ಕಾರ್ಗಿಲ್ ಕದನದ ತಪ್ಪು ನಮ್ಮದೇ: ನವಾಜ್‌ ತಪ್ಪೊಪ್ಪಿಗೆ

| Published : May 29 2024, 12:48 AM IST

ಸಾರಾಂಶ

ಕಾರ್ಗಿಲ್‌ ಕದನ ನಡೆದು 24 ವರ್ಷಗಳು ಕಳೆದ ಬಳಿಕ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ತಮ್ಮಿಂದ ತಪ್ಪಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ.

ಲಾಹೋರ್‌: ಕಾರ್ಗಿಲ್‌ ಕದನ ನಡೆದು 24 ವರ್ಷಗಳು ಕಳೆದ ಬಳಿಕ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ತಮ್ಮಿಂದ ತಪ್ಪಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ ಈ ಘಟನೆಗೆ ಅಂದಿನ ಸೇನಾ ಮುಖ್ಯಸ್ಥ ಪರ್ವೇಜ್‌ ಮುಷರ್ರಫ್‌ ಕಾರಣ ಎಂದು ಹೇಳಿದ್ದಾರೆ.

ಲಾಹೋರ್‌ನಲ್ಲಿ ಪಿಎಂಎಲ್‌-ಎನ್‌ ಪಕ್ಷದ ಅಧ್ಯಕ್ಷ ಹುದ್ದೆಯನ್ನು ಸ್ವೀಕರಿಸಿದ ಬಳಿಕ ನವಾಜ್‌ ಮಾತನಾಡಿದರು. ‘ನಾನು ಪ್ರಧಾನಿಯಾಗಿದ್ದಾಗ 1998ರ ಮೇ 28ರಂದು ನಾವು 5 ಅಣು ಬಾಂಬ್‌ ಪರೀಕ್ಷೆ ನಡೆಸಿದೆವು. ಇದಾದ ಬಳಿಕ 1999ರ ಫೆ.21ರಂದು ಭಾರತದ ಪ್ರಧಾನ ಮಂತ್ರಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ‘ಸಾಹೇಬ್‌’ ಅವರು ಉಭಯ ದೇಶಗಳ ನಡುವೆ ಶಾಂತಿ ಸುವ್ಯವಸ್ಥೆ ಕಾಪಾಡುವ ಸದುದ್ದೇಶದಿಂದ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಇದಾದ ಕೆಲವೇ ತಿಂಗಳಲ್ಲಿ ಕಾರ್ಗಿಲ್‌ ದುರಂತ ಸಂಭವಿಸಿತು. ಇದಕ್ಕೆ ಅಂದಿನ ಸೇನಾ ಮುಖ್ಯಸ್ಥ ಮುಷರಫ್‌ ಕಾರಣರಾಗಿದ್ದರು ಎಂದು ಹೇಳಿದರು.

ಅಲ್ಲದೇ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಟೀಕಿಸಿದ ನವಾಜ್‌,‘ನಾವು ನಡೆಸಿದ ಅಣು ಪರೀಕ್ಷೆಯನ್ನು ತಡೆಯಲು ಅಮೆರಿಕದ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್‌ 41 ಸಾವಿರ ಕೋಟಿ ರು. (5 ಬಿಲಿಯನ್‌ ಡಾಲರ್‌) ನೀಡಲು ಮುಂದಾಗಿದ್ದರು. ಆದರೆ ನಾನು ನಿರಾಕರಿಸಿದ್ದೆ. ಅದೇ ಇಮ್ರಾನ್‌ ಆಗಿದ್ದರೆ ಸ್ವೀಕರಿಸುತ್ತಿದ್ದರು’ ಎಂದು ಕಿಡಿಕಾರಿದರು.