ಸಾರಾಂಶ
ಪುಣೆ: ‘ರಾಮಮಂದಿರ ಕಟ್ಟುವುದರಿಂದ ಹಿಂದೂ ನಾಯಕನಾಗುವುದಿಲ್ಲ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.ಭಾಗವತ್ ಅವರು ಯಾರದೇ ಹೆಸರೆತ್ತದೇ ಈ ಮಾತು ಆಡಿದ್ದಾರೆ.
ಗುರುವಾರ ಪುಣೆಯಲ್ಲಿ ಉಪನ್ಯಾಸ ಮಾಲಿಕೆಯೊದರಲ್ಲಿ ''''''''ವಿಶ್ವಗುರು ಭಾರತ'''''''' ಕುರಿತು ಭಾಷಣ ಮಾಡಿದ ಭಾಗವತ್, ‘ರಾಮ ಮಂದಿರ ಹಿಂದೂಗಳ ನಂಬಿಕೆಯ ವಿಷಯವಾಗಿದೆ. ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಹಿಂದೂಗಳು ನಂಬಿದ್ದರು. ಆದರೆ ಈಗ ನಿರ್ಮಾಣ ಮಾಡುವುದರಿಂದ ಯಾವುದೇ ವ್ಯಕ್ತಿಯು ಹಿಂದೂ ನಾಯಕನಾಗುವುದಿಲ್ಲ’ ಎಂದರು.
ಇದಲ್ಲದೆ, ‘ರಾಮ ಮಂದಿರ ನಿರ್ಮಾಣದ ಬಳಿಕ, ಇಂತಹ ಇನ್ನಷ್ಟು ಸಮಸ್ಯೆಗಳನ್ನು ಹೊರತಂದು ತಾವು ಹಿಂದೂ ನಾಯಕರಾಗಬಹುದು ಎಂದು ಹಲವರು ಭಾವಿಸಿದ್ದಾರೆ. ಇದಕ್ಕಾಗಿ ಪ್ರತಿ ದಿನ ಒಂದೊಂದು ಸಮಸ್ಯೆಯನ್ನು ಹುಡುಕಿ ತೆಗೆಯುತ್ತಿದ್ದಾರೆ. ಇದು ಸ್ವೀಕಾರಾರ್ಹವಲ್ಲ’ ಎಂದೂ ಹೇಳಿದರು.
‘ನಾವು (ಭಾರತ) ವಿಶ್ವಗುರು (ಜಾಗತಿಕ ನಾಯಕ) ಆಗಬೇಕು ಮಾತನಾಡುತ್ತೇವೆ ಮತ್ತು ‘ಮಹಾಶಕ್ತಿ’ (ಸೂಪರ್ ಪವರ್) ಆಗಬೇಕು ಎಂದು ಮಾತನಾಡುವುದಿಲ್ಲ. ಏಕೆಂದರೆ ಸೂಪರ್ ಪವರ್ ಆದ ನಂತರ ಜನರು ಹೇಗೆ ವರ್ತಿಸುತ್ತಾರೆ ಎಂಬುದನ್ನು ನಾವು ನೋಡಿದ್ದೇವೆ. ಪರಮಾಧಿಕಾರಕ್ಕಾಗಿ ಸ್ವಾರ್ಥ ಸಾಧನೆ ಮಾಡುವುದು ನಮ್ಮ ಮಾರ್ಗವಲ್ಲ’ ಎಂದು ಅವರು ನುಡಿದರು.