ಸಾರಾಂಶ
ನವದೆಹಲಿ : ‘ದಿಲ್ಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಜನ ಕಲ್ಯಾಣದ ಯೋಜನೆಗಳನ್ನು ರದ್ದುಪಡಿಸುವುದಿಲ್ಲ . ಆದರೆ ಅದರ ಅನುಷ್ಠಾನದಲ್ಲಿರುವ ಭ್ರಷ್ಟಚಾರವನ್ನು ಕೊನೆಗೊಳಿಸುತ್ತೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಈ ಮೂಲಕ ಆಪ್ ಸರ್ಕಾರ ಜಾರಿಗೆ ತಂದಿರುವ ಅನೇಕ ಜನಪ್ರಿಯ ಯೋಜನೆಗಳ ರದ್ದತಿ ಇಲ್ಲ ಎಂಬ ಸುಳಿವು ನೀಡಿದರು.
ರೋಹಿಣಿ ಪ್ರದೇಶದಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಆಪ್ ಪಕ್ಷ ವಿಪತ್ತು (ಆಪ್-ದಾ) ಇದ್ದಂತೆ. 10 ವರ್ಷಗಳ ಕಾಲ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು ಕೇಂದ್ರದ ಜೊತೆಗೆ ಜಗಳವಾಡುತ್ತಾ ಸಮಯ ವ್ಯರ್ಥ ಮಾಡಿದೆ. ದೆಹಲಿಯಲ್ಲಿ ಬಿಜೆಪಿಗೆ ಅಧಿಕಾರವನ್ನು ನೀಡಿದರೆ ರಾಜ್ಯವನ್ನು ಅಭಿವೃದ್ಧಿ ಪಡಿಸುತ್ತೇವೆ’ ಎಂದರು.
‘ದಿಲ್ಲಿಯಲ್ಲಿ ಈ ವಿಪತ್ತು ತೊಡೆದು ಹಾಕಿದಾಗ ಮಾತ್ರ ಡಬಲ್ ಎಂಜಿನ್ ಸರ್ಕಾರ ಬರುತ್ತದೆ. ಕಳೆದ 10 ವರ್ಷಗಳಲ್ಲಿ ದೆಹಲಿಯು ವಿಪತ್ತಿಗಿಂತ ಕಡಿಮೆ ಇಲ್ಲದ ರಾಜ್ಯ ಸರ್ಕಾರಕ್ಕೆ ಸಾಕ್ಷಿಯಾಗಿದೆ ಎಂಬುದನ್ನು ದೆಹಲಿ ಜನರು ಅರಿತುಕೊಳ್ಳಬೇಕು. ನಾವು ಅನಾಹುತವನ್ನು ಸಹಿಸುವುದಿಲ್ಲ ಬದಲಾವಣೆಯನ್ನು ತರುತ್ತೇವೆ ಎನ್ನುವ ಒಂದೇ ಧ್ವನಿ ದೆಹಲಿಯಲ್ಲಿ ಪ್ರತಿನಿಧಿಸುತ್ತಿದೆ. ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಜನ ಕಲ್ಯಾಣದ ಯೋಜನೆಗಳನ್ನು ರದ್ದುಪಡಿಸುವುದಿಲ್ಲ . ಆದರೆ ಅದರ ಅನುಷ್ಠಾನದಲ್ಲಿರುವ ಭ್ರಷ್ಟಚಾರವನ್ನು ಕೊನೆಗೊಳಿಸುತ್ತೇವೆ’ ಎಂದರು.
ಇದೇ ಸಂರ್ಭದಲ್ಲಿ ಆಪ್ ಸರ್ಕಾರ ಅಭಿವೃದ್ಧಿ ಬಗ್ಗೆ ಕುಟುಕಿದ ಪ್ರಧಾನಿ ‘ಕೇಂದ್ರವು ದೆಹಲಿಯಲ್ಲಿ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸುತ್ತಿದೆ, ಮೆಟ್ರೋ ಮಾರ್ಗವನ್ನು ವಿಸ್ತರಿಸುತ್ತಿದೆ. ನಮೋ ಭಾರತ್ ಪ್ರಾದೇಶಿಕ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ ಪ್ರಾರಂಭಿಸುತ್ತಿದೆ. ದೊಡ್ಡ ಆಸ್ಪತ್ರೆಗಳನ್ನು ನಡೆಸುತ್ತಿದೆ. ಆದರೆ ಮೆಟ್ರೋ ನಿಲ್ದಾಣದಿಂದ ಹೊರ ಬಂದ ನಂತರ ಗುಂಡಿ ಬಿದ್ದ ರಸ್ತೆಗಳು, ತುಂಬಿ ಹರಿಯುವ ಚರಂಡಿಗಳು ಕಣ್ಣಿಗೆ ಕಾಣುತ್ತವೆ. ಕೆಲವು ಪ್ರದೇಶಗಳು ದೀರ್ಘ ಟ್ರಾಫಿಕ್ ಜಾಮ್ನಿಂದಾಗಿ ಆಟೋ ಮತ್ತು ಕ್ಯಾಬ್ ಚಾಲಕರು ಓಡಾಡದಂತೆ ಆಗಿದೆ’ ಎಂದರು.