ಸಾರಾಂಶ
ಚೀನಾದ ಗೂಢಚಾರಿ ಎಂದು ಶಂಕಿಸಿ ಸೆರೆ ಹಿಡಿಯಲಾಗಿದ್ದ ಪಾರಿವಾಳವನ್ನು ಕೂಲಂಕಷವಾಗಿ ಪರಿಶೀಲಿಸಿ ಬಿಡುಗಡೆ ಮಾಡಲಾಗಿದೆ.
ಮುಂಬೈ: ಕಳೆದ 8 ತಿಂಗಳ ಹಿಂದೆ ಚೀನಾದ ಗೂಢಚಾರಿ ಎಂದು ಶಂಕಿಸಿ ಸೆರೆ ಹಿಡಿಯಲಾಗಿದ್ದ ಪಾರಿವಾಳವನ್ನು ಮುಂಬೈನ ಪಶುವೈದ್ಯಕೀಯ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ತೈವಾನ್ನಲ್ಲಿ ಪಾರಿವಾಳಗಳ ರೇಸ್ಗೆ ಬಳಸುತ್ತಿದ್ದ ಈ ಪಾರಿವಾಳ ಆಕಸ್ಮಿಕವಾಗಿ ಭಾರತಕ್ಕೆ ಬಂದಿದೆ ಎಂಬುದು ಪತ್ತೆಯಾಗಿದೆ. ಹೀಗಾಗಿ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಮೇ ತಿಂಗಳಿನಲ್ಲಿ ಚೆಂಬೂರಿನ ಪಿರ್ಪೌ ಜೆಟ್ಟಿಯಲ್ಲಿ ಆರ್ಸಿಎಫ್ ಪೊಲೀಸರು ಪಾರಿವಾಳವನ್ನು ಸೆರೆ ಹಿಡಿದಿದ್ದರು.
ಈ ಪಾರಿವಾಳದ ಕಾಲುಗಳಿಗೆ ಒಂದು ಅಲ್ಯುಮಿನಿಯಂ ಹಾಗೂ ಮತ್ತೊಂದು ತಾಮ್ರದ ಉಂಗುರ ಹಾಕಲಾಗಿತ್ತು. ಅಲ್ಲದೇ ಅದರ ರೆಕ್ಕೆಯ ಕೆಳಭಾಗದಲ್ಲಿ ಚೀನಿ ಭಾಷೆ ರೀತಿಯ ಲಿಪಿಯಲ್ಲಿ ಸಂದೇಶವನ್ನು ಬರೆಯಲಾಗಿತ್ತು.
ಹೀಗಾಗಿ ಇದನ್ನು ಚೀನಾವು ಭಾರತದ ವಿರುದ್ಧ ಗೂಢಚಾರಿಕೆಗೆ ಬಿಟ್ಟಿದೆ ಎಂದು ಶಂಕಿಸಲಾಗಿತ್ತು. ಆದರೀಗ ಆಸ್ಪತ್ರೆಯು ಪೊಲೀಸರ ಅನುಮತಿ ಮೇರೆಗೆ ಪಾರಿವಾಳವನ್ನು ಬಿಡುಗಡೆ ಮಾಡಿದೆ.