ಸಾರಾಂಶ
ನವದೆಹಲಿ: ‘ನೀಟ್-ಯುಜಿ ಪರೀಕ್ಷೆಯಲ್ಲಿ ದೇಶಾದ್ಯಂತ ಅಕ್ರಮ ನಡೆದಿಲ್ಲ. ಕೆಲವೇ ಕಡೆ ನಡೆದ ಆರೋಪ ಇದೆ. ಹೀಗಾಗಿ ಇಡೀ ಪರೀಕ್ಷೆಯನ್ನೇ ರದ್ದು ಮಾಡುವುದು ತರ್ಕಬದ್ಧವಲ್ಲ. ರದ್ದು ಮಾಡಿದರೆ ಪ್ರಮಾಣಿಕವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ’ ಎಂದು ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಹೇಳಿದೆ.
ಶುಕ್ರವಾರ ಪ್ರತ್ಯೇಕ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಶಿಕ್ಷಣ ಸಚಿವಾಲಯ ಹಾಗೂ ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗಳು, ‘571 ನಗರಗಳ 4,750 ಕೇಂದ್ರಗಳಲ್ಲಿ 23 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ದೇಶಾದ್ಯಂತ ಪರೀಕ್ಷೆಯ ಗೌಪ್ಯತೆಗೆ ಧಕ್ಕೆಯಾಗಿದೆ ಎನ್ನುವುದಕ್ಕೆ ಸಾಕ್ಷ್ಯಗಳಿಲ್ಲ. ಈಗಾಗಲೇ ಫಲಿತಾಂಶ ಪ್ರಕಟವಾಗಿರುವುದರಿಂದ ಪರೀಕ್ಷೆಯ ರದ್ದತಿ ತರ್ಕಬದ್ಧವಲ್ಲ ಕೆಲವೇ ಕೇಂದ್ರಗಳಲ್ಲಿ ಅಕ್ರಮ ನಡೆದ ಆರೋಪ ಇದೆ. ಹೀಗಾಗಿ ದೇಶಾದ್ಯಂತ ಪರೀಕ್ಷೆ ರದ್ದು ಮಾಡಿದರೆ ನ್ಯಾಯಯುತವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿವೆ.
ವಿವಿಧ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ಮೇ 5ರಂದು ನಡೆದ ನೀಟ್-ಯುಜಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ವಂಚನೆ, ಅಭ್ಯರ್ಥಿಗಳ ಬದಲಿ, ಬೇಕಾಬಿಟ್ಟಿ ಕೃಪಾಂಕ ನೀಡಿಯೆಂಹ ಅಕ್ರಮಗಳು ವರದಿಯಾಗಿದ್ದವು. ಇದನ್ನು ವಿರೋಧಿಸಿ ಹಲವೆಡೆ ಪ್ರತಿಭಟನೆಗಳಾಗಿ ಮರುಪರೀಕ್ಷೆಯ ಕೂಗು ಕೇಳಿಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ನೀಟ್ ಅಭ್ಯರ್ಥಿಗಳು, ಅವರ ಪೋಷಕರು ಹಾಗೂ ತರಬೇತಿ ಸಂಸ್ಥೆಗಳಿಂದ ನ್ಯಾಯಾಲಯಕ್ಕೆ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರ ವಿಚಾರಣೆ ಜು.8ಕ್ಕೆ ನಡೆಯಲಿದೆ.