ಸಾರಾಂಶ
ವಕ್ಫ್ ಭೂಮಿ ಸದ್ಬಳಕೆ ಮಾಡದ್ದಕ್ಕೇ ಮುಸ್ಲಿಮರು ಪಂಕ್ಚರ್ ಹಾಕುವ ಕೆಲಸ ಮಾಡುವಂತಾಗಿದೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಪಕ್ಷ ನಾಯಕರು ಕಿಡಿ ಕಾರಿದ್ದು, ‘ಸಂಘ ಪರಿವಾರದ ಚಿಂತನೆ ಮತ್ತು ಆಸ್ತಿಯನ್ನು ದೇಶದ ಹಿತಕ್ಕಾಗಿ ಬಳಸಿದ್ದರೆ ಮೋದಿ ಚಹಾ ಮಾರಬೇಕಾಗಿರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸಂಘದ ಚಿಂತನೆ ದೇಶಕ್ಕೆ ಬಳಸಿದ್ದರೆ ಮೋದಿ ಚಹಾ ಮಾರುತ್ತಿರಲಿಲ್ಲ: ಓವೈಸಿ
ನೀವು ಯುವಕರನ್ನು ಪಂಕ್ಚರ್ ಹಾಕುವ ಕೆಲಸಕ್ಕೆ ತಂದಿದ್ದೀರಿ: ಕಾಂಗ್ರೆಸ್ ಸಂಸದ=
ನವದೆಹಲಿ: ‘ವಕ್ಫ್ ಭೂಮಿ ಸದ್ಬಳಕೆ ಮಾಡದ್ದಕ್ಕೇ ಮುಸ್ಲಿಮರು ಪಂಕ್ಚರ್ ಹಾಕುವ ಕೆಲಸ ಮಾಡುವಂತಾಗಿದೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಪಕ್ಷ ನಾಯಕರು ಕಿಡಿ ಕಾರಿದ್ದು, ‘ಸಂಘ ಪರಿವಾರದ ಚಿಂತನೆ ಮತ್ತು ಆಸ್ತಿಯನ್ನು ದೇಶದ ಹಿತಕ್ಕಾಗಿ ಬಳಸಿದ್ದರೆ ಮೋದಿ ಚಹಾ ಮಾರಬೇಕಾಗಿರಲಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.ಮೋದಿ ಸೋಮವಾರ , ‘ವಕ್ಫ್ ಆಸ್ತಿಯನ್ನು ಸರಿಯಾಗಿ ಬಳಸಿಕೊಂಡಿದ್ದರೆ ಮುಸ್ಲಿಂ ಯುವಕರು ಸೈಕಲ್ಗಳ ಪಂಕ್ಚರ್ ಸರಿ ಮಾಡುತ್ತಿರಬೇಕಾಗಿ ಬರುತ್ತಿರಲಿಲ್ಲ’ ಎಂದಿದ್ದರು. ಇದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮೋದಿ ಚಹಾ ಮಾರಬೇಕಿರಲಿಲ್ಲ:ಮೋದಿ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ , ಸಂಸದ ಅಸಾದುದ್ದೀನ್ ಓವೈಸಿ ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದು, ‘ ವಕ್ಫ್ ಆಸ್ತಿ ಸದ್ಬಳಕೆ ಆಗಿದ್ದರೆ ಮುಸ್ಲಿಂ ಯುವಕರು ಪಂಕ್ಚರ್ ಹಾಕುವ ಕೆಲಸ ಮಾಡುತ್ತಿರಲಿಲ್ಲ ಎಂದು ಮೋದಿ ಹೇಳುತ್ತಾರೆ. ಆದರೆ ಸಂಘ ಪರಿವಾರದ ಚಿಂತನೆ ಮತ್ತು ಆಸ್ತಿಯನ್ನು ದೇಶದ ಹಿತಕ್ಕಾಗಿ ಬಳಸಿದ್ದರೆ ಮೋದಿ ಚಹಾ ಮಾರಬೇಕಾಗಿರಲಿಲ್ಲ. ದೇಶದ ಬಡ ಮುಸ್ಲಿಂ ಅಥವಾ ಹಿಂದೂಗಳಿಗೆ ಮೋದಿ ಈ 11 ವರ್ಷದಲ್ಲಿ ಏನು ಮಾಡಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.
ಇನ್ನು ಕಾಂಗ್ರೆಸ್ನ ರಾಜ್ಯಸಭಾ ಸಂಸದ ಇಮ್ರಾನ್ ಪ್ರತಾಪಗಢಿ ಪ್ರತಿಕ್ರಿಯಿಸಿದ್ದು, ‘ ನೀವು ದೇಶದ ಯುವಕರನ್ನು ಈ ಹಂತಕ್ಕೆ ತಂದಿದ್ದೀರಿ. ಉದ್ಯೋಗಗಳಿಲ್ಲದಿದ್ದಾಗ ಪಂಕ್ಚರ್ ಕೆಲಸ ಬಿಟ್ಟು ಬೇರೆ ಆಯ್ಕೆಯಿಲ್ಲ’ ಎಂದಿದ್ದಾರೆ.