ಸಾರಾಂಶ
ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ 2ನೇ ಸ್ಪೇಸ್ಪೋರ್ಟನ್ನು ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂನಲ್ಲಿ ನಿರ್ಮಾಣ ಮಾಡಲು ಯೋಜಿಸಲಾಗಿದೆ.
ಫೆ.28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಸಣ್ಣಗಾತ್ರದ ಉಪಗ್ರಹ ಉಡಾವಣಾ ವಾಹಕಗಳನ್ನು ಉಡಾವಣೆ ಮಾಡುವುದಕ್ಕಾಗಿ ಈ ಹೊಸ ಸ್ಪೇಸ್ಪೋರ್ಟನ್ನು ಬಳಕೆ ಮಾಡಲಾಗುತ್ತದೆ.
ಇದು ಮುಂದಿನ 2 ವರ್ಷದಲ್ಲಿ ನಿರ್ಮಾಣವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೂತ್ತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂ ಮತ್ತು ಸಥಾನುಕುಲಂ ತಾಲೂಕುಗಳ ಪಡುಕಪಟ್ಟು, ಪಲ್ಲಕುರಿಚಿ ಮತ್ತು ಮಾತವಾನ್ ಕುರಿಚಿ ಗ್ರಾಮಗಳಿಗೆ ಸೇರಿದ 2,233 ಎಕರೆ ಪ್ರದೇಶದಲ್ಲಿ ಹೊಸ ಲಾಂಚ್ಪ್ಯಾಡ್ ನಿರ್ಮಾಣ ಮಾಡಲಾಗುತ್ತಿದೆ.
ಅಲ್ಲದೇ ಇದಕ್ಕೆ ಪೂರಕವಾಗಿ 2 ಸಾವಿರ ಎಕರೆ ಪ್ರದೇಶದಲ್ಲಿ ತಮಿಳುನಾಡು ಸರ್ಕಾರ ಸ್ಪೇಸ್ ಕೈಗಾರಿಕೆ ಮತ್ತು ಪ್ರೊಪಲ್ಲೆಂಟ್ ಪಾರ್ಕ್ ನಿರ್ಮಾಣ ಮಾಡುತ್ತಿದೆ.
ಇಂಧನ ಉಳಿತಾಯ: ತಮಿಳುನಾಡಿನಲ್ಲಿ ಲಾಂಚ್ಪ್ಯಾಡ್ ನಿರ್ಮಾಣ ಮಾಡುವುದರಿಂದ ರಾಕೆಟ್ ಇಂಧನದಲ್ಲಿ ಭಾರಿ ಪ್ರಮಾಣದಲ್ಲಿ ಉಳಿತಾಯವಾಗಲಿದೆ. ಇಲ್ಲಿಂದ ರಾಕೆಟ್ ನೇರವಾಗಿ ದಕ್ಷಿಣದತ್ತ ಪ್ರಯಾಣಿಸಲಿದೆ.
ಶ್ರೀಹರಿಕೋಟಾದಿಂದ ಉಡಾವಣೆಯಾದರೆ ಮೊದಲಿಗೆ ಆಗ್ನೇಯದತ್ತ ರಾಕೆಟ್ ಪ್ರಯಾಣಿಸಿ, ಬಳಿಕ ದಕ್ಷಿಣದತ್ತ ತಿರುಗಿಸಬೇಕಿತ್ತು.
ಶ್ರೀಲಂಕಾದ ಮೇಲೆ ರಾಕೆಟ್ ಹಾದುಹೋಗುವುದನ್ನು ತಪ್ಪಿಸಲು ಈ ಕ್ರಮ ಅನುಸರಿಸಲಾಗುತ್ತಿತ್ತು ಎಂದು ಇಸ್ರೋದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಇಸ್ರೋ ಸ್ಪೇಸ್ಪೋರ್ಟ್ ಹೊಂದಿದ್ದು, ಇಲ್ಲಿ 2 ಲಾಂಚ್ಪ್ಯಾಡ್ಗಳಿವೆ.