ಸಾರಾಂಶ
ರಾಮಜನ್ಮಭೂಮಿ ತೀರ್ಪಿನ ಬಳಿಕ ಮಸೀದಿ ನಿರ್ಮಾಣಕ್ಕೆ ನಿಗದಿ ಪಡಿಸಿರುವ ಧನ್ನಿಪುರದಲ್ಲಿ ಮಸೀದಿ ನಿರ್ಮಾಣ ಮಾಡುವ ಅಗತ್ಯವೇ ಇಲ್ಲ ಎಂದು, ಅಯೋಧ್ಯೆ ವಿವಾದದಲ್ಲಿ ಬಾಬ್ರಿ ಮಸೀದಿ ಪರ ದಾವೆದಾರ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
ಅಯೋಧ್ಯೆ: ರಾಮಜನ್ಮಭೂಮಿ ತೀರ್ಪಿನ ಬಳಿಕ ಮಸೀದಿ ನಿರ್ಮಾಣಕ್ಕೆ ನಿಗದಿ ಪಡಿಸಿರುವ ಧನ್ನಿಪುರದಲ್ಲಿ ಮಸೀದಿ ನಿರ್ಮಾಣ ಮಾಡುವ ಅಗತ್ಯವೇ ಇಲ್ಲ ಎಂದು, ಅಯೋಧ್ಯೆ ವಿವಾದದಲ್ಲಿ ಬಾಬ್ರಿ ಮಸೀದಿ ಪರ ದಾವೆದಾರ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣದ ಕುರಿತಾಗಿ ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ‘ಧನ್ನಿಪುರದಲ್ಲಿ ಮಸೀದಿ ನಿರ್ಮಾಣ ಮಾಡುವ ಅಗತ್ಯವೇ ಇಲ್ಲ. ಈ ಜಾಗದಲ್ಲಿ ಕೃಷಿ ಮಾಡಿ, ಬಂದ ಬೆಳೆಯನ್ನು ಹಿಂದು ಮತ್ತು ಮುಸ್ಲಿಮರು ಸಮನಾಗಿ ಹಂಚಿಕೊಳ್ಳಬೇಕು.
ಇದನ್ನೇ ನಾನು ಮುಸ್ಲಿಂ ಬಾಂಧವರಿಗೆ ಹೇಳುತ್ತೇನೆ. ಮಸೀದಿ ನಿರ್ಮಾಣಕ್ಕೆ 5 ಎಕರೆಗಳ ಜಾಗವನ್ನು ನೀಡಲಾಗಿದೆ. ಇದರ ಅವಶ್ಯಕತೆ ಝಾಫರ್ ಭಾಯ್ಗೆ (ಭೂಮಿ ನೀಡಿದ ವ್ಯಕ್ತಿ) ಇದೆ. ಇದರಲ್ಲಿ ಕೃಷಿ ಮಾಡಲು ಅವರಿಗೆ ಬಿಡಬೇಕು’ ಎಂದು ಹೇಳಿದ್ದಾರೆ.
ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ್ದರ ವಿರುದ್ಧ ದೂರು ನೀಡಿದವರಲ್ಲಿ ಇಕ್ಬಾಲ್ ಅನ್ಸಾರಿ ಅವರು ಸಹ ಒಬ್ಬರಾಗಿದ್ದರು. ಆದರೆ 2019ರ ನ.9ರಂದು ರಾಮ ಜನ್ಮಭೂಮಿ ತೀರ್ಪು ಬಂದ ಬಳಿಕ, ತೀರ್ಪನ್ನು ಸ್ವಾಗತಿಸಿದ್ದಲ್ಲದೇ, ರಾಮಮಂದಿರ ನಿರ್ಮಾಣಕ್ಕೆ ಸಂತಸ ವ್ಯಕ್ತಪಡಿಸಿದ್ದರು.