ಸಾರಾಂಶ
ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ, ‘ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ತನಕ ಚಪ್ಪಲಿಯನ್ನು ಧರಿಸುವುದಿಲ್ಲ. ಜೊತೆಗೆ ಡಿಎಂಕೆಯ ದುಷ್ಕೃತ್ಯಗಳಿಗೆ ಪ್ರಾಯಶ್ಚಿತವಾಗಿ 48 ದಿನ ಉಪವಾಸ, 6 ಸಲ ಚಾಟಿ ಬೀಸಿಕೊಳ್ಳುತ್ತೇನೆ’ ಎಂದು ಘೋಷಿಸಿದ್ದಾರೆ.
ಚೆನ್ನೈ: ಡಿಎಂಕೆ ಆಡಳಿತದಲ್ಲಿ ತಮಿಳುನಾಡಿನಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿರುವ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ, ‘ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ತನಕ ಚಪ್ಪಲಿಯನ್ನು ಧರಿಸುವುದಿಲ್ಲ. ಜೊತೆಗೆ ಡಿಎಂಕೆಯ ದುಷ್ಕೃತ್ಯಗಳಿಗೆ ಪ್ರಾಯಶ್ಚಿತವಾಗಿ 48 ದಿನ ಉಪವಾಸ, 6 ಸಲ ಚಾಟಿ ಬೀಸಿಕೊಳ್ಳುತ್ತೇನೆ’ ಎಂದು ಘೋಷಿಸಿದ್ದಾರೆ.
ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಖಂಡಿಸಿ ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪೂರ್ಣ ಹದಗೆಟ್ಟಿದೆ. ರಾಜ್ಯದಲ್ಲಿ ಡಿಎಂಕೆ ಸರ್ಕಾರವನ್ನು ಉರುಳಿಸುವವರೆಗೂ ನಾನು ಚಪ್ಪಲಿ ಧರಿಸುವುದಿಲ್ಲ’ ಎಂದು ಶಪಥ ಮಾಡಿ ತಾವು ಧರಿಸಿದ್ದ ಚಪ್ಪಲಿಯನ್ನು ಸ್ಥಳದಲ್ಲೇ ತೆಗೆದು ಹಾಕಿದರು.
ಜೊತೆಗೆ, ‘ಡಿಎಂಕೆ ಸರ್ಕಾರ ಉರುಳುವವರೆಗೂ ನಾನು ಬರಿಗಾಲಿನಲ್ಲಿ ನಡೆಯುತ್ತೇನೆ. ನಾನು ಚಪ್ಪಲಿ ಧರಿಸುವುದಿಲ್ಲ’ ಇದನ್ನೆಲ್ಲ ಗಮನಿಸಿ ಎಂದು ಜನರಲ್ಲಿ ವಿನಂತಿಸುತ್ತೇನೆ. ನಾವು ಚುನಾವಣೆಯಲ್ಲಿ ಗೆಲ್ಲಲು ಹಣ ನೀಡುವುದಿಲ್ಲ. ಹಣ ಹಂಚದೆ ಚುನಾವಣೆ ಎದುರಿಸುತ್ತೇವೆ’ ಎಂದರು.
ಅಲ್ಲದೇ ಎಲ್ಲ ದುಷ್ಟರನ್ನು ಹೊಡೆದುರುಳಿಸಲು ಶುಕ್ರವಾರ ಕೊಯಮತ್ತೂರಿನ ತಮ್ಮ ನಿವಾಸದ ಹೊರಗೆ ಆರು ಸಲ ಚಾಟಿ ಬೀಸಿಕೊಳ್ಳುತ್ತೇನೆ ಎಂದರು. ಜೊತೆಗೆ ರಾಜ್ಯದ ಎಲ್ಲ ಆರು ಮುರುಗನ್ (ಷಣ್ಮುಖ) ಕ್ಷೇತ್ರಗಳಿಗೆ ಹೋಗಲು 48 ದಿನಗಳ ಉಪವಾಸ ಮಾಡುವುದಾಗಿ ಅಣ್ಣಾಮಲೈ ಈ ವೇಳೆ ಹೇಳಿದರು.