ಸಾರಾಂಶ
ಮಹಾರಾಷ್ಟ್ರದ ರಾಜಧಾನಿ ಮುಂಬೈ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಸೋಮವಾರ ಭಾರೀ ಮಳೆ ಸುರಿದಿದ್ದು ಸಾಮಾನ್ಯ ಜನಜೀವನದಲ್ಲಿ ಭಾರೀ ವ್ಯತ್ಯಯವಾಗಿದೆ.
ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಸೋಮವಾರ ಭಾರೀ ಮಳೆ ಸುರಿದಿದ್ದು ಸಾಮಾನ್ಯ ಜನಜೀವನದಲ್ಲಿ ಭಾರೀ ವ್ಯತ್ಯಯವಾಗಿದೆ. ಮಳೆ ಸಂಬಂಧಿ ಅನಾಹುತಗಳಿಗೆ ಒಂದೇ ದಿನ ರಾಜ್ಯದಲ್ಲಿ 7 ಜನರು ಸಾವನ್ನಪ್ಪಿದ್ದಾರೆ.ಭಾರಿ ಮಳೆಯಿಂದಾಗಿ ನಾಂದೇಡ್ನಲ್ಲಿ ಐವರು ನಾಪತ್ತೆಯಾಗಿದ್ದಾರೆ. ಗ್ರಾಮದ 200 ಜನರು ನಡುಗಡ್ಡೆಯಲ್ಲಿ ಸಿಲುಕಿದ್ದು ಅವರ ರಕ್ಷಣೆಗೆ ಸೇನೆಯನ್ನು ನಿಯೋಜಿಸಲಾಗಿದೆ.
ಇನ್ನು ಮುಂಬೈನಲ್ಲಿ ಮಳೆಯ ಅವಾಂತರ ಹೆಚ್ಚಿದ್ದು, ಉಪನಗರ ರೈಲು ಸೇವೆ, ವಿಮಾನ ಸೇವೆಗಳು ವ್ಯತ್ಯಯವಾಗಿವೆ. ಮುಂಬೈನಲ್ಲಿ 8 ತಾಸಿನಲ್ಲಿ 17.7 ಸೆಂ.ಮೀ ಮಳೆಯಾಗಿದೆ. ವರ್ಷಧಾರೆಗೆ ಮುಂಬೈನ ಬಹುತೇಕ ರಸ್ತೆಗಳು ಜಲಾವೃತಗೊಂಡಿದ್ದವು. ಮಳೆ ಪರಿಣಾಮ ಮುಂಬೈ ಪಾಲಿಕೆಯು ಮಧ್ಯಾಹ್ನ 12 ಗಂಟೆ ಬಳಿಕ ಆರಂಭವಾಗುವ ಎಲ್ಲಾ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿತು.
ಮಕ್ಕಳ ರಕ್ಷಣೆ:ಮಳೆಯಿಂದಾಗಿ ಮುಂಬೈನ ಮಾತುಂಗಾದಲ್ಲಿನ ಡಾನ್ ಬಾಸ್ಕೋ ಶಾಲೆಯ ಬಸ್ಸು ಕೆಟ್ಟುನಿಂತಿತ್ತು. ಈ ವೇಳೆ ಪೊಲೀಸರು ಆಗಮಿಸಿ ಮಕ್ಕಳನ್ನು ರಕ್ಷಿಸಿದ್ದಾರೆ.
ಆಲಮಟ್ಟಿ ನೀರು ಬಿಡಲು ಕರ್ನಾಟಕಕ್ಕೆ ಒತ್ತಾಯ: ಸಿಎಂ
ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಆಲಮಟ್ಟಿ ಅಣೆಕಟ್ಟಿನಲ್ಲಿ ನೀರು ಹೆಚ್ಚಳವಾಗುತ್ತಿರುವುದರಿಂದ ಡ್ಯಾಂನಿಂದ ನೀರು ಬಿಡುವಂತೆ ಕರ್ನಾಟಕದ ಜತೆಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.