ಸಾರಾಂಶ
ಪಾಕಿಸ್ತಾನವು ಇತಿಹಾಸದಿಂದ ಯಾವುದೇ ಪಾಠಗಳನ್ನು ಕಲಿತಿಲ್ಲ ಮತ್ತು ಭಯೋತ್ಪಾದನೆಯ ವೇಷದಲ್ಲಿ ಭಾರತದ ವಿರುದ್ಧ ಯುದ್ಧವನ್ನು ಮುಂದುವರೆಸಿದೆ.
ದ್ರಾಸ್ (ಕಾರ್ಗಿಲ್) : ಪಾಕಿಸ್ತಾನವು ಇತಿಹಾಸದಿಂದ ಯಾವುದೇ ಪಾಠಗಳನ್ನು ಕಲಿತಿಲ್ಲ ಮತ್ತು ಭಯೋತ್ಪಾದನೆಯ ವೇಷದಲ್ಲಿ ಭಾರತದ ವಿರುದ್ಧ ಯುದ್ಧವನ್ನು ಮುಂದುವರೆಸಿದೆ. ಅದರೆ ಭಾರತೀಯ ಸೈನಿಕರು ಭಯೋತ್ಪಾದನೆಯನ್ನು ಸಂಪೂರ್ಣ ಬಲದಿಂದ ಹತ್ತಿಕ್ಕುತ್ತಾರೆ ಮತ್ತು ಶತ್ರುಗಳಿಗೆ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
25ನೇ ಕಾರ್ಗಿಲ್ ವಿಜಯ್ ದಿವಸ್ ವೇಳೆ ಕಾರ್ಗಿಲ್ ಯುದ್ಧದ ವೀರ ಯೋಧರ ಸ್ಮಾರಕಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಮೋದಿ, ‘ದುಸ್ಸಾಹಸ ಮಾಡಿದಾಗಲೆಲ್ಲ ಪಾಕಿಸ್ತಾನ ಸೋತಿದೆ. ಆದರೂ ಇತಿಹಾಸದಿಂದ ಯಾವುದೇ ಪಾಠ ಕಲಿತಿಲ್ಲ. ಭಯೋತ್ಪಾದನೆ ಮೂಲಕ ಅಘೋಷಿತ ಯುದ್ಧವನ್ನು ಮುಂದುವರೆಸಿದೆ. ಇಂದು, ನಾನು ಭಯೋತ್ಪಾದನೆಯ ಮಾಸ್ಟರ್ಗಳು ನನ್ನ ಧ್ವನಿಯನ್ನು ಕೇಳಬಲ್ಲ ಸ್ಥಳದಿಂದ ಮಾತನಾಡುತ್ತಿದ್ದೇನೆ. ನಿಮ್ಮ ನೀಚ ಉದ್ದೇಶಗಳು ಎಂದಿಗೂ ಈಡೇರುವುದಿಲ್ಲ. ನಮ್ಮ ಧೈರ್ಯಶಾಲಿ ಯೋಧರು ಎಲ್ಲಾ ಭಯೋತ್ಪಾದಕ ಪ್ರಯತ್ನಗಳನ್ನು ಹತ್ತಿಕ್ಕುತ್ತಾರೆ’ ಎಂದು ಅವರು ಹೇಳಿದರು.
ಇದೇ ವೇಳೆ, ಕಾರ್ಗಿಲ್ ಯುದ್ಧದ ದಿನಗಳನ್ನು ನೆನಪಿಸಿಕೊಂಡ ಮೋದಿ, ‘ಸೈನಿಕರ ತ್ಯಾಗ ಅಜರಾಮರ. ಅವರ ತ್ಯಾಗವನ್ನು ಕಾರ್ಗಿಲ್ ವಿಜಯ್ ದಿವಸ್ ನಮಗೆ ನೆನಪಿಸುತ್ತದೆ. ಶತಮಾನಗಳು ಕಳೆದರೂ ಗಡಿ ರಕ್ಷಿಸಿದ ಜೀವಗಳನ್ನು ಮರೆಯಲು ಆಗದು. ನಮ್ಮ ಸಶಸ್ತ್ರ ಪಡೆಗಳು ಪ್ರಬಲ ಮಹಾವೀರರು’ ಎಂದು ಬಣ್ಣಿಸಿದರು.
‘ಅಂದು ಸೈನಿಕರು ಇಷ್ಟು ಎತ್ತರದಲ್ಲಿ ಹೇಗೆ ಕಠಿಣ ಕಾರ್ಯಾಚರಣೆ ನಡೆಸಿದರು ಎಂಬುದು ನನಗೆ ಈಗಲೂ ನೆನಪಿದೆ. ಮಾತೃಭೂಮಿಯನ್ನು ರಕ್ಷಿಸಲು ಸರ್ವೋಚ್ಚ ತ್ಯಾಗ ಮಾಡಿದ ದೇಶದ ವೀರ ಪುತ್ರರಿಗೆ ನಾನು ನಮಸ್ಕರಿಸುತ್ತೇನೆ’ ಎಂದು ಅವರು ಹೇಳಿದರು.