ನಾಳೆಯಿಂದ 3 ದಿನ ಮೋದಿ ಕನ್ಯಾಕುಮಾರಿಯಲ್ಲಿ ಧ್ಯಾನ

| Published : May 29 2024, 12:52 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರ ಮುಗಿಯುತ್ತಿದ್ದಂತೆಯೇ ಮೇ 30ರಿಂದ ಜೂ.1ರವರೆಗೆ ಕನ್ಯಾಕುಮಾರಿಯಲ್ಲಿ ತಂಗಲಿದ್ದು, ಅಲ್ಲಿ 3 ದಿನ ಧ್ಯಾನ ನಡೆಸಲಿದ್ದಾರೆ.

ಪಿಟಿಐ ಚೆನ್ನೈ/ನವದೆಹಲಿ

ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರ ಮುಗಿಯುತ್ತಿದ್ದಂತೆಯೇ ಮೇ 30ರಿಂದ ಜೂ.1ರವರೆಗೆ ಕನ್ಯಾಕುಮಾರಿಯಲ್ಲಿ ತಂಗಲಿದ್ದು, ಅಲ್ಲಿ 3 ದಿನ ಧ್ಯಾನ ನಡೆಸಲಿದ್ದಾರೆ.

ಕನ್ಯಾಕುಮಾರಿಯಲ್ಲಿ ಈ ಹಿಂದೆ ಧ್ಯಾನಾಸಕ್ತರಾಗಿದ್ದ ಸ್ವಾಮಿ ವಿವೇಕಾನಂದರು ತಮ್ಮ ದಿವ್ಯದೃಷ್ಟಿಯಿಂದ ಭಾರತ ಮಾತೆಯನ್ನು ಕಂಡರು ಎಂದು ಹೇಳಲಾದ ವಿವೇಕಾನಂದ ರಾಕ್‌ ಮೆಮೋರಿಯಲ್‌ನ ಧ್ಯಾನ ಮಂಟಪದಲ್ಲಿ ಮೋದಿ ಧ್ಯಾನಾಸಕ್ತರಾಗಲಿದ್ದಾರೆ. ಮೇ 30ರ ಸಂಜೆಯಿಂದ ಜೂ.1ರ ಸಂಜೆಯವರೆಗೆ ಅವರು ಧ್ಯಾನ ಮಾಡಲಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಜೂ.1ರ ಸಂಜೆ ಅವರು ದಿಲ್ಲಿಗೆ ನಿರ್ಗಮಿಸಲಿದ್ದಾರೆ. ಆ ಹೊತ್ತಿಗೆ ಮೋದಿ ಅವರ ತವರು ಕ್ಷೇತ್ರ ವಾರಾಣಸಿ ಸೇರಿದಂತೆ ದೇಶದೆಲ್ಲೆಡೆ ಕೊನೆಯ ಚರಣದ ಮತದಾನವೂ ಮುಗಿದಿರುತ್ತದೆ.

ಈ ಹಿಂದೆ ಮೋದಿ 2019ರ ಲೋಕಸಭೆ ಚುನಾವಣೆ ಮುಗಿದ ಬಳಿಕ ಕೇದಾರನಾಥಕ್ಕೆ ತೆರಳಿ ಅಲ್ಲಿನ ಗುಹೆಯಲ್ಲಿ ಧ್ಯಾನ ಮಾಡಿದ್ದರು. ಈ ಸಲ ವಿವೇಕಾನಂದರ ತತ್ವವನ್ನು ದೇಶಕ್ಕೆ ಸಾರಬೇಕು ಎಂಬ ಉದ್ದೇಶದಿಂದ ಕನ್ಯಾಕುಮಾರಿಯನ್ನು ಮೋದಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಈ ಹಿಂದೆ ಇಡೀ ಭಾರತ ಸುತ್ತಿ ವಿವೇಕಾನಂದರು ಇಲ್ಲಿ 3 ದಿನ ಧ್ಯಾನ ಮಾಡಿದ್ದರು. ಇದೇ ಸ್ಥಳದಲ್ಲಿ ಶಿವನಿಗಾಗಿ ಪಾರ್ವತಿ ಧ್ಯಾನ ಮಾಡಿದ್ದಳು ಎಂದು ಧಾರ್ಮಿಕ ಪುಸ್ತಕಗಳು ಹೇಳುತ್ತವೆ.

ಮೋದಿ ಅವರು ಚುನಾವಣೆ ಘೋಷಣೆಗೂ ಮುನ್ನವೇ ಭಾರತ ಪರ್ಯಟನೆ ಆರಂಭಿಸಿ ನೂರಾರು ಬಿಜೆಪಿ ರ್‍ಯಾಲಿಗಳನ್ನು ನಡೆಸಿದ್ದಾರೆ ಹಾಗೂ ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳನ್ನು ಮನಸೋ ಇಚ್ಛೆ ಝಾಡಿಸಿದ್ದಾರೆ.

ಈ ನಡುವೆ, ಕೆಲವು ಬಿಜೆಪಿಗರು, ‘ಮೋದಿ ಕನ್ಯಾಕುಮಾರಿ ಭೇಟಿಯು ತಮಿಳುನಾಡಿನ ಬಗ್ಗೆ ಹೊಂದಿರುವ ಪ್ರೇಮದ ಸಂಕೇತ’ ಎಂದಿದ್ದಾರೆ.

--