ಸಾರಾಂಶ
ನವದೆಹಲಿ: ಅ.3ರಂದು ಇಹಲೋಕ ತ್ಯಜಿಸಿದ ಹಿರಿಯ ಪತ್ರಕರ್ತ, ಭಾರತೀಯ ಪತ್ರಿಕೋದ್ಯಮದ ಭೀಷ್ಮ, ಟಿಜೆಎಸ್ (ತಾಯಿಲ್ ಜಾಕೋಬ್ ಸೋನಿ) ಜಾರ್ಜ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಜ್ ಅವರ ಪುತ್ರ ಜೀತ್ ತಾಯಿಲ್ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಟಿಜೆಎಸ್ ಜಾರ್ಜ್ ಅವರ ಕೆಲಸಗಳನ್ನು ಪ್ರಶಂಸಿಸಿರುವ ಮೋದಿ, ‘ಅವರ ಸಾವಿನ ಸುದ್ದಿ ಕೇಳಿ ದುಃಖವಾಯಿತು. ಒಬ್ಬ ಪತ್ರಕರ್ತ ಹಾಗೂ ಸಂಪಾದಕನಾಗಿ ಅವರು ಮಾಡಿದ ಕೆಲಸದಿಂದಾಗಿ ಸಹೋದ್ಯೋಗಿಗಳಿಂದ ಬಹಳ ಗೌರವಿಸಲ್ಪಡುತ್ತಿದ್ದರು. ಅವರ ಪತ್ರಿಕೋದ್ಯಮ ಮತ್ತು ಪುಸ್ತಕಗಳು ಯುವ ಪತ್ರಕರ್ತರಿಗೆ ದೃಷ್ಟಿಕೋನ ನೀಡಿ ಮಾರ್ಗದರ್ಶನ ಮಾಡಲಿವೆ’ ಎಂದು ಬರೆದಿದ್ದಾರೆ.
ಜಾರ್ಜ್ ಅವರ ಪರಿವಾರಕ್ಕೆ ಧೈರ್ಯ ತುಂಬುತ್ತಾ, ‘ಮಗುವಿನ ಜೀವನದಲ್ಲಿ ತಂದೆ ಆಧಾರ ಸ್ತಂಭ ಇದ್ದಂತೆ. ಅವರ ಇರುವಿಕೆ ರಕ್ಷೆಯಾಗಿದ್ದು, ಜೀವನದಲ್ಲಿ ಎದುರಾಗುವ ಸವಾಲುಗಳನ್ನು ವಿಶ್ವಾಸದಿಂದ ಎದುರಿಸಲು ಬಲ ಹಾಗೂ ಧೈರ್ಯ ನೀಡುತ್ತದೆ. ಈ ನೋವಿನ ಸಮಯದಲ್ಲಿ, ಜಾರ್ಜ್ರೊಂದಿಗೆ ಕಳೆದ ಕ್ಷಣಗಳು ನಿಮಗೆ ಸಮಾಧಾನ ನೀಡಲಿ’ ಎಂದು ಹಾರೈಸಿದ್ದಾರೆ.