ಸಾರಾಂಶ
ಇಂದೋರ್: ಇಂದೋರ್ನ ರಾಜಾ ರಘುವಂಶಿ ಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ತನ್ನ ಜಾತಕದಲ್ಲಿ ಮಂಗಳ ದೋಷ ಎಂದು ಕಂಡುಕಂಡಿದ್ದ ಸೋನಂ ಇದರಿಂದ ಪಾರಾಗಲು ರಾಜಾ ರಘುವಂಶಿಯನ್ನು ಮದುವೆಯಾಗಿದ್ದಳು. ಈ ಮೂಲಕ ತನ್ನ ಪ್ರಿಯಕರನ ಜೀವ ಕಾಪಾಡುವ ಸಂಚು ರೂಪಿಸಿದ್ದಳು ಎಂಬ ವಿಷಯ ಬೆಳಕಿಗೆ ಬಂದಿದೆ.
ಮಂಗಳ ದೋಷ ಇದ್ದ ಮಹಿಳೆ ಮದುವೆಯಾದರೆ ಪತಿ ಅಕಾಲಮೃತ್ಯುವಿಗೆ ತುತ್ತಾಗುತ್ತಾನೆ ಎಂಬ ನಂಬಿಕೆ ಇದೆ. ಹೀಗಾಗಿ ತಾನು ಪ್ರಿಯಕರ ರಾಜ್ ಕುಶ್ವಾಹಾನನ್ನು ಮದುವೆಯಾದರೆ ಆತ ಸಾವನ್ನಪ್ಪಬಹುದು ಎಂಬ ಆತಂಕ ಸೋನಂಗೆ ಇತ್ತು. ಇದನ್ನು ತಪ್ಪಿಸಲೆಂದೆ ಆಕೆ ರಘುವಂಶಿಯನ್ನು ಮದುವೆಯಾಗಿ ಆತನ ಹತ್ಯೆ ಮಾಡಿದಳು. ಈ ಮೂಲಕ ಪ್ರಿಯಕರನ ಜೀವ ಕಾಪಾಡುವ ಸಂಚು ರೂಪಿಸಿದ್ದಳು ಎಂದು ರಘುವಂಶಿಯ ತಂದೇ ಅಶೋಕ್ ಆರೋಪಿಸಿದ್ದಾರೆ.
ಫೋಟೋ ಶೂಟ್ ಹೆಸರಲ್ಲಿ ಹತ್ಯೆ:
ಮೇ 11ರಂದು ಸೋನಂ ಹಾಗೂ ರಾಜಾ ರಘುವಂಶಿ ಮದುವೆಯಾಗಿದ್ದರು. ಇಬ್ಬರು ಮೇ 20ರಂದು ಮೇಘಾಲಯಕ್ಕೆ ಮಧುಚಂದ್ರಕ್ಕೆ ತೆರಳಿದ್ದರು. ಮೇ 23ರಂದು ಫೋಟೋ ಶೂಟ್ ಮಾಡೋಣ ಎಂದು ಸೋನಂ ಗಂಡನನ್ನು ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದಳು. ಆ ವೇಳೆ ಆಕೆ ಸುಪಾರಿ ಕೊಟ್ಟಿದ್ದ ಮೂವರು ಹಂತಕರು ಹಿಂಬಾಲಿಸಿ ಬಂದು, ರಘುವಂಶಿಯನ್ನು ಮಾತಾಡಿಸಿದರು. ತನಗೆ ಬಹಳ ಸುಸ್ತಾಗಿದೆ ಎಂದು ನಾಟಕ ಆರಂಭಿಸಿದ ಸೋನಂ ಗಂಡ ಮತ್ತು ಹಂತಕರ ಹಿಂದೆ ನಿಧಾನಕ್ಕೆ ಹೆಜ್ಜೆ ಹಾಕತೊಡಗಿದಳು. ಐವರೂ ನಿರ್ಜನ ಸ್ಥಳಕ್ಕೆ ತೆರಳಿದ ಬಳಿಕ ‘ಅವನನ್ನು ಕೊಲ್ಲಿ’ ಎಂದು ಹಂತಕರಿಗೆ ಕೂಗಿ ಹೇಳಿದಳು.
ಏಳೇಳು ಜನ್ಮದ ನಂಟು:ಹತ್ಯೆಗೂ ಮೊದಲು ಗಂಡನ ಫೋನ್ನಲ್ಲಿ ತಾನೇ ‘ಏಳೇಳು ಜನ್ಮಕ್ಕೂ ಜೊತೆ’ ಎಂದು ಪೋಸ್ಟ್ ಮಾಡಿದ್ದಳು. ಪ್ರಿಯಕರ ರಾಜ್ ಮೇಘಾಲಯಕ್ಕೆ ಹೋಗಿರಲಿಲ್ಲ. ಆದರೆ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಮೂಲಗಳು ತಿಳಿಸಿವೆ.
ಮದುವೆ ಮೂರೇ ದಿನಕ್ಕೆ ಸ್ಕೆಚ್:
ಗಂಡನನ್ನು ಕೊಂದರೆ ತಾನು ವಿಧವೆಯಾಗುತ್ತೇನೆ. ಆಗ ತನ್ನ ತಂದೆ ಮರುಮದುವೆಗೆ ಒಪ್ಪುತ್ತಾರೆ. ತಾವಿಬ್ಬರೂ ಮದುವೆಯಾಗಬಹುದು ಎಂದು ಪ್ರಿಯಕರ ರಾಜ್ ಕುಶ್ವಾಹನಿಗೆ ಸೋನಂ ತಿಳಿಸಿದ್ದಳು. ದರೋಡೆ ವೇಳೆ ಗಂಡ ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಸಂಚು ರೂಪಿಸಿದ್ದಳು. ಅಲ್ಲದೆ, ಮದುವೆಯಾಗಿ ಮೂರೇ ದಿನಕ್ಕೆ ಪ್ರಿಯಕರನಿಗೆ ಮೆಸೇಜ್ ಮಾಡಿ, ಗಂಡ ತನ್ನ ಜತೆ ಆಪ್ತವಾಗಿರುವುದು ಇಷ್ಟವಿಲ್ಲ ಎಂದಿದ್ದಳು ಎಂಬ ಸಂಗತಿ ವಿಚಾರಣೆ ವೇಳೆ ಹೊರಬಿದ್ದಿದೆ.
ಕೊಲೆ ಮರುದಿನ ಪ್ರೇಮಿ ಜತ ಪಯಣ:
ಗಂಡ ರಘುವಂಶಿಯನ್ನು ಕೊಂದ ಮರುದಿನ ಸೋನಂ ಹಾಗೂ ಆಕೆಯ ಪ್ರೇಮಿ ರಾಜ್ ಒಟ್ಟಿಗೆ ಇಂದೋರ್ಗೆ ಪ್ರಯಾಣ ಬೆಳೆಸಿದ್ದರು. ಆ ಬಳಿಕ ಒಟ್ಟಿಗೇ ವಾಸವಿದ್ದರು. ಪೊಲೀಸರು ಬಲೆ ಬೀಸಿದ ಬಳಿಕ ರಾಜ್ ಸೋನಂಳನ್ನು ತನ್ನ ಸ್ವಂತ ಊರು ಉತ್ತರ ಪ್ರದೇಶದ ಗಾಝಿಪುರಕ್ಕೆ ಕಳಿಸಿದ್ದ ಎಂದು ಮೇಘಾಲಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಆನಂದ್ ಕುರ್ಮಿ, ವಿಶಾಲ್, ಆಕಾಶ್ನನ್ನು ಮಂಗಳವಾರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 7 ದಿನಗಳ ಕಾಲ ಮೇಘಾಲಯ ಪೊಲೀಸರ ವಶಕ್ಕೆ ನೀಡಲಾಗಿದೆ.