ಯುದ್ಧಕ್ಕೆ ಭಾರತ ಸದಾ ಸಿದ್ಧ: ರಾಜನಾಥ್‌ ಸಿಂಗ್‌

| Published : Mar 08 2024, 01:45 AM IST / Updated: Mar 08 2024, 09:17 AM IST

Rajnath-SIngh

ಸಾರಾಂಶ

ಚೀನಾ, ಪಾಕ್‌ಗೆ ರಾಜನಾಥ್‌ ಸಿಂಗ್‌ ಪರೋಕ್ಷ ಎಚ್ಚರಿಕೆ ನೀಡಿದ್ದು, ಭಾರತೀಯ ಸೇನೆ ಎಂತಹುದೇ ಪರಿಸ್ಥಿತಿಯಲ್ಲೂ ಯುದ್ಧ ಆರಂಭವಾದಲ್ಲಿ ತಿರುಗೇಟು ನೀಡಲು ಸದಾ ಕಾಲ ಸಿದ್ಧವಾಗಿದೆ ಎಂದು ಗುಡುಗಿದ್ದಾರೆ.

ನವದೆಹಲಿ: ಲಡಾಖ್‌ ಮತ್ತು ಅರುಣಾಚಲ ಗಡಿಯಲ್ಲಿ ಸದಾ ಕ್ಯಾತೆ ತೆಗೆಯುವ ಚೀನಾಗೆ ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ. 

ಭಾರತದ ಮೇಲೆ ವೈರಿಗಳು ಎಂತಹ ಸಮಯದಲ್ಲೇ ದಂಡೆತ್ತಿ ಬಂದರೂ ಅವರಿಗೆ ತಕ್ಕ ಶಾಸ್ತಿ ಮಾಡಲು ಭಾರತೀಯ ಸೇನೆ ಸದಾಕಾಲ ಸಜ್ಜಾಗಿ ನಿಂತಿರುತ್ತದೆ ಎಂದಿದ್ದಾರೆ.

ಎನ್‌ಡಿಟಿವಿ ಆಯೋಜಿಸಿದ್ದ ಸಂವಾದದಲ್ಲಿ ಗುರುವಾರ ಮಾತನಾಡಿದ ಅವರು, ‘ಭಾರತ ಇದುವರೆಗೂ ಬೇರಾವುದೇ ದೇಶದ ಮೇಲೆ ಯುದ್ಧ ಘೋಷಿಸಿಲ್ಲ ಇಲ್ಲವೇ ಮತ್ತೊಂದು ದೇಶದ ಜಾಗವನ್ನು ಅತಿಕ್ರಮಿಸಿಲ್ಲ. 

ಆದರೆ ವೈರಿಗಳು ನಮ್ಮ ಮೇಲೆ ದಾಳಿ ಮಾಡಿದಾಗಲೆಲ್ಲ ತಕ್ಕ ಶಾಸ್ತಿ ನೀಡಿದೆ ಮತ್ತು ಮುಂದೆಯೂ ಸಹ ಯಾವುದೇ ಸಮಯದಲ್ಲಿ ದಾಳಿ ಮಾಡಿದರೂ ತಕ್ಕ ಪ್ರತ್ಯುತ್ತರ ನೀಡಲು ಭಾರತೀಯ ಸೇನೆಯ ಎಲ್ಲ ಮೂರು ಅಂಗಗಳು(ಭೂ, ವಾಯು ಮತ್ತು ನೌಕಾಪಡೆಗಳು) ಸದಾಕಾಲ ಸಿದ್ಧವಾಗಿರುತ್ತದೆ. 

ಶಾಂತಿ ನೆಲೆಸಿರುವ ಸಮಯವೇ ಆಗಿರಲಿ, ನೌಕಾಪಡೆಗಳು ಸದಾಕಾಲ ಎಚ್ಚರವಾಗಿರುತ್ತವೆ’ ಎಂದು ಗುಡುಗಿದರು.

ಅಲ್ಲದೆ, ಭಾರತವು ತನ್ನ ಸೇನಾ ಶಕ್ತಿಯ ಬಲದ ಮೇಲೆ ವಿಶ್ವಾಸ ಹೊಂದಿದೆ. ಆದರೆ ಈ ಹಿಂದಿನ ಸರ್ಕಾರಗಳು (ಕಾಂಗ್ರೆಸ್‌ ಸರ್ಕಾರ) ಅಷ್ಟು ವಿಶ್ವಾಸ ಹೊಂದಿರಲಿಲ್ಲ ಎಂದು ಟೀಕಿಸಿದರು.