ಸಾರಾಂಶ
ಮುಂಬೈ: ಕಳೆದ ಏಪ್ರಿಲ್ನಲ್ಲಿ ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ನಡೆಸಿದ್ದ ಆರೋಪಿಗಳು ತಾವು ಸಲ್ಮಾನ್ರನ್ನು ಕೊಲೆ ಮಾಡುವ ಉದ್ದೇಶ ಹೊಂದಿದ್ದಾಗಿ ಹೇಳಿದ್ದಾರೆ.
ಏ.14 ಬೆಳಗ್ಗೆ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ನಡೆದ ಪ್ರಕರಣದಲ್ಲಿ ಆರೋಪಿಗಳಿಗೆ ಮಹಾರಾಷ್ಟ್ರ ಸಂಘಟಿತ ಅಪರಾಧ ತಡೆ ವಿಶೇಷ ಕೋರ್ಟ್ ಜಾಮೀನು ನಿರಾಕರಿಸಿದೆ. ಆರೋಪಿ ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ ಬಂಧಿತ ಲಾರೆನ್ಸ್ ಬಿಷ್ಣೋಯಿ ಸೋದರ ಅನ್ಮೋಲ್ ಬಿಷ್ಣೋಯಿ ಸೂಚನೆ ಮೇರೆಗೆ ಸಲ್ಮಾನ್ ಖಾನ್ರನ್ನು ಕೊಲೆ ಮಾಡುವ ಕೃತ್ಯಕ್ಕೆ ಸಂಚು ರೂಪಿಸಿ, ಗುಂಡಿನ ದಾಳಿ ನಡೆಸಿದ್ದಾಗಿ ನ್ಯಾಯಾಲಯದಲ್ಲಿ ಹೇಳಿದ್ದಾರೆ. ಈ ಕಾರಣವಾಗಿ ಇಲ್ಲಿನ ವಿಶೇಷ ನ್ಯಾಯಮೂರ್ತಿ ಬಿ.ಡಿ.ಶೆಲ್ಕೆ ಅವರು ಜಾಮೀನು ನಿರಾಕರಿಸಿದ್ದಾರೆ.
ಸಲ್ಮಾನ್ಗೆ ಬೆದರಿಕೆ ಒಡ್ಡಿ ತಪ್ಪು ಮಾಡಿದೆ: 5 ಕೋಟಿ ಕೇಳಿದ್ದ ಆರೋಪಿಯ ಕ್ಷಮೆ!
ಮುಂಬೈ: ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನೊಂದಿಗಿನ ವೈರತ್ವ ಅಂತ್ಯಗೊಳಿಸಲು 5 ಕೋಟಿ ರು. ಬೇಡಿಕೆಯಿಟ್ಟು ನಟ ಸಲ್ಮಾನ್ ಖಾನ್ಗೆ ಬೆದರಿಕೆ ಸಂದೇಶ ಕಳಿಸಿದ್ದಾತ ಸೋಮವಾರ ಮತ್ತೊಂದು ಸಂದೇಶ ಕಳಿಸಿದ್ದು, ತಾನು ಮಾಡಿದ್ದು ತಪ್ಪಾಯಿತು ಎಂದು ಕ್ಷಮೆ ಯಾಚಿಸಿದ್ದಾನೆ. ಈ ಹಿಂದೆ ಸಂದೇಶ ಕಳುಹಿಸಿದ್ದ ಮೊಬೈಲ್ ಸಂಖ್ಯೆಯಿಂದಲೇ ಮುಂಬೈ ಪೊಲೀಸರಿಗೆ ಈ ಸಂದೇಶ ರವಾನಿಸಲಾಗಿದ್ದು, ಅದರಲ್ಲಿ ಹಿಂದಿನ ಬೆದರಿಕೆ ಸಂದೇಶ ಕಳುಹಿಸಿ ತಪ್ಪು ಮಾಡಿದೆ ಎಂದು ಕ್ಷಮೆ ಯಾಚಿಸಲಾಗಿದೆ. ಈ ಸಂದೇಶವನ್ನು ಜಾರ್ಖಂಡ್ನಿಂದ ರವಾನೆಯಾದ ಸುಳಿವು ಸಿಗುತ್ತಿದ್ದಂತೆ ಅದರ ಹಿಂದಿರುವ ವ್ಯಕ್ತಿಯ ಪತ್ತೆಗೆ ಮುಂಬೈ ಪೊಲೀಸ್ ಜಾರ್ಖಂಡ್ಗೆ ತೆರಳಿದ್ದಾರೆ.