ಭಾರತೀಯ ಸಿನಿಮಾ ಚಳವಳಿಗೆ ನಾಂದಿ ಹಾಡಿದ್ದ ಹೆಸರಾಂತ ಚಿತ್ರ ನಿರ್ದೇಶಕ ಶ್ಯಾಮ್‌ ಬೆನೆಗಲ್‌ ನಿಧನ

| Published : Dec 24 2024, 12:45 AM IST / Updated: Dec 24 2024, 04:01 AM IST

ಭಾರತೀಯ ಸಿನಿಮಾ ಚಳವಳಿಗೆ ನಾಂದಿ ಹಾಡಿದ್ದ ಹೆಸರಾಂತ ಚಿತ್ರ ನಿರ್ದೇಶಕ ಶ್ಯಾಮ್‌ ಬೆನೆಗಲ್‌ ನಿಧನ
Share this Article
  • FB
  • TW
  • Linkdin
  • Email

ಸಾರಾಂಶ

1970 ಮತ್ತು 1980ರ ದಶಕದಲ್ಲಿ ಭಾರತೀಯ ಸಿನಿಮಾ ಚಳವಳಿಗೆ ನಾಂದಿ ಹಾಡಿದ್ದ ಹೆಸರಾಂತ ಚಲನಚಿತ್ರ ನಿರ್ದೇಶಕ ಶ್ಯಾಮ್‌ ಬೆನೆಗಲ್‌ (90) ಅವರು ಸೋಮವಾರ ಸಂಜೆ ನಿಧನರಾಗಿದ್ದಾರೆ.

ಮುಂಬೈ: 1970 ಮತ್ತು 1980ರ ದಶಕದಲ್ಲಿ ಭಾರತೀಯ ಸಿನಿಮಾ ಚಳವಳಿಗೆ ನಾಂದಿ ಹಾಡಿದ್ದ ಹೆಸರಾಂತ ಚಲನಚಿತ್ರ ನಿರ್ದೇಶಕ ಶ್ಯಾಮ್‌ ಬೆನೆಗಲ್‌ (90) ಅವರು ಸೋಮವಾರ ಸಂಜೆ ನಿಧನರಾಗಿದ್ದಾರೆ.

ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಮುಂಬೈನ ವೊಕಾರ್ಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಂಜೆ 6:30ರ ಸುಮಾರಿಗೆ ಸಾವನ್ನಪ್ಪಿರುವ ಬಗ್ಗೆ ಅವರ ಪುತ್ರಿ ಪಿಯಾ ಬೆನೆಗಲ್‌ ಧೃಡಪಡಿಸಿದ್ದಾರೆ. 

ಅವರು ಪತ್ನಿ ನೀರಾ ಬೆನಗಲ್ ಮತ್ತು ಪುತ್ರಿ ಪಿಯಾ ಬೆನಗಲ್ ಅವರನ್ನು ಅಗಲಿದ್ದಾರೆ.ಬೆನೆಗಲ್‌ ಅವರು ಡಿ.14ರಂದು ತಮ್ಮ 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಅಂದು ಲವಲವಿಕೆಯಿಂದಲೇ ಅವರು ಫೋಟೋಗೆ ಪೋಸ್‌ ನೀಡಿದ್ದರು. ಆದರೆ ಅವರ ದಿಢೀರ್ ಸಾವು ಸುದ್ದಿ ಅಭಿಮಾನಿಗಳಿಗೆ ಆಘಾತ ತರಿಸಿದೆ. ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಗಣ್ಯರು, ಅಭಿಮಾನಿಗಳು ಸಾವಿನ ಬಗ್ಗೆ ಅತೀವ ದುಃಖ ವ್ಯಕ್ತಪಡಿಸಿದ್ದಾರೆ.

ಜನಪ್ರಿಯ ಚಿತ್ರಗಳು:

ವೆಲ್ಕಂ ಟು ಸಜ್ಜನಪುರ್‌, ಅಂಕುರ್‌, ನಿಶಾನ್‌, ಮಂಥನ್‌, ಜುಬೈದಾ, ಸರ್ದಾರಿ ಬೆನೆಗಲ್‌ ಅವರ ನಿರ್ದೇಶನದಲ್ಲಿ ಮೂಡಿಬಂದ ಕೆಲ ಜನಪ್ರಿಯ ಚಿತ್ರಗಳು. ಭಾರತ್‌ ಏಕ್‌ ಖೋಜ್‌, ಸಂವಿಧಾನ್‌- ಇವು ಅವರ ಜನಪ್ರಿಯ ದೂರದರ್ಶನ ಧಾರಾವಾಹಿಗಳು. ಶಬಾನಾ ಅಜ್ಮಿ ಅವರ ಅವರ ‘ಮಂಡಿ’  ಚಿತ್ರವು ರಾಜಕೀಯ ಮತ್ತು ವೇಶ್ಯಾವಾಟಿಕೆಯ ವಿಡಂಬನೆಗೆ ಹೆಸರುವಾಸಿಯಾಗಿದೆ.

ಪದ್ಮಗಳ ಸರದಾರ:

ಇವರಿಗೆ ಭಾರತ ಸರ್ಕಾರ 1976ರಲ್ಲಿ ಪದ್ಮಶ್ರೀ ಹಾಗೂ 1991ರಲ್ಲಿ ಪದ್ಮ ಭೂಷಣ ನೀಡಿ ಸನ್ಮಾನಿಸಿತ್ತು. ಅವರು 1980 ರಿಂದ 1986 ರವರೆಗೆ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ (ಎನ್ಎಫ್‌ಡಿಸಿ) ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದರು.

ಪೂರ್ವಜರು ಕರ್ನಾಟಕದವರು

ಶ್ಯಾಂ ಬೆನಗಲ್‌ ಅವರ ಪೂರ್ವಜರು ಮೂಲತಃ ಕರ್ನಾಟಕದವರು. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ ಬೆಣಗಲ್‌ ಎಂಬ ಊರಿದೆ.

ಕಲಾತ್ಮಕ ಚಿತ್ರಗಳ ಹರಿಕಾರ ಬೆನಗಲ್‌

ಕಲಾತ್ಮಕ ಚಿತ್ರಗಳ ಹರಿಕಾರರಲ್ಲಿ ಒಬ್ಬರು ಎಂದೇ ಹೆಸರಾಗಿದ್ದ ಶ್ಯಾಮ್ ಬೆನಗಲ್ ಹುಟ್ಟಿದ್ದು ಹೈದರಾಬಾದ್‌ನಲ್ಲಿ. ಪ್ರಸಿದ್ಧ ಛಾಯಾಗ್ರಾಹಕರಾಗಿದ್ದ ಅವರ ತಂದೆ ಶ್ರೀಧರ್ ಬೆನಗಲ್‌ ಮೂಲತಃ ಕರ್ನಾಟಕದ ಬೆನಗಲ್‌ನವರು. ಜಾಹೀರಾತು ಸಂಸ್ಥೆಯಲ್ಲಿ ಅಲೆಕ್ ಪದಮ್‌ಸೀ ಜತೆ ಕೆಲಸ ಮಾಡಿದ ಶ್ಯಾಮ್, ನಂತರ ಚಿತ್ರರಂಗಕ್ಕೆ ಕಾಲಿಟ್ಟರು. ಭಾರತದ ಅತ್ಯುತ್ತಮ ನಿರ್ದೇಶಕರ ಸಾಲಲ್ಲಿ ಹೆಸರು ಪಡೆದರು.1973ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಬೆನಗಲ್ ಒಂದರ ಹಿಂದೆ ಒಂದರಂತೆ ಚಿತ್ರಗಳನ್ನು ನಿರ್ಮಿಸುತ್ತಲೇ ಹೋದರು. 

ಅಲ್ಲಿಯ ತನಕ ಬಾಲಿವುಡ್ ಪ್ರೇಮ,ವಿರಹ, ದ್ವೇಷಗಳ ಕತೆಯನ್ನೇ ನೆಚ್ಚಿಕೊಂಡಿತ್ತು. ಶ್ಯಾಮ್ ಬೆನಗಲ್ ಮೊದಲ ಬಾರಿಗೆ ಜನಸಾಮಾನ್ಯರ, ನೆಲಮೂಲದ ಮಂದಿಯ, ಆಧುನಿಕ ಮಧ್ಯಮವರ್ಗದವರ ಕತೆಗಳನ್ನು ತೆರೆಗೆ ತಂದರು. ಮಹಾಭಾರತದ ಕತೆಯನ್ನಿಟ್ಟುಕೊಂಡು ಕಲಿಯುಗ್ ಚಿತ್ರ ನಿರ್ಮಿಸಿದರು. ಅವರು ನಿರ್ದೇಶಿಸಿದ ಅಂಕುರ್‌, ನಿಶಾಂತ್, ಮಂಥನ್, ಭೂಮಿಕಾ, ಕೊಂಡೂರ, ಮಾಮ್ಮೋ- ರಾಷ್ಟ್ರಪ್ರಶಸ್ತಿಗಳನ್ನು ತಂದುಕೊಟ್ಟವು. ಜುನೂನ್, ಮಂಡಿ, ತ್ರಿಕಾಲ್ ಅವರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದವು. ಹದಿನೆಂಟು ರಾಷ್ಟಪ್ರಶಸ್ತಿಗಳನ್ನು ಗಳಿಸಿದ್ದ ಶ್ಯಾಮ್ ಬೆನಗಲ್ ಕೊನೆಯ ತನಕವೂ ತಮ್ಮ ದಾರಿ ಬಿಟ್ಟು ಹೋಗಲಿಲ್ಲ. ಸತ್ಯಜಿತ್ ರೇ ಸಾಕ್ಷ್ಯಚಿತ್ರಗಳನ್ನೂ ಅವರು ನಿರ್ದೇಶಿಸಿದ್ದರು. ರಾಜಕಾರಣದಲ್ಲೂ ಸಕ್ರಿಯರಾಗಿದ್ದ ಶ್ಯಾಮ್ ಬೆನಗಲ್. ನೆಹರೂ ಬರೆದ ಡಿಸ್ಕವರಿ ಆಫ್ ಇಂಡಿಯಾ ಆಧರಿಸಿ ಭಾರತ್ ಏಕ್ ಖೋಜ್ ಎಂಬ ಧಾರಾವಾಹಿಯನ್ನೂ ದೂರದರ್ಶನಕ್ಕೆ ನಿರ್ಮಿಸಿದ್ದರು.

ಅವರು ನನ್ನ ಅಣ್ಣನಂತಿದ್ದರು: ಅನಂತನಾಗ್

ನನ್ನನ್ನು ಶ್ಯಾಮ್ ಬೆನಗಲ್‌ಗೆ ಪರಿಚಯ ಮಾಡಿಕೊಟ್ಟದ್ದು ನನ್ನ ರಂಗಭೂಮಿಯ ಗುರು ಸತ್ಯದೇವ್ ದುಬೆ. ನನ್ನನ್ನು ನೋಡಿದ ಕೂಡಲೇ ಅ‍ವರು ಆಯ್ಕೆ ಮಾಡಿದರು. ಅವರ ಮೊದಲ ಚಿತ್ರದಿಂದ ಹಿಡಿದು ಸತತವಾಗಿ ಆರು ಸಿನಿಮಾಗಳಲ್ಲಿ ನಾನು ನಟಿಸಿದೆ. ಬಹುಶಃ ಅವರ ಜತೆ ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿದವನು ನಾನೇ ಇರಬೇಕು. 1973ರಲ್ಲಿ ಅಂಕುರ್ ಚಿತ್ರದಿಂದ ನಮ್ಮ ಒಡನಾಟ ಆರಂಭವಾಯಿತು. ನಂತರ ಗಿರೀಶ್ ಕಾರ್ನಾಡರೂ ನಮಗೆ ಜತೆಯಾದರು.

ಹಿಂದಿ ಚಿತ್ರರಂಗಕ್ಕೆ ವಿಭಿನ್ನವಾದ ಚಿತ್ರಗಳನ್ನು ಕೊಟ್ಟು, ಭಿನ್ನ ಹಾದಿಯನ್ನು ತುಳಿದವರು ಶ್ಯಾಮ್. ಅವರು ಯಾವ ಆಮಿಷಗಳಿಗೂ ಮಣಿಯದೇ ತಮ್ಮ ದಾರಿಯಲ್ಲಿ ಹಟದಿಂದ ಸಾಗಿದರು. ಅವರಿಗೆ ಬೆಂಗಳೂರಿನಲ್ಲಿ ಬಂದು ವಾಸ ಮಾಡಬೇಕು ಅನ್ನುವ ಆಸೆಯೂ ಇತ್ತು. ಕೋರಮಂಗಲದಲ್ಲಿ ಅವರೊಂದು ಮನೆ ಕೊಂಡುಕೊಂಡಿದ್ದರು. ಅದರ ಆರಂಭೋತ್ಸವ ನನ್ನಿಂದಲೇ ಮಾಡಿಸಿದ್ದರು. ಆದರೆ ಒಂದು ದಿನವೂ ಅದರಲ್ಲಿ ವಾಸ ಮಾಡಲಿಲ್ಲ. ಇಲ್ಲಿ ಅಷ್ಟೇನೂ ಅವಕಾಶ ಸಿಗುವುದಿಲ್ಲ ಎಂದು ಗೊತ್ತಾದ ನಂತರ ಮನೆ ಮಾರಿ ಮುಂಬಯಿಗೆ ಮರಳಿದರು.ನಾನು ರಾಜಕೀಯ ಸೇರಿದಾಗ ಅವರು ಪತ್ರಕರ್ತರ ಹತ್ತಿರ ಎಂಥಾ ಒಳ್ಳೇ ನಟ, ರಾಜಕಾರಣಿಯಾದರು ಅಂತ ತಕರಾರು ಎತ್ತಿದ್ದರು. ಅವರು ಆಮೇಲೆ ಸಿಕ್ಕಾಗ, ನನ್ನಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಿದ್ದು ನೀವು ಮತ್ತು ನಿಮ್ಮ ಸಿನಿಮಾಗಳು. ಈಗ ನೀವೇ ಹೀಗಂದರೆ ಹ್ಯಾಗೆ ಅಂತ ಕೇಳಿದ್ದೆ. ಅವರಿಗೆ ನನ್ನ ಮೇಲೆ ವಿಶೇಷವಾದ ಪ್ರೀತಿಯಿತ್ತು. ಪ್ರತಿ ಹುಟ್ಟುಹಬ್ಬಕ್ಕೂ ಅವರಿಗೆ ಶುಭಾಶಯ ಹೇಳುತ್ತಿದ್ದೆ. ಈ ಸಲ ಅವರು ಕಾಯಿಲೆ ಬಿದ್ದದ್ದು ಗೊತ್ತಾಗಿದ್ದರಿಂದ ಫೋನ್ ಮಾಡಿರಲಿಲ್ಲ.

ಅವರು ನನ್ನ ಅಣ್ಣನ ಸ್ಥಾನದಲ್ಲಿದ್ದರು. ಅವರ ಮಾತನ್ನು ನಾನು ಯಾವತ್ತೂ ಮೀರಿರಲಿಲ್ಲ.