ಉಗ್ರ ತಹಾವುರ್‌ ರಾಣಾ ಭಾರತಕ್ಕೆ ಗಡೀಪಾರಾದ ಬೆನ್ನಲ್ಲೇ, 2011ರಲ್ಲಿ ಮೋದಿ ಮಾಡಿದ್ದ ಟ್ವೀಟ್‌ ಒಂದು ಇದೀಗ ವೈರಲ್‌ ಆಗುತ್ತಿದೆ.

 ನವದೆಹಲಿ: ಉಗ್ರ ತಹಾವುರ್‌ ರಾಣಾ ಭಾರತಕ್ಕೆ ಗಡೀಪಾರಾದ ಬೆನ್ನಲ್ಲೇ, 2011ರಲ್ಲಿ ಮೋದಿ ಮಾಡಿದ್ದ ಟ್ವೀಟ್‌ ಒಂದು ಇದೀಗ ವೈರಲ್‌ ಆಗುತ್ತಿದೆ. 14 ವರ್ಷಗಳ ಹಿಂದೆ ಅಮೆರಿಕದ ನ್ಯಾಯಾಲಯವು, ‘166 ಜನರ ಸಾವಿಗೆ ಕಾರಣವಾದ ಮುಂಬೈ ದಾಳಿಯಲ್ಲಿ ರಾಣಾನ ನೇರ ಪಾತ್ರ ಇಲ್ಲ’ ಎಂದು ಆತನನ್ನು ದೋಷಮುಕ್ತಗೊಳಿಸಿತ್ತು. 

ಆಗ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಮೋದಿ, ‘ಮುಂಬೈ ದಾಳಿಯಲ್ಲಿ ತಹಾವುರ್ ರಾಣಾನನ್ನು ನಿರಪರಾಧಿ ಎಂದು ಅಮೆರಿಕ ಘೋಷಿಸಿದ್ದು ಭಾರತದ ಸಾರ್ವಭೌಮತ್ವಕ್ಕೆ ಅವಮಾನ. ಇದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಪ್ರಮುಖ ವಿದೇಶಾಂಗ ನೀತಿಯ ಹಿನ್ನಡೆ’ ಎಂದು ಟ್ವೀಟ್‌ ಮಾಡಿದ್ದರು.ಅವರ ಅಂದಿನ ಟ್ವೀಟ್‌ ಈಗ ವೈರಲ್‌ ಆಗುತ್ತಿದ್ದು, ‘ಮೋದಿ ಇದ್ದರೆ ಎಲ್ಲಾ ಸಾಧ್ಯ. 

ಅವರು ನುಡಿದಂತೆ ನಡೆಯುವ ನಾಯಕ’ ಎಂದು ಕೆಲವು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಪಾಕ್‌ ಮೇಲೆ ಹಾರದ ರಾಣಾ ವಿಮಾನನವದೆಹಲಿ: 26/11 ದಾಳಿಯ ಸಂಚುಕೋರ ತಹಾವುರ್‌ ರಾಣಾನನ್ನು ಅಮೆರಿಕದಿಂದ ದೆಹಲಿಗೆ ಕರೆತಂದ ಚಾರ್ಟರ್ಡ್ ಬ್ಯುಸಿನೆಸ್ ವಿಮಾನ ಗುರುವಾರ ಪಾಕಿಸ್ತಾನದ ವಾಯುಪ್ರದೇಶದ ಮೇಲೆ ಬಾರದೇ ಸುತ್ತಿ ಬಳಸಿ ಭಾರತಕ್ಕೆ ಆಗಮಿಸಿತು. ಆದರೆ ಅದು ಮತ್ತೆ ಅಮೆರಿಕಕ್ಕೆ ಹಿಂದಿರುಗುವಾಗ ಪಾಕಿಸ್ತಾನದ ಮೇಲೆ ಸಾಮಾನ್ಯ ಮಾರ್ಗದಲ್ಲೇ ಸಾಗಿತು. 

ಇದಲ್ಲದೆ, ವಿಮಾನದ ಟ್ರಾಕರ್‌ಗಳು ಅದರ ಮೇಲೆ ನಿಗಾ ಇಡುವ ಸಾಧ್ಯತೆ ಇದ್ದ ಕಾರಣ ವಿಮಾನಕ್ಕೆ ಡಮ್ಮಿ ಕೋಡ್ ಬಳಸಲಾಗಿತ್ತು ಎಂದು ಗೊತ್ತಾಗಿದೆ.