ಸಾರಾಂಶ
ದೆಹಲಿಗೆ ಬಿಡದ ಕಾರಣ ಕೇಂದ್ರ ಸರ್ಕಾರದ ವಿರುದ್ಧ ರೈತರ ಆಕ್ರೋಶ ಹೆಚ್ಚಿದ್ದು, ಚುನಾವಣಾ ಸಮಯದಲ್ಲಿ ನಮ್ಮ ಹಳ್ಳಿಗಳಿಗೆ ನಾವೂ ಬ್ಯಾರಿಕೇಡ್ ಹಾಕ್ತೇವೆ ಎಂದು ರಾಕೇಶ್ ಟಿಕಾಯತ್ ಎಚ್ಚರಿಸಿದ್ದಾರೆ.
ಮೇರಠ್/ಬಾಘ್ಪತ್: ರೈತರು ದೆಹಲಿಗೆ ಹೋಗಲು ಸರ್ಕಾರ ಬಿಡದಿದ್ದರೆ ಚುನಾವಣೆ ಪ್ರಚಾರದ ವೇಳೆ ಹಳ್ಳಿಗಳನ್ನು ಪ್ರವೇಶಿಸಲು ರೈತರೂ ಅವರಿಗೆ ಅನುಮತಿ ನೀಡುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ನ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಎಚ್ಚರಿಸಿದ್ದಾರೆ.
‘ದೆಹಲಿ ಚಲೋ’ ಪ್ರತಿಭಟನೆಯ ಭಾಗವಾಗಿ ದೆಹಲಿಗೆ ಹೋಗಲು ಯತ್ನಿಸಿದ ಪಂಜಾಬ್ ಮತ್ತು ಹರ್ಯಾಣ ರೈತರನ್ನು ದೆಹಲಿ ಪ್ರವೇಶಿಸದಂತೆ ನಿರ್ಬಂಧಿಸಿರುವುಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಕೇಶ್ ‘ರಸ್ತೆಗೆ ಮೊಳೆ ಹೊಡೆದು ವಾಹನ ಸಂಚಾರ ತಡೆಯುವುದು ನ್ಯಾಯಸಮ್ಮತವಲ್ಲ.
ನಮ್ಮ ದಾರಿಯಲ್ಲಿ ಅವರು ಮೊಳೆ ಹೊಡೆದರೆ ನಾವೂ ನಮ್ಮ ಹಳ್ಳಿಗಳಲ್ಲಿ ಅದನ್ನೇ ಮಾಡುತ್ತೇವೆ. ನಾವೂ ನಮ್ಮ ಗ್ರಾಮಗಳಲ್ಲಿ ಬ್ಯಾರಿಕೇಡ್ ಹಾಕುತ್ತೇವೆ’ ಎಂದು ಎಚ್ಚರಿಸಿದರು.
ಇದೇ ವೇಳೆ ರೈತರ ಹೋರಾಟದ ಮುಂದಿನ ಯೋಜನೆಗಳ ಕುರಿತು ಕಿಸಾನ್ ಯೂನಿಯನ್ ಗುರುವಾರ ಸಭೆ ನಡೆಸಲಿದೆ ಎಂದು ತಿಳಿಸಿದರು.