ಜಿ7 ಶೃಂಗದ ವೇಳೆ ಮೋದಿ ಅಪ್ಪಿಕೊಂಡ ಪೋಪ್‌

| Published : Jun 15 2024, 01:00 AM IST / Updated: Jun 15 2024, 05:42 AM IST

ಸಾರಾಂಶ

ದಕ್ಷಿಣ ಇಟಲಿಯ ಅಪುಲಿಯಾದಲ್ಲಿ ಶುಕ್ರವಾರ ನಡೆದ ಜಿ7 ಶೃಂಗಸಭೆಯ ಔಟ್‌ರೀಚ್‌ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪೋಪ್ ಫ್ರಾನ್ಸಿಸ್‌ ಇಬ್ಬರು ಹಸ್ತಲಾಘವ ಮಾಡಿ ,ಆತ್ಮೀಯವಾಗಿ ಅಪ್ಪಿಕೊಂಡರು.

ಬಾರಿ (ಇಟಲಿ): ದಕ್ಷಿಣ ಇಟಲಿಯ ಅಪುಲಿಯಾದಲ್ಲಿ ಶುಕ್ರವಾರ ನಡೆದ ಜಿ7 ಶೃಂಗಸಭೆಯ ಔಟ್‌ರೀಚ್‌ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪೋಪ್ ಫ್ರಾನ್ಸಿಸ್‌ ಇಬ್ಬರು ಹಸ್ತಲಾಘವ ಮಾಡಿ ,ಆತ್ಮೀಯವಾಗಿ ಅಪ್ಪಿಕೊಂಡರು.

ಇದೇ ಸಂದರ್ಭದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. 2019ರ ಕೊರೋನಾ ಸಾಂಕ್ರಾಮಿಕ ಸಮಯ,ಕೋವಿಡ್‌ ಲಸಿಕೆಯಲ್ಲಿ ಭಾರತದ ನಡೆ, ಹವಾಮಾನ ಬದಲಾವಣೆ ನಿಯಂತ್ರಿಸಲು ಭಾರತ ಕೈಗೊಂಡ ಪಾತ್ರದ ಕುರಿತು ಮೋದಿ ಪೋಪ್ ಬಳಿ ಚರ್ಚಿಸಿದರು. ಏಷ್ಯಾದಲ್ಲಿ ಎರಡನೇ ಅತಿದೊಡ್ಡ ಕ್ಯಾಥೋಲಿಕ್ ಜನಸಂಖ್ಯೆ ನೆಲೆಯಾಗಿರುವ ಭಾರತಕ್ಕೆ ಮುಂದಿನ ವರ್ಷ ಪೋಪ್ ಭೇಟಿ ನೀಡಬಹುದು ಎನ್ನುವ ನಿರೀಕ್ಷೆಯಿದೆ.

==

ಮಾನವರ ನಿಯಂತ್ರಣದಲ್ಲೇ ಎಐ ಇರಲಿ: ಪೋಪ್‌

ಬಾರಿ (ಇಟಲಿ): ಕೃತಕ ಬುದ್ಧಿಮತ್ತೆಯ ನಿಯಂತ್ರಣ ಮಾನವರ ಬಳಿಯೇ ಇರುವಂತಾಗಬೇಕು ಎಂದು ಪೋಪ್‌ ಫ್ರಾನ್ಸಿಸ್‌ ಜಿ7 ಶೃಂಗದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಮೂಲಕ ಅವರು ಜಿ7 ಶೃಂಗದ 50 ಸಮ್ಮೇಳನಗಳ ಇತಿಹಾಸದಲ್ಲಿ ಭಾಷಣ ಮಾಡಿದ ಮೊದಲ ಧರ್ಮಗುರು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಎಐ ಸಾಧಕ ಬಾಧಕಗಳ ಕುರಿತು ಮಾತನಾಡಿದ ಪೋಪ್‌ ಫ್ರಾನ್ಸಿಸ್‌, ‘ಕೃತಕ ಬುದ್ಧಿಮತ್ತೆಯ ವಿಪರೀತ ಬಳಕೆಯನ್ನು ಮುಂದುವರೆಸಿದರೆ ಮುಂದಿನ ಪೀಳಿಗೆಯ ಕುರಿತು ನಾವು ಭರವಸೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಆಗ ಮಾನವರ ಎಲ್ಲ ನಿರ್ಧಾರಗಳನ್ನು ಯಂತ್ರಗಳೇ ತೆಗೆದುಕೊಳ್ಳುವಂತಾಗುತ್ತದೆ. ಆದರೆ ಅದನ್ನು ತಡೆಗಟ್ಟಿ ಮಾನವ ಕೇಂದ್ರಿತ ಎಐ ಸಾಧನಗಳನ್ನು ಅಭಿವೃದ್ಧಿ ಪಡಿಸುವ ಹೊಣೆಗಾರಿಕೆಯನ್ನು ರಾಜತಾಂತ್ರಿಕರು ತೆಗೆದುಕೊಳ್ಳಬೇಕು’ ಎಂದು ಕರೆ ನೀಡಿದರು.