ಸಾರಾಂಶ
ಯಾವುದೇ ಪದ ಬಳಕೆಗೆ ನಮ್ಮ ತಿರಸ್ಕಾರ ಇಲ್ಲ ಎಂದು ಎನ್ಸಿಇಆರ್ಟಿ ಮುಖ್ಯಸ್ಥ ಸಕ್ಲಾನಿ ಸ್ಪಷ್ಟಪಡಿಸಿದ್ದು, ‘ಭಾರತ’ ಪದ ಮಾತ್ರ ಬಳಸಬೇಕೆಂಬ ಮಾಡಿದ್ದ ಶಿಫಾರಸು ತಿರಸ್ಕಾರವಾಗಿದೆ.
ನವದೆಹಲಿ : ‘ನಮ್ಮ ಸಂವಿಧಾನ ಭಾರತ ಮತ್ತು ಇಂಡಿಯಾ ಎಂಬ ಎರಡೂ ಪದಗಳನ್ನು ಹೊಂದಿದೆ. ಹೀಗಾಗಿ ಪಠ್ಯ ಪುಸ್ತಕಗಳಲ್ಲಿ ಎರಡೂ ಪದಗಳನ್ನು ಬಳಸುತ್ತೇವೆ’ ಎಂದು ಎನ್ಸಿಇಆರ್ಟಿ ಮುಖ್ಯಸ್ಥ ದಿನೇಶ್ ಪ್ರಸಾದ್ ಸಕ್ಲಾನಿ ಸ್ಪಷ್ಟಪಡಿಸಿದ್ದಾರೆ.
ಎನ್ಸಿಇಆರ್ಟಿ ರಚಿಸಿದ್ದ ಸಮಾಜ ವಿಜ್ಞಾನ ಕುರಿತ ತಜ್ಞರ ಸಮಿತಿ ತನ್ನ ವರದಿಯಲ್ಲಿ, ಪಠ್ಯದಲ್ಲಿ ಇಂಡಿಯಾ ಪದ ಕೈಬಿಟ್ಟು ಭಾರತ ಪದ ಮಾತ್ರ ಬಳಸಬೇಕು ಎಂದು ಶಿಫಾರಸು ಮಾಡಿತ್ತು.
ಅದರ ಬೆನ್ನಲ್ಲೇ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಎನ್ಸಿಇಆರ್ಟಿಯ ನಿಲುವು ಸ್ಪಷ್ಟಪಡಿಸಿದಿರುವ ಸಕ್ಲಾನಿ, ‘ನಮ್ಮ ಸಂವಿಧಾನ ಎರಡೂ ಪದಗಳನ್ನು ಹೊಂದಿದೆ. ಹೀಗಿರುವಾಗ ಅದರ ಕುರಿತು ನಾವು ಚರ್ಚೆ ನಡೆಸುವುದೇ ಅನಗತ್ಯ. ಎಲ್ಲಿ ಭಾರತ ಪದ ಹೊಂದಿಕೆಯಾಗುವುದೋ ಅದನ್ನು ಬಳಸುತ್ತೇವೆ, ಎಲ್ಲಿ ಇಂಡಿಯಾ ಪದ ಹೊಂದಿಕೆಯಾಗುತ್ತದೋ ಅದನ್ನು ಬಳಸುತ್ತೇವೆ. ಈ ಎರಡೂ ಪದಗಳ ಪೈಕಿ ಯಾವುದರ ಬಗ್ಗೆಯೂ ನಮಗೆ ತಿರಸ್ಕಾರ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.