ಸಾರಾಂಶ
ನವದೆಹಲಿ: ಬೆಂಗಳೂರಿನಲ್ಲಿ ಅನಾರೋಗ್ಯದಿಂದ ಕಳೆದ ಬುಧವಾರ ನಿಧನ ಹೊಂದಿದ ‘ಸರಸ್ವತಿ ಸಮ್ಮಾನ್’ ಪುರಸ್ಕೃತ ಖ್ಯಾತ ಸಾಹಿತಿ ಡಾ। ಎಸ್.ಎಲ್. ಭೈರಪ್ಪ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ನಲ್ಲಿ ಸ್ಮರಿಸಿದ್ದಾರೆ.
‘ಕೆಲ ದಿನಗಳ ಹಿಂದೆ ನಮ್ಮ ದೇಶ ಒಬ್ಬ ಮಹಾನ್ ಚಿಂತಕ ಮತ್ತು ತತ್ವಜ್ಞಾನಿಯಾಗಿದ್ದ ಭೈರಪ್ಪನವರನ್ನು ಕಳೆದುಕೊಂಡಿತು. ಅವರೊಂದಿಗೆ ನನಗೆ ನಿಕಟ ಸಂಪರ್ಕವಿತ್ತು ಹಾಗೂ ಹಲವು ಸಂದರ್ಭಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಆಳವಾದ ಮಾತುಕತೆ ನಡೆಸಿದ್ದೆವು’ ಎಂದು ಮೋದಿ ಒಡನಾಟವನ್ನು ಮೆಲುಕು ಹಾಕಿದ್ದಾರೆ.
ಭೈರಪ್ಪನವರ ಸಾಹಿತ್ಯದ ಬಗ್ಗೆ ಮಾತನಾಡುತ್ತಾ, ‘ಅವರ ಕೃತಿಗಳು ಯುವ ಪೀಳಿಗೆಯ ಯೋಚನೆಗೆ ದಾರಿದೀಪವಾಗಿರಲಿವೆ. ಅವರ ಪುಸ್ತಕಗಳು ಹಲವು ಭಾಷೆಗಳಿಗೆ ತರ್ಜುಮೆಗೊಂಡಿವೆ. ನಮ್ಮ ಬೇರುಗಳು ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುವುದರ ಮಹತ್ವವನ್ನು ಭೈರಪ್ಪನವರು ಕಲಿಸಿದ್ದರು’ ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಕಮಾಂಡರ್ ಜತೆ ಮೋದಿ ಸಂವಾದ
ನವದೆಹಲಿ: ಮಾಸಿಕ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ನೌಕಾಪಡೆಯ ಸಿಬ್ಬಂದಿಯಾಗಿರುವ ಬೆಂಗಳೂರಿನ ಲೆಫ್ಟಿನೆಂಟ್ ಕಮಾಂಡರ್ ರೂಪಾ ಹಾಗೂ ಅವರೊಂದಿಗೆ ‘ನಾವಿಕ ಸಾಗರ್ ಪರಿಕ್ರಮ’ ಮಾಡಿದ್ದ ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.ನವರಾತ್ರಿಯ ಸಂದರ್ಭದಲ್ಲಿ ಮಹಿಳೆಯರ ಸಾಹಸ ಪ್ರವೃತ್ತಿ ಕೊಂಡಾಡಿದ ಮೋದಿ, ನಾವಿಕ ಸಾಗರ್ ಪ್ರರಿಕ್ರಮದ ಅನುಭವ, ಎದುರಾದ ಸವಾಲು, ಅದನ್ನೆದುರಿಸಿದ ರೀತಿ, ವಿವಿಧ ದೇಶಗಳಿಗೆ ಹೋದಾಗ ಅಲ್ಲಿನವರ ಪ್ರತಿಕ್ರಿಯೆಯ ಬಗ್ಗೆ ಇಬ್ಬರನ್ನೂ ಪ್ರಶ್ನಿಸಿದ್ದಾರೆ.
ಇದಕ್ಕುತ್ತರಿಸಿದ ರೂಪಾ ಹಾಗೂ ದಿಲ್ನಾ, ‘ಇದು ಜೀವನದಲ್ಲಿ ಒಂದೇ ಬಾರಿ ಸಿಗುವ ಅವಕಾಶ. ನೌಕಾಪಡೆ ನೀಡಿದ ತರಬೇತಿಯಿಂದಾಗಿ ಈ ಸಾಹಸ ಕಷ್ಟಕರವಾಗಿರಲಿಲ್ಲ. ನಮ್ಮ ಹಾಗೂ ನಾವಿದ್ದ ದೋಣಿಯ ನಿರ್ವಹಣೆಯ ಹೊಣೆ ನಮ್ಮಿಬ್ಬರ ಮೇಲೆಯೇ ಇತ್ತು. ಅದನ್ನು ಸಮರ್ಥವಾಗಿ ನಿರ್ವಹಿಸಿದೆವು. ಭೂಪ್ರದೇಶದಿಂದ ಅತಿ ದೂರದಲ್ಲಿರುವ ನೆಮೋ ಪಾಯಿಂಟ್ಗೆ ತಲುಪಿದ್ದೇ ಹೆಮ್ಮೆಯ ಕ್ಷಣವಾಗಿತ್ತು. ಸೇಲ್ಬೋಟ್ನಲ್ಲಿ ಸಾಹಸ ಮಾಡಿದ ಮೊದಲಿಗರು ನಾವು’ ಎಂದರು.ದಿಟ್ಟ ಮಹಿಳೆಯರ ಸಾಹಸಗಾಥೆಯನ್ನು ಶ್ಲಾಘಿಸಿದ ಮೋದಿ, ‘ಭಾರತದ ಪುತ್ರಿಯರ ಸಾಧನೆ ಕಂಡು ದೇಶವಾಸಿಗಳೆಲ್ಲಾ ಖುಷಿ ಪಡುತ್ತಿದ್ದಾರೆ’ ಎಂದರು.
ರೂಪಾ ಹಾಗೂ ದಿಲ್ನಾ ಅವರು ಜತೆಗೂಡಿ 2024ರ ಅ.2ರಲ್ಲಿ ಐಎನ್ಎಸ್ವಿ ತಾರಿಣಿ ಬೋಟ್ ಮೂಲಕ ಸಮುದ್ರಯಾನ ಆರಂಭಿಸಿ 2025ರ ಮೇನಲ್ಲಿ ಪೂರ್ಣಗೊಳಿಸಿದರು. 238 ದಿನದಲ್ಲಿ 47,500 ಕಿ.ಮೀ. ಪ್ರಯಾಣಿಸಿದ ಇವರು, ಕನಿಷ್ಠ 3 ಖಂಡಗಳಿಗೆ ಭೇಟಿಯಿತ್ತಿದ್ದರು. ಈ ವೇಳೆ, ಭೂ ಪ್ರದೇಶದಿಂದ ದೂರವಿರುವ ನೆಮೋ ಪಾಯಿಂಟ್ ತಲುಪಿದ್ದರು. ಈ ಸಾಹಸ ಮಾಡಿದ ಮೊದಲ ಏಷ್ಯಾದವರು ಮತ್ತು ಸೇಲ್ಬೋಟ್ನಲ್ಲಿ ಅಲ್ಲಿಗೆ ಹೋದ ಮೊದಲಿಗರು ಎಂಬ ಹೆಗ್ಗಳಿಗೆ ಗಳಿಸಿದ್ದರು.