ಸಾರಾಂಶ
ಕೊಟ್ಟಾಯಂ( ಕೇರಳ): ದೇವಾಲಯಗಳಲ್ಲಿ ಪುರುಷರು ಮೇಲಂಗಿ ತೆಗೆಯು ಪದ್ಧತಿ ನಿಲ್ಲಬೇಕು ಎನ್ನುವ ಶಿವಗಿರಿ ಮಠದ ಸಚ್ಚಿದಾನಂದ ಶ್ರೀ ಮತ್ತು ಕೇರಳ ಸಿಎಂ ಪಿಣರಾಯಿ ವಿಜಯನ್ ನಿಲುವಿಗೆ ಎನ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ಜಿ. ಸುಕುಮಾರನ್ ಕಿಡಿಕಾರಿದ್ದು, ‘ಪ್ರತಿಯೊಂದು ದೇವಾಲಯವು ತನ್ನದೇ ಆದ ಸಂಪ್ರದಾಯಗಳನ್ನು ಹೊಂದಿದೆ. ಅದನ್ನು ಸರ್ಕಾರ ಅಥವಾ ಯಾವುದೇ ವ್ಯಕ್ತಿ ಬದಲಿಸಲು ಸಾಧ್ಯವಿಲ್ಲ’ ಎಂದಿದ್ದಾರೆ
ಪ್ರಭಾವಿ ನಾಯರ್ ಸರ್ವೀಸ್ ಸೊಸೈಟಿ (ಎನ್ಎಸ್ಎಸ್) ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುಕುಮಾರನ್, ‘ಕ್ರೈಸ್ತರು ಮತ್ತು ಮುಸ್ಲಿಮರು ಕೂಡ ಅವರದ್ದೇ ಆದ ಸಂಪ್ರದಾಯವನ್ನು ಹೊಂದಿದ್ದಾರೆ. ಸಿಎಂ ಮತ್ತು ಶಿವಗಿರಿ ಮಠ ಅವರನ್ನು ಟೀಕಿಸುವ ಧೈರ್ಯವನ್ನು ಹೊಂದಿದ್ದಾರೆಯೇ? ಪ್ರತಿ ದೇಗುಲಗಳಿಗೂ ಅದರದ್ದೇ ಆಚಾರ ವಿಚಾರಗಳಿವೆ. ಅದನ್ನು ಗೌರವಿಸಿ ಪಾಲಿಸಬೇಕು’ ಎಂದು ಹೇಳಿದ್ದಾರೆ.
‘ ಇದು ಎನ್ಎಸ್ಎಸ್ ನಿಲುವು. ಮೇಲಂಗಿಯನ್ನು ಧರಿಸುವುದನ್ನು ಅಗತ್ಯವಿಲ್ಲದ ದೇವಸ್ಥಾನಗಳು ಅದನ್ನು ಹಾಗೆಯೇ ಮುಂದುವರೆಸಬೇಕು. ಎಲ್ಲವನ್ನೂ ಹಿಂದೂಗಳ ಮೇಲೆ ಹೇರಬಹುದು, ಬಲವಂತವಾಗಿ ಹೇರಬಹುದು ಎನ್ನುವ ಗ್ರಹಿಕೆ ಸ್ವೀಕಾರ್ಹವಲ್ಲ’ ಎಂದು ಕಿಡಿ ಕಾರಿದ್ದಾರೆ.