ಪೊಲೀಸರಿಂದ ಚಿತ್ರಹಿಂಸೆ, ಕರೆಂಟ್‌ ಶಾಕ್‌: ಸಂಸತ್‌ ದಾಳಿಕೋರರು ಕೋರ್ಟ್‌ಗೆ

| Published : Feb 01 2024, 02:09 AM IST

ಪೊಲೀಸರಿಂದ ಚಿತ್ರಹಿಂಸೆ, ಕರೆಂಟ್‌ ಶಾಕ್‌: ಸಂಸತ್‌ ದಾಳಿಕೋರರು ಕೋರ್ಟ್‌ಗೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಪಕ್ಷಗಳ ಜತೆ ನಂಟು ಒಪ್ಪಿಕೊಳ್ಳುವಂತೆ ಹಿಂಸೆ ನೀಡಲಾಗಿದೆ. ಖಾಲಿ ಕಾಗದಕ್ಕೆ ಸಹಿ ಹಾಕಲು ಒತ್ತಾಯ ಮಾಡಲಾಗಿದೆ. ನಮಗೆ ಕರೆಂಟ್‌ ಶಾಕ್‌ ಕೊಡುತ್ತಿದ್ದಾರೆ ಎಂದು ಮೈಸೂರಿನ ಮನೋರಂಜನ್‌ ಸೇರಿ ಐವರು ಆರೋಪ ಮಾಡಿದ್ದಾರೆ. ಆರೋಪಕ್ಕೆ ಉತ್ತರಿಸುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ.

ನವದೆಹಲಿ: ಕಳೆದ ಡಿ.13ರಂದು ಲೋಕಸಭೆಯ ಒಳಗೆ ಹಾಗೂ ಸಂಸತ್ತಿನ ಆವರಣದಲ್ಲಿ ಹೊಗೆ ಬಾಂಬ್‌ ಸಿಡಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಮೈಸೂರಿನ ಮನೋರಂಜನ್‌ ಡಿ ಸೇರಿ ಐವರು ಆರೋಪಿಗಳು ‘ವಿಪಕ್ಷಗಳೊಂದಿಗೆ ನಿಮಗೆ ಸಂಬಂಧವಿದೆ ಎಂಬುದನ್ನು ಒಪ್ಪಿಕೊಳ್ಳಿ’ ಎಂದು ದೆಹಲಿ ಪೊಲೀಸರು ನಮಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಬಂಧಿತ ಮನೋರಂಜನ್‌ ಡಿ, ಸಾಗರ್‌ ಶರ್ಮಾ, ಲಲಿತ್‌ ಝಾ, ಅಮೋಲ್‌ ಶಿಂಧೆ ಹಾಗೂ ಮಹೇಶ್‌ ಕುಮಾವತ್ ಹೇಳಿಕೆ ನೀಡಿ, ‘70 ಖಾಲಿ ಕಾಗದಗಳಿಗೆ ಸಹಿ ಹಾಕುವಂತೆ ನಮಗೆ ಒತ್ತಾಯ ಮಾಡಲಾಗಿದೆ. ಯುಎಪಿಎ ಅಡಿಯಲ್ಲಿ ರಾಜಕೀಯ ಪಕ್ಷಗಳೊಂದಿಗೆ ನಮಗೆ ಸಂಬಂಧವಿದೆ ಎಂಬ ದಾಖಲೆಗೆ ಸಹಿ ಹಾಕುವಂತೆ ಹಾಗೂ ತಪ್ಪೊಪ್ಪಿಕೊಳ್ಳುವಂತೆ ನಮಗೆ ಹಿಂಸೆ ನೀಡಲಾಗುತ್ತಿದೆ. ಕರೆಂಟ್‌ ಶಾಕ್‌ ಕೊಡಲಾಗುತ್ತಿದೆ’ ಎಂದು ಪೊಲೀಸರ ವಿರುದ್ಧ ಆರೋಪ ಮಾಡಿದ್ದಾರೆ.ಬಳಿಕ ಆರೋಪದ ಕುರಿತು ಉತ್ತರಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ. ಅಲ್ಲದೇ ಪ್ರಕರಣದ ಮತ್ತೊಬ್ಬ ಆರೋಪಿ ನೀಲಂ ಆಜಾದ್‌ ಸೇರಿ ಎಲ್ಲಾ 6 ಆರೋಪಿಗಳ ನ್ಯಾಯಾಂಗ ಬಂಧನವನ್ನು ಮಾರ್ಚ್‌ 1ರ ತನಕ ವಿಸ್ತರಿಸಿದೆ. ಈ ವೇಳೆ ಮುಂದಿನ ವಿಚಾರಣೆಯನ್ನು ಫೆ.17ಕ್ಕೆ ಮುಂದೂಡಲಾಗಿದೆ. 2001ರ ಡಿ.13ರಂದು ಭಾರತದ ಸಂಸತ್ತಿನ ಮೇಲೆ ಉಗ್ರರು ದಾಳಿ ನಡೆಸಿದ ದಿನದಂದೇ 2023ರ ಡಿ.13ರಂದು ಆರು ಜನ ಆರೋಪಿಗಳು ನೂತನ ಸಂಸತ್‌ ಭವನದ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಸಂದರ್ಶಕರ ಸೋಗಿನಲ್ಲಿದ್ದ ಇಬ್ಬರು ಆರೋಪಿಗಳು ಲೋಕಸಭೆಗೆ ಜಿಗಿದು ಹೊಗೆ ಬಾಂಬ್ ಸಿಡಿಸಿದ್ದರು. ಇದು ಭಾರೀ ಭದ್ರತಾ ಲೋಪ ಎಸಗಿತ್ತು.