರವು ಒಂದು ಉತ್ತಮ ಉದಾಹರಣೆ. ಈ ವಿಹಾರವು 100 ಎಕರೆ ವಿಸ್ತಾರವಾದ ರೋಮಾಂಚಕ ಅರಣ್ಯ. ಈ ಕಾಡಿನಲ್ಲಿ 700ಕ್ಕೂ ಹೆಚ್ಚು ಸ್ಥಳೀಯ ಮರಗಳನ್ನು ಸಂರಕ್ಷಿಸಲಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೈಲಕುಪ್ಪೆ ವೈಶಿಷ್ಟ್ಯ:

ಇದು ವಿಶ್ವದ ಅತಿ ದೊಡ್ಡ ಬೌದ್ಧ ವಿಹಾರಗಳಲ್ಲಿ ಒಂದು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ಇದೆ. ಇಲ್ಲಿನ ನಮ್ರೋಲಿಂಗ್‌ ವಿಹಾರದಲ್ಲಿ ಬುದ್ಧನ್‌ ಬಂಗಾರದ ಪ್ರತಿಮೆಗಳು, ಮನೋಹರವಾದ ವರ್ಣಚಿತ್ರಗಳು ಹಾಗೂ ಪ್ರಾರ್ಥನಾ ಮಂದಿರಗಳಿವೆ. 1995ರಲ್ಲಿ ಬೌದ್ಧ ಧರ್ಮಗುರು ಸಮ್ಟೆನ್ಲಿಂಗ್ಪಾ ರಿನ್‌ಪೋಚೆ ಅವರು ಪರಿಸರ ಸಂರಕ್ಷಣೆ ಧ್ಯೇಯದೊಂದಿಗೆ ಪ್ರಾರಂಭಿಸಿದ ಬೋಧಿಸತ್ವ ಟ್ರಸ್ಟ್‌ ಅಡಿ ಇದು ಕಾರ್ಯನಿರ್ವಹಿಸುತ್ತದೆ.

ಬರಡು ಭೂಮಿಯಲ್ಲಿಅರಳಿ ನಿಂತ ಅರಣ್ಯ

ಬೈಲಕುಪ್ಪೆಯು ವಿಶ್ವದ ಅತಿ ದೊಡ್ಡ ಬೌದ್ಧ ವಿಹಾರಗಳಲ್ಲಿ ಒಂದು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ಇದೆ. ಬೌದ್ಧವಿಹಾರ ಪ್ರದೇಶವು 100 ಎಕರೆಗಳಲ್ಲಿ ಹರಡಿದೆ. ಇದನ್ನು 700ಕ್ಕೂ ಹೆಚ್ಚು ಸ್ಥಳೀಯ ಪ್ರಭೇದಗಳ ಮರಗಳನ್ನು ಸಂರಕ್ಷಿಸಿ, ನಳನಳಿಸುವ ಅರಣ್ಯವನ್ನಾಗಿ ಪರಿವರ್ತಿಸಲಾಗಿದೆ. ಧರ್ಮಗುರು ಸಮ್ಟೆನ್ಲಿಂಗ್ಪಾ ರಿನ್‌ಪೋಚೆ ಅವರ ಮಾರ್ಗದರ್ಶನದಲ್ಲಿ, ಬರಡಾಗಿದ್ದ ಭೂಮಿ 100 ಎಕರೆ ಅರಣ್ಯ ಸಂರಕ್ಷಣಾ ವಲಯವಾಗಿ ಪರಿವರ್ತನೆಯಾಗಿದೆ.