ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಯಿಂದ ಬಿಜೆಪಿಗೆ ಚುನಾವಣೆಯಲ್ಲಿ ‘ಮಹಾ’ ಜಯ: ಸಮೀಕ್ಷೆ

| Published : Dec 21 2024, 01:15 AM IST / Updated: Dec 21 2024, 04:57 AM IST

Narendra Modi in Chief Secretaries Conference

ಸಾರಾಂಶ

ಇತ್ತೀಚಿನ ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯೇ ಕಾರಣ. ಅವರ ಜನಪ್ರಿಯತೆಯೊಂದೇ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳನ್ನು ನೆಲಸಮಗೊಳಿಸಿತು ಎಂದು ಸಮೀಕ್ಷೆಯೊಂದು ಹೇಳಿದೆ.

ನವದೆಹಲಿ: ಇತ್ತೀಚಿನ ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯೇ ಕಾರಣ. ಅವರ ಜನಪ್ರಿಯತೆಯೊಂದೇ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳನ್ನು ನೆಲಸಮಗೊಳಿಸಿತು ಎಂದು ಸಮೀಕ್ಷೆಯೊಂದು ಹೇಳಿದೆ.2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ದೇಶಾದ್ಯಂತ ಕೇವಲ 240 ಸೀಟು ಪಡೆದು ಕಡಿಮೆ ಸಾಧನೆ ಮಾಡಿದರೂ ಈ ರಾಜ್ಯಗಳಲ್ಲಿ ಕೇಸರಿ ಪಕ್ಷದ ಜಯಕ್ಕೆ ಮೋದಿ ಜನಪ್ರಿಯತೆಯೇ ಕಾರಣ ಎಂದು ‘ಮ್ಯಾಟ್ರಿಜ್‌’ ಸಂಸ್ಥೆಯ ಸಮೀಕ್ಷೆ ಹೇಳಿದೆ.

ಸಮೀಕ್ಷೆಯನ್ನು 2024ರ ನ.25ರಿಂದ 2024ರ ಡಿ.14ರ ನಡುವೆ ಮಹಾರಾಷ್ಟ್ರದಲ್ಲಿ 76,830 ಮತ್ತು ಹರ್ಯಾಣದಲ್ಲಿ 53,647 ಮಾದರಿ ಗಾತ್ರದೊಂದಿಗೆ ನಡೆಸಲಾಗಿದೆ

ಪ್ರಧಾನಿ ಮೋದಿಯವರ ನಿರಂತರ ಜನಪ್ರಿಯತೆ:ಮೋದಿ ಈಗಲೂ ಪ್ರಭಾವಿ ನಾಯಕ ಎಂಬ ಇಮೇಜ್‌ ಉಳಿಸಿಕೊಂಡಿದ್ದಾರೆ. ಇದು ವಿಧಾನಸಭಾ ಚುನಾವಣಾ ಫಲಿತಾಂಶಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮಹಾರಾಷ್ಟ್ರದಲ್ಲಿ ಶೇ.55 ಜನರು ಮೋದಿ ನಾಯಕತ್ವ ಮೆಚ್ಚಿದ್ದಾರೆ. ಹರ್ಯಾಣದಲ್ಲಿ ಶೇ.53 ಜನರು ಮೋದಿ ಜನಪ್ರಿಯತೆ ಜಿಗಿದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್‌ ಪ್ರಚಾರಕ್ಕೆ ಬೆಂಬಲವಿಲ್ಲ:

ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಸಂವಿಧಾನದ ಮೇಲೆ ದಾಳಿ, ಕೃಷಿ ಕಾನೂನುಗಳು ಮತ್ತು ಕುಸ್ತಿಪಟುಗಳ ಸಮಸ್ಯೆಗಳು ಮುಂತಾದ ಸಮಸ್ಯೆಗಳನ್ನು ಕಾಂಗ್ರೆಸ್‌ ಪ್ರಸ್ತಾಪಿಸಿದರೂ ಜನರು ಅದಕ್ಕೆ ಬೆಲೆ ನೀಡಿಲ್ಲ. ಮೋದಿ ಅಬ್ಬರದ ಪ್ರಚಾರ ಇದಕ್ಕೆ ಮುಳುವಾಯಿತು ಎಂದು ಸಮೀಕ್ಷೆ ಹೇಳಿದೆ.

ಕಾಂಗ್ರೆಸ್‌ ನಾಯಕತ್ವದ ಮೇಲಿಲ್ಲ ವಿಶ್ವಾಸ:

ಸಮೀಕ್ಷೆಯ ಮತ್ತೊಂದು ಪ್ರಮುಖ ಅಂಶವೆಂದರೆ ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಪ್ರತಿಪಕ್ಷದ ಮುಖವೆಂದು ಪರಿಗಣಿಸಲ್ಪಟ್ಟ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಮೇಲಿನ ನಂಬಿಕೆಯ ಕೊರತೆ. ಪ್ರಧಾನಿ ಸ್ಥಾನಕ್ಕೆ ರಾಹುಲ್ ಪರ್ಯಾಯ ಎಂದು ರೂಪಿಸುವಲ್ಲಿ ಕಾಂಗ್ರೆಸ್‌ ವಿಫಲವಾಯಿತು ಎಂದು ಸಮೀಕ್ಷೆ ನುಡಿಡಿದೆ.

ಜನರ ಭಾವನೆ ಬದಲು:

ಲೋಕಸಭೆ ಚುನಾವಣೆ ವೇಳೆ ಬಿಜೆಪಿಗೆ ಮತ ಹಾಕದೇ ತಪ್ಪು ಮಾಡಿದೆವು ಎಂದು ಮಹಾರಾಷ್ಟ್ರ ಮತ್ತು ಹರಿಯಾಣದ ಹಲವು ಮತದಾರರು ಸಮೀಕ್ಷೆಯಲ್ಲಿ ಅಭಿಪ್ರಾಯಪಟ್ಟಿದ್ದು, ತಮ್ಮತಮ್ಮ ನಿರ್ಧಾರ ತಿದ್ದಿಕೊಂಡಿದ್ದೇವೆ ಎಂದಿದ್ದಾರೆ. ಇದಕ್ಕೆ ಕಾರಣ ಮೋದಿ ಅವರ ಆಡಳಿತ ವೈಖರಿ.

ಏಕ್‌ ಹೈ ತೋ ಸೇಫ್‌ ಹೈ:

ಮೋದಿ ಅವರ ಪ್ರಚಾರ ಘೋಷಣೆ ‘ಏಕ್ ಹೈ ತೋ ಸೇಫ್ ಹೈ’ (ಒಟ್ಟಾಗಿದ್ದಾಗ, ನಾವು ಸುರಕ್ಷಿತವಾಗಿರುತ್ತೇವೆ) ಎಂಬ ಘೋಷಣೆಯು ವಿಶೇಷವಾಗಿ ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಮತದಾರರಿಂದ ಅನುಮೋದನೆ ಪಡೆಯಿದಿದೆ. ಇನ್ನು ಹರ್ಯಾಣದಲ್ಲಿ ಹಿಂದಿನ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರ ನಾಯಕತ್ವ ಬದಲಾವಣೆಯಿಂದ ಹೊಸ ಮುಖಗಳು ಬಿಜೆಪಿಯ ಯಶಸ್ಸಿಗೆ ಕಾರಣವಾಗಿವೆ. ಬಿಜೆಪಿ ಸರ್ಕಾರದ ಯೋಜನೆಗಳೂ ಪ್ರಮುಖ ಪಾತ್ರ ವಹಿಸಿವು ಎಂದು ಸಮೀಕ್ಷೆ ಹೇಳಿದೆ.

ಇಂದಿನಿಂದ ಮೋದಿ 2 ದಿನಗಳ ಕುವೈತ್ ಪ್ರವಾಸ

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮತ್ತು ಭಾನುವಾರ 2 ದಿನಗಳ ಕುವೈತ್‌ ಪ್ರವಾಸ ಕೈಗೊಳ್ಳಲಿದ್ದಾರೆ. ಇದು ಇಂದಿರಾ ಗಾಂಧಿ ಬಳಿಕ 43 ವರ್ಷದಲ್ಲಿ ಮೊದಲ ಭಾರತದ ಪ್ರಧಾನಿ ಭೇಟಿಯಾಗಿದೆ.ಕುವೈತ್‌ ಎಮಿರ್‌ ಶೇಖ್‌ ಮೆಶಲ್‌ ಅಲ್‌ ಅಹ್ಮದ್‌ ಅಲ್‌ ಜಬೇರ್‌ ಅಲ್‌ ಸಬಾಹ್‌ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ 2 ದಿನದ ಕುವೈತ್‌ ಪ್ರವಾಸ ಕೈಗೊಳ್ಳಿದ್ದಾರೆ. ಈ ವೇಳೆ ಎಮಿರ್‌ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜತೆಗೆ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.1981ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಕುವೈತ್‌ಗೆ ಭೇಟಿ ನೀಡಿದ್ದರು.