ಸಾರಾಂಶ
ಸರ್ವಪಕ್ಷಗಳ ನಿಯೋಗಗಳು, ವಿದೇಶಗಳಲ್ಲಿ ಭಾರತದ ನಿಲುವನ್ನು ಪ್ರಸ್ತುತಪಡಿಸಿದ ರೀತಿಯಿಂದ ಹೆಮ್ಮೆಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ನವದೆಹಲಿ: ಪಾಕಿಸ್ತಾನ ಮತ್ತು ಭಾರತದ ನಡುವೆ ನಡೆದ ಸೇನಾ ಸಂಘರ್ಷದ ಬಳಿಕ, ವೈರಿರಾಷ್ಟ್ರದ ಉಗ್ರಮುಖವನ್ನು ವಿಶ್ವದೆದುರು ಬಯಲು ಮಾಡಲು ತೆರಳಿದ್ದ ಸರ್ವಪಕ್ಷಗಳ ನಿಯೋಗಗಳು, ವಿದೇಶಗಳಲ್ಲಿ ಭಾರತದ ನಿಲುವನ್ನು ಪ್ರಸ್ತುತಪಡಿಸಿದ ರೀತಿಯಿಂದ ಹೆಮ್ಮೆಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಪಹಲ್ಗಾಂನ ಉಗ್ರದಾಳಿಗೆ ಪ್ರತಿಯಾಗಿ ಆಪರೇಷನ್ ಸಿಂದೂರ ನಡೆಸಿದ ಬಳಿಕ, ಉಗ್ರವಾದದ ಪ್ರತಿ ಭಾರತದ ನಿಲುವನ್ನು ಸ್ಪಷ್ಟಪಡಿಸಲು 33 ದೇಶಗಳಿಗೆ 7 ನಿಯೋಗಗಳನ್ನು ಕಳಿಸಲಾಗಿತ್ತು. ಅವರೆಲ್ಲರು ಇದೀಗ ಭಾರತಕ್ಕೆ ಮರಳಿದ್ದು, ಪ್ರಧಾನಿಯವರ ನಿವಾಸದಲ್ಲಿ ಮೋದಿಯವರನ್ನು ಭೇಟಿಯಾಗಿ, ತಮ್ಮ ಅನುಭವ ಹಂಚಿಕೊಂಡರು.
ಇದರ ಫೋಟೋವನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಮೋದಿ, ‘ವಿದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿ, ಶಾಂತಿಯ ವಿಷಯದಲ್ಲಿ ನಮ್ಮ ಬದ್ಧತೆ ಮತ್ತು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಅಗತ್ಯವನ್ನು ವಿವರಿಸಿದ ನಿಯೋಗಗಳ ಸದಸ್ಯರನ್ನು ಭೇಟಿಯಾಗಿದೆ. ಅವರು ಭಾರತದ ನಿಲುವನ್ನು ಮಂಡಿಸಿದ ರೀತಿ ನಮಗೆಲ್ಲರಿಗೂ ಹೆಮ್ಮೆ ತಂದಿದೆ’ ಎಂದು ಬರೆದುಕೊಂಡಿದ್ದಾರೆ.