ಸಾರಾಂಶ
ಬಿಜೆಪಿ ಮುಖಂಡ ಹಾಗೂ ದಿಲ್ಲಿ ಸಿಎಂ ಆತಿಶಿ ವಿರುದ್ಧ ಕಣಕ್ಕಿಳಿದಿರುವ ರಮೇಶ್ ಬಿಧೂರಿ ಅವರು, ‘ಒಂದು ವೇಳೆ ಚುನಾವಣೆಯಲ್ಲಿ ನಾವು ಗೆದ್ದರೆ ದಿಲ್ಲಿಯ ರಸ್ತೆಗಳನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೆನ್ನೆಯ ರೀತಿ ನುಣುಪಾಗಿ ಅಭಿವೃದ್ಧಿಪಡಿಸುತ್ತೇವೆ’ ಎಂದಿದ್ದಾರೆ.
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಕಾವು ರಂಗೇರಿರುವ ನಡುವೆಯೇ ಬಿಜೆಪಿ ಮುಖಂಡ ಹಾಗೂ ದಿಲ್ಲಿ ಸಿಎಂ ಆತಿಶಿ ವಿರುದ್ಧ ಕಣಕ್ಕಿಳಿದಿರುವ ರಮೇಶ್ ಬಿಧೂರಿ ಅವರು, ‘ಒಂದು ವೇಳೆ ಚುನಾವಣೆಯಲ್ಲಿ ನಾವು ಗೆದ್ದರೆ ದಿಲ್ಲಿಯ ರಸ್ತೆಗಳನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೆನ್ನೆಯ ರೀತಿ ನುಣುಪಾಗಿ ಅಭಿವೃದ್ಧಿಪಡಿಸುತ್ತೇವೆ’ ಎಂದಿದ್ದಾರೆ.
ಇದು ಕಾಂಗ್ರೆಸ್ ಕೆಂಗಣ್ಣಿಗೆ ಕಾರಣವಾಗಿದ್ದು, ‘ಇಂಥ ಅಸಭ್ಯ ಹೇಳಿಕೆ ಸರಿಯಲ್ಲ. ಬಿಜೆಪಿ ಮಹಿಳಾ ವಿರೋಧಿ ಪಕ್ಷ’ ಎಂದು ಕರೆದಿದೆ. ಆಪ್ ನಾಯಕ ಸಂಜಯ ಸಿಂಗ್ ಕೂಡ ಈ ಹೇಳಿಕೆ ಖಂಡಿಸಿದ್ದಾರೆ.
ಆದರೆ ತಮ್ಮ ಹೇಳಿಕೆಗೆ ಬಿಧೂರಿ ವಿಷಾದಿಸಿದ್ದು, ‘ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದವಿದೆ’ ಎಂದಿದ್ದಾರೆ. ಆದರೂ ಸಮರ್ಥನೆ ಕೂಡ ನೀಡಿದ್ದು, ‘ಲಾಲು ಯಾದವ್ ಬಿಹಾರದ ರಸ್ತೆಗಳನ್ನು ಹೇಮಾ ಮಾಲಿನಿ ಕೆನ್ನೆಯಂತೆ ನಯವಾಗಿಸುತ್ತೇನೆ ಎಂದಿದ್ದರು. ಈಗ ನನ್ನ ಹೇಳಿಕೆಯಿಂದ ಕಾಂಗ್ರೆಸ್ಗೆ ನೋವಾಗುತ್ತಿದ್ದರೆ, ಹೇಮಾಮಾಲಿನಿ ಬಗ್ಗೆ ಯಾಕಿಲ್ಲ? ಹೇಮಾಮಾಲಿನಿ ಮಹಿಳೆ ಅಲ್ಲವೇ? ಲಾಲು ಯಾದವ್ ಅವರನ್ನು ಪ್ರಶ್ನೆ ಮಾಡದವರು, ನನ್ನನ್ನು ಹೇಗೆ ಪ್ರಶ್ನಿಸಿತ್ತಾರೆ?’ ಎಂದಿದ್ದಾರೆ.
ಕಾಂಗ್ರೆಸ್, ಆಪ್ ಕಿಡಿ:
ಆದರೆ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಈ ಬಗ್ಗೆ ಕಿಡಿಕಾರಿದ್ದು, ‘ರಮೇಶ್ ಬಿಧೂರಿ ಹೇಳಿಕೆ ಅವರ ಮತ್ತು ಪಕ್ಷದ ಮನಸ್ಥಿತಿ ತೋರಿಸುತ್ತದೆ. ಇದು ಬಿಜೆಪಿಯ ನಿಜವಾದ ಮುಖ. ಪಕ್ಷದ ಹೈಕಮಾಂಡ್ ನಾಯಕರು ಪ್ರಿಯಾಂಕಾ ಗಾಂಧಿಯವರಲ್ಲಿ ಕೈಜೋಡಿಸಿ ಕ್ಷಮೆ ಕೇಳಬೇಕು’ ಎಂದದಿದ್ದಾರೆ.
ಆಪ್ ನಾಯಕ ಸಂಜಯ್ ಸಿಂಗ್ ಕೂಡ ಈ ಹೇಳಿಕೆಗೆ ಆಕ್ರೋಶ ವ್ಯಕ್ತ ಪಡಿಸಿದ್ದು, ‘ ಇಂತಹ ನಾಚಿಕೆಯಿಲ್ಲದ ಕಾಮೆಂಟ್ಗಳನ್ನು ಮಾಡುವುದು ದುರಾದೃಷ್ಟಕರ. ಬಿಜೆಪಿ ಅಭ್ಯರ್ಥಿಯ ಭಾಷೆಗಳನ್ನು ಕೇಳಿದರೆ ಇದು ಅವರು ಮಹಿಳೆಗೆ ತೋರಿಸುವ ಗೌರವದ ಬಗ್ಗೆ ಹೇಳುತ್ತದೆ. ದೆಹಲಿಯ ಮಹಿಳೆಯರ ಗೌರವ ಅವರ ಕೈಯಲ್ಲಿ ಸುರಕ್ಷಿತವಾಗಿರುತ್ತದೆಯೇ’ ಎಂದಿದ್ದಾರೆ.ರಮೇಶ್ ಬಿಧೂರಿ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲೇನಲ್ಲ. 2023ರಲ್ಲಿ ತಾವು ಸಂಸದರಾಗಿದ್ದ ಸಂದರ್ಭದಲ್ಲಿ ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ಅವರನ್ನು ಲೋಕಸಭೆಯಲ್ಲಿ ದೇಶದ್ರೋಹಿ ಎಂದು ಕರೆದು ವಿವಾದ ಸೃಷ್ಟಿಸಿದ್ದರು.
ಆತಿಶಿ ತಂದೆ ಕೂಡ ಬದಲಿಸಿಕೊಂಡ್ರು: ಬಿಧೂರಿ ಕೀಳುನುಡಿ
ನವದೆಹಲಿ: ಪ್ರಿಯಾಂಕಾ ಬಗ್ಗೆ ವಿವಾದಿತ ಹೇಳಿಕೆ ನೀಡಿದ ಬೆನ್ನಲ್ಲೇ ತಮ್ಮ ವಿರುದ್ಧ ಸ್ಪರ್ಧಿ ಸಿರುವ ದಿಲ್ಲಿ ಸಿಎಂ ಆತಿಶಿ ವಿರುದ್ಧವೂ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧೂರಿ ಆಕ್ಷೇಪದ ಹೇಳಿಕೆ ನೀಡಿದ್ದಾರೆ. ‘ಆತಿಶಿ ಉಪ ನಾಮ ಮೊದಲು ಮಲ್ರೇನಾ ಎಂದಿತ್ತು. ಈಗ ಸಿಂಗ್ ಎಂದು ಬದಲಿ ಸಿದ್ದಾರೆ. ಆತಿಶಿ ತಂದೆಯನ್ನೂ ಬದಲಿ ಸಿಕೊಳ್ಳುವ ಮೂಲಕ ನೈಜ ಚಾರಿತ್ರ್ಯ ಪ್ರದರ್ಶಿಸಿದ್ದಾರೆ’ ಎಂದಿದ್ದಾರೆ.