ಸಾರಾಂಶ
2026-27ರಲ್ಲಿ ಆರಂಭಿಸಲು ಉದ್ದೇಶಿಸಲಾಗಿರುವ ದೇಶದ 16ನೇ ಜನಗಣತಿಗೆ ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ.
ನವದೆಹಲಿ : 2026-27ರಲ್ಲಿ ಆರಂಭಿಸಲು ಉದ್ದೇಶಿಸಲಾಗಿರುವ ದೇಶದ 16ನೇ ಜನಗಣತಿಗೆ ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ 2021ರಲ್ಲಿ ನಡೆಯಬೇಕಿದ್ದ ಹಾಗೂ ಕೊರೋನಾ ಕಾರಣ ಮುಂದೂಡಿಕೆ ಆಗಿದ್ದ ಜನಗಣತಿಗೆ ಕೊನೆಗೂ ಮುಹೂರ್ತ ಕೂಡಿಬಂದಂತಾಗಿದೆ.
ಆದರೆ ಅಧಿಸೂಚನೆಯಲ್ಲಿ ಸರ್ಕಾರ ಇತ್ತೀಚೆಗೆ ಹೇಳಿದ್ದ ‘ಜಾತಿಗಣತಿ’ ಪದದ ಉಲ್ಲೇಖವಿಲ್ಲ. ಇದು ಚರ್ಚೆಗೆ ನಾಂದಿ ಹಾಡಿದೆ. ಇದೇ ವಿಷಯ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವು, ‘ಮೋದಿ ಸರ್ಕಾರ ಯೂ-ಟರ್ನ್ ಹೊಡೆದಿದೆ’ ಎಂದು ಟೀಕಿಸಿದೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಗೃಹ ಸಚಿವಾಲಯ, ‘ಜಾತಿಗಣತಿಯು ಜನಗಣತಿಯ ಭಾಗವಾಗಿರಲಿದೆ. ಆದರೆ ಈ ಬಗ್ಗೆ ನಡೆದಿರುವ ಅಪಪ್ರಚಾರಕ್ಕೆ ಕಿವಿಗೊಡಬಾರದು’ ಎಂದಿದೆ.
2 ಹಂತದಲ್ಲಿ ಗಣತಿ:
‘ಜನಗಣತಿಯು ಹಿಮಾಚಲ ಪ್ರದೇಶ, ಲಡಾಖ್ನಂತಹ ಹಿಮಾಚ್ಛಾದಿತ ಪ್ರದೇಶಗಳಲ್ಲಿ 2026ರ ಅ.1ರಿಂದ ಹಾಗೂ ಕರ್ನಾಟಕ ಸೇರಿದಂತೆ ದೇಶದ ಉಳಿದ ಭಾಗಗಳಲ್ಲಿ 2027ರ ಮಾ.1ರಿಂದ ನಡೆಯಲಿದೆ. ದೇಶಾದ್ಯಂತ ಜನಸಂಖ್ಯಾ ಸಂಬಂಧಿತ ದತ್ತಾಂಶವನ್ನು ಸಂಗ್ರಹಿಸಲು ಸರ್ಕಾರಕ್ಕೆ 13,000 ಕೋಟಿ ರು.ಗಳಿಗೂ ಹೆಚ್ಚು ವೆಚ್ಚವಾಗುವ ನಿರೀಕ್ಷೆಯಿದೆ. ಡಿಜಿಟಲ್ ಸಾಧನಗಳನ್ನು ಹೊಂದಿದ ಸುಮಾರು 34 ಲಕ್ಷ ಗಣತಿದಾರರು (ಎನುಮರೇಟರ್ಸ್) ಹಾಗೂ ಸುಮಾರು 1.3 ಲಕ್ಷ ಗಣತಿ ಕಾರ್ಯಕರ್ತರು (ಸೆನ್ಸಸ್ ಫಂಕ್ಷನರೀಸ್) ಕೆಲಸ ಮಾಡಲಿದ್ದಾರೆ. ಜನರಿಗೆ ಸ್ವಯಂ-ಗಣತಿಯ ಅವಕಾಶ ಸಹ ಲಭ್ಯವಾಗುವಂತೆ ಮಾಡಲಾಗುತ್ತದೆ’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
‘ಗಣತಿಯು 2 ಹಂತಗಳಲ್ಲಿ ನಡೆಯುತ್ತದೆ. ಮೊದಲ ಹಂತದಲ್ಲಿ, ಪ್ರತಿ ಮನೆಯ ಸ್ಥಿತಿಗತಿ, ಆಸ್ತಿ ಹಾಗೂ ಮೂಲಸೌಕರ್ಯಗಳ ಮಾಹಿತಿ ಪಡೆಯಲಾಗುವುದು. 2ನೇ ಹಂತದಲ್ಲಿ, ಪ್ರತಿ ವ್ಯಕ್ತಿಯ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಇತರ ಸ್ಥಿತಿಗತಿಗಳ ಮಾಹಿತಿ ಪಡೆಯಲಾಗುವುದು’ ಎಂದು ತಿಳಿಸಲಾಗಿದೆ.
ಜಾತಿಗಣತಿ ಉಲ್ಲೇಖವಿಲ್ಲ:
‘ಜನಗಣತಿ ಜತೆ ಜಾತಿಗಣತಿಯನ್ನೂ ನಡೆಸಲಾಗುವುದು’ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಆದರೆ ಅಧಿಕೃತ ಅಧಿಸೂಚನೆಯಲ್ಲಿ ‘ಜಾತಿಗಣತಿ’ ಪದದ ಉಲ್ಲೇಖವಿಲ್ಲ. ಇದನ್ನು ಕಾಂಗ್ರೆಸ್ ಪ್ರಮುಖವಾಗಿ ಪ್ರಸ್ತಾಪಿಸಿದ್ದು, ‘ಮೋದಿ ಸರ್ಕಾರ ಯೂ-ಟರ್ನ್ ಹೊಡೆದಿದೆ’ ಎಂದು ಕಿಡಿಕಾರಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಜಾತಿ ಜನಗಣತಿಯ ಬೇಡಿಕೆ ಇಟ್ಟಿದ್ದಕ್ಕಾಗಿ ಮೋದಿಯವರು ಕಾಂಗ್ರೆಸ್ ನಾಯಕರನ್ನು ನಗರ ನಕ್ಸಲರು ಎಂದು ಕರೆದಿದ್ದರು. ಜಾತಿ ಜನಗಣತಿ ಪರಿಕಲ್ಪನೆಯನ್ನು ಮೋದಿ ಸರ್ಕಾರವು ಸಂಸತ್ತಿನಲ್ಲಿ ಮತ್ತು ಸುಪ್ರೀಂ ಕೋರ್ಟ್ನಲ್ಲಿ ತಿರಸ್ಕರಿಸಿತ್ತು. ಆದರೆ ಜಾತಿಗಣತಿ ನಡೆಸುವುದಾಗಿ 47 ದಿನಗಳ ಹಿಂದೆ ತಾನೇ ಘೋಷಿಸಿತ್ತು. ಈಗ ಪ್ರಕಟಿಸಿರುವ ಅಧಿಸೂಚನೆಯಲ್ಲಿ ಜಾತಿಗಣತಿಯ ಉಲ್ಲೇಖವಿಲ್ಲ. ಯೂಟರ್ನ್ಗಳ ಉಸ್ತಾದರು (ಮೋದಿ) ಮತ್ತೆ ಯೂಟರ್ನ್ ಹೊಡೆದಿದ್ದಾರೆಯೇ?’ ಎಂದು ಕಿಡಿಕಾರಿದ್ದಾರೆ.
ಆದರೆ ಕೇಂದ್ರ ಗೃಹ ಸಚಿವಾಲಯದ ವಕ್ತಾರರು ಸ್ಪಷ್ಟನೆ ನೀಡಿದ್ದು, ‘ಜನಗಣತಿ ನಡೆಸುವ ಅಧಿಸೂಚನೆಯನ್ನು ಇಂದು ಅಧಿಕೃತ ಗೆಜೆಟ್ನಲ್ಲಿ ಪ್ರಕಟಿಸಲಾಗಿದೆ. ಜನಗಣತಿಯು ಜಾತಿ ಎಣಿಕೆಯನ್ನು ಸಹ ಒಳಗೊಂಡಿರುತ್ತದೆ. ಆದಾಗ್ಯೂ, ಅಧಿಸೂಚನೆಯಲ್ಲಿ ಜಾತಿ ಜನಗಣತಿಯ ಉಲ್ಲೇಖವಿಲ್ಲ ಎಂದು ಕೆಲವು ದಾರಿತಪ್ಪಿಸುವ ಮಾಹಿತಿಯನ್ನು ಹರಡಲಾಗುತ್ತಿದೆ. ಜನಗಣತಿಯಲ್ಲಿ ಜಾತಿ ಎಣಿಕೆಯೂ ಇರುತ್ತದೆ ಎಂದು ಈಗಾಗಲೇ 2025ರ ಏಪ್ರಿಲ್ 30, ಜೂನ್ 4 ಮತ್ತು ಜೂನ್ 15 ರ ಪತ್ರಿಕಾ ಪ್ರಕಟಣೆಗಳಲ್ಲಿ ಉಲ್ಲೇಖಿಸಲಾಗಿದೆ’ ಎಂದು ತಿಳಿಸಿದ್ದಾರೆ.
2021ರಲ್ಲೇ ನಡೆಯಬೇಕಿತ್ತು:
ಜನಗಣತಿಯನ್ನು ಕೊನೇ ಸಲ ನಡೆಸಿದ್ದು 2011ರಲ್ಲಿ. ಆ ಬಳಿಕ 16ನೇ ಗಣತಿಯನ್ನು 2021ರಲ್ಲಿ ನಡೆಸಲು ನಿರ್ಧರಿಸಲಾಗಿತ್ತು. 2020ರ ಏ.1ರಿಂದಲೇ ಫೀಲ್ಡ್ ವರ್ಕ್ ನಡೆಸಲು ಸಿದ್ಧತೆಯಾಗಿತ್ತು. ಆದರೆ ಕೊರೋನಾ ಸಾಂಕ್ರಾಮಿಕದ ಕಾರಣ ಗಣತಿ ಮುಂದೂಡಿಕೆಯಾಗಿ, 2026-27ಕ್ಕೆ ಬಂದು ತಲುಪಿದೆ.
ಜಾತಿ ಗಣತಿ ವರದಿ ಕೈಬಿಟ್ಟ ಕರ್ನಾಟಕ ಸರ್ಕಾರ ವಿರುದ್ಧ ಕೇಂದ್ರದ ಆಕ್ರೋಶ
165 ಕೋಟಿ ರು. ಖರ್ಚು ಮಾಡಿ ತಯಾರಿಸಿದ್ದ ಜಾತಿಗಣತಿ ವರದಿಯನ್ನು ಬದಿಗೊತ್ತಿ ಹೊಸ ಜಾತಿಗಣತಿ ನಡೆಸುವುದಾಗಿ ಘೋಷಿಸಿರುವ ಕರ್ನಾಟಕ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಭೂಪೇಂದ್ರ ಯಾದವ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಹೊಸ ಜಾತಿಗಣತಿಯ ನಿರ್ಧಾರ ನಮ್ಮ ಸರ್ಕಾರದ್ದಲ್ಲ, ಆದರೆ ಕಾಂಗ್ರೆಸ್ ಹೈಕಮಾಂಡ್ನದ್ದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸರ್ಕಾರದ ನಿರ್ಧಾರಗಳಲ್ಲಿ ಸೋನಿಯಾ ಗಾಂಧಿಯವರು ಮೂಗು ತೂರಿಸುವುದು ಸರಿಯಲ್ಲ. ಇದು ಕಾಂಗ್ರೆಸ್ಸಿನ ಆಂತರಿಕ ವಿರೋಧಾಭಾಸಗಳನ್ನು ಎತ್ತಿ ತೋರಿಸುತ್ತದೆ’ ಎಂದು ಕಿಡಿ ಕಾರಿದರು.
‘ಈಗಾಗಲೇ ಜಾತಿಗಣತಿಗೆ 165 ಕೋಟಿ ರು.ಗೂ ಅಧಿಕ ಸಾರ್ವಜನಿಕ ಹಣವನ್ನು ಖರ್ಚು ಮಾಡಲಾಗಿದೆ. ಇದೀಗ ಮತ್ತೆ ಹೊಸ ಗಣತಿಗೆ ಸರ್ಕಾರ ಮುಂದಾಗಿದೆ. ಒಬಿಸಿ ಸಮುದಾಯದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡಿದ ಇತಿಹಾಸವನ್ನು ಕಾಂಗ್ರೆಸ್ ಹೊಂದಿದೆ’ ಎಂದು ಆಕ್ರೋಶ ಹೊರಹಾಕಿದರು.
‘ಹಿಂದುಳಿದ ವರ್ಗದವರ ಬಲವರ್ಧನೆಗಾಗಿ ಕಾಕಾ ಕಾಲೇಲ್ಕರ್ ಆಯೋಗ ಸಿದ್ಧಪಡಿಸಿದ ವರದಿಯನ್ನು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನಿರಾಕರಿಸಿತ್ತು. ಮಂಡಲ್ ಆಯೋಗದ ಸೂಚನೆಗಳನ್ನೂ ಕಾಂಗ್ರೆಸ್ ಅಲಕ್ಷಿಸಿತ್ತು’ ಎಂದೂ ಅವರು ಕಿಡಿಕಾರಿದರು.