ಸಾರಾಂಶ
ನವದೆಹಲಿ: ಹೆದ್ದಾರಿಗಳಲ್ಲಿ ವಾಹನ ಚಲಾಯಿಸುತ್ತ ಆಯಾಸಗೊಳ್ಳುವ ಚಾಲಕರಿಗಾಗಿ ಪ್ರಧಾನಿ ನರೇಂದ್ರ ಮೋದಿ ಹೊಸ ಸೌಲಭ್ಯ ಘೋಷಿಸಿದ್ದಾರೆ. ‘ಶೀಘ್ರದಲ್ಲೇ ಹೆದ್ದಾರಿಗಳಲ್ಲಿ ವಾಹನ ಚಾಲಕರಿಗೆ ವಿಶ್ರಾಂತಿ ತೆಗೆದುಕೊಳ್ಳಲು 1000 ಅತ್ಯಾಧುನಿಕ ವಿಶ್ರಾಂತಿ ಕೊಠಡಿಗಳನ್ನು ಮೊದಲ ಹಂತದಲ್ಲಿ ನಿರ್ಮಿಸಲಾಗುವುದು’ ಎಂದರು.
ರಸ್ತೆ ಸುರಕ್ಷತೆ ಹಾಗೂ ವಾಹನ ಕುರಿತಾದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋದಲ್ಲಿ ಮಾತನಾಡಿದ ಅವರು, ‘ಹೈವೇ ಬದಿ ಸ್ಥಾಪಿಸಲಾಗುವ ವಿಶ್ರಾಂತಿ ಗೃಹಗಳಲ್ಲಿ ಮಲಗುವ ಕೋಣೆ, ಶೌಚಾಲಯ, ಕುಡಿವ ನೀರಿನ ವ್ಯವಸ್ಥೆ ಇರಲಿದೆ.
ಇದರಿಂದ ಹೆದ್ದಾರಿ ಬದಿ ವಿಶ್ರಾಂತಿಗಾಗಿ ಪರದಾಡುವ ಚಾಲಕರಿಗೆ ಸಹಾಯವಾಗಲಿದೆ’ ಎಂದರು.ಇದೇ ವೇಳೆ, ಬಿಜೆಪಿ ಸರ್ಕಾರದ 3ನೇ ಅವಧಿಯಲ್ಲಿ ಭಾರತವು ಜಾಗತಿಕವಾಗಿ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದರು.
ಈ ಮೂಲಕ ಮತ್ತೆ ತಾವು 3ನೇ ಬಾರಿ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.‘ಭಾರತದಲ್ಲಿ ಅಭಿವೃದ್ಧಿ ಪರ್ವ ಉಂಟಾಗುತ್ತಿದೆ. ನಾವು ಅಟಲ್ ಸುರಂಗದಿಂದ ಅಟಲ್ ಸೇತುವಿನವರೆಗೆ ಸಮುದ್ರ ಮತ್ತು ಪರ್ವತಗಳಿಗೇ ಸಡ್ಡು ಹೊಡೆದು ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿದ್ದೇವೆ.
2014ರ ಹಿಂದಿನ ದಶಕದಲ್ಲಿ ಕೇವಲ 12 ಕೋಟಿ ವಾಹನಗಳು ಮತ್ತು 2000 ಎಲೆಕ್ಟ್ರಿಕ್ ವಾಹನಗಳ ಮಾರಾಟವಾಗಿತ್ತು. ಆದರೆ 2014ರ ನಂತರದ ದಶಕದಲ್ಲಿ 21 ಕೋಟಿ ವಾಹನಗಳು ಮತ್ತು 12 ಲಕ್ಷ ವಾಹನಗಳ ಮಾರಾಟವಾಗಿ ಶೇ.60ರಷ್ಟುಪ್ರಗತಿ ಕಂಡಿದೆ.
ಜೊತೆಗೆ 10 ವರ್ಷದಲ್ಲಿ 75 ಹೊಸ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಮುಂದಿನ ಅವಧಿಯಲ್ಲೂ ಅಭಿವೃದ್ಧಿ ಪರ್ವ ಮುಂದುವರೆಯಲಿದ್ದು, ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ’ ಎಂದರು.