ಸಾರಾಂಶ
ದಿಲ್ಲಿಯಲ್ಲಿ ಶೃಂಗೇರಿ ಶಾರದಾ ಪೀಠದಿಂದ ನಡೆಸಲ್ಪಡುವ ಶ್ರೀ ಶಾರದಾ ಇಂಡಿಯನ್ ಮ್ಯಾನೇಜ್ಮೆಂಟ್ ಸಂಸ್ಥೆಯ ಸಂಚಾಲಕ, ಸ್ವಾಮಿ ಚೈತನ್ಯಾನಂದ ಸರಸ್ವತಿ (ಪಾರ್ಥಸಾರಥಿ) ವಿರುದ್ಧ ಅದೇ ಸಂಸ್ಥೆಯ 17 ವಿದ್ಯಾರ್ಥಿನಿಯರು ಲೈಂ*ಕ ದೌರ್ಜನ್ಯದ ಆರೋಪ ಮಾಡಿದ್ದಾರೆ.
ನವದೆಹಲಿ : ದಿಲ್ಲಿಯಲ್ಲಿ ಶೃಂಗೇರಿ ಶಾರದಾ ಪೀಠದಿಂದ ನಡೆಸಲ್ಪಡುವ ಶ್ರೀ ಶಾರದಾ ಇಂಡಿಯನ್ ಮ್ಯಾನೇಜ್ಮೆಂಟ್ ಸಂಸ್ಥೆಯ ಸಂಚಾಲಕ, ಸ್ವಾಮಿ ಚೈತನ್ಯಾನಂದ ಸರಸ್ವತಿ (ಪಾರ್ಥಸಾರಥಿ) ವಿರುದ್ಧ ಅದೇ ಸಂಸ್ಥೆಯ 17 ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.
ಈ ಕುರಿತು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಅವರು ನಾಪತ್ತೆ ಆಗಿದ್ದು, ಪೊಲೀಸರು ಶೋಧ ಆರಂಭಿಸಿದ್ದಾರೆ. ಸ್ವಾಮಿ ವಿದೇಶದಲ್ಲಿದ್ದಾರೋ ಅಥವಾ ದೇಶದಲ್ಲೇ ಇದ್ದಾರೋ ಎಂಬುದರ ತಲಾಶೆ ನಡೆದಿದೆ. ಆಗ್ರಾದಲ್ಲಿ ಸ್ವಾಮಿಯ ಕೊನೆಯ ಲೊಕೇಶನ್ ಪತ್ತೆಯಾಗಿದೆ. ಸ್ವಾಮಿ ದೇಶ ಬಿಟ್ಟು ಹೋಗದಂತೆ ಲುಕೌಟ್ ನೋಟಿಸ್ ಜಾರಿ ಮಾಡಲಾಗಿದೆ.
ಇದರ ಬೆನ್ನಲ್ಲೇ ಸ್ವಾಮಿ ಚೈತನ್ಯಾನಂದ ಸರಸ್ವತಿ ಪ್ರಕರಣದ ಬಗ್ಗೆ ಶೃಂಗೇರಿಯ ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಂ ಹೇಳಿಕೆ ಬಿಡುಗಡೆ ಮಾಡಿದ್ದು, ಸ್ವಾಮಿಯೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುವುದಾಗಿ ಹೇಳಿದೆ ಹಾಗೂ ಅವರ ಕೃತ್ಯವನ್ನು ಖಂಡಿಸಿದ್ದು, ವಿದ್ಯಾರ್ಥಿನಿಯರ ಹಿತರಕ್ಷಣೆ ಭರವಸೆ ನೀಡಿದೆ.
ಏನಿದು ಪ್ರಕರಣ?:
‘ಸ್ವಾಮಿ ನಮ್ಮನ್ನು ತಮ್ಮ ಕೋಣೆಗೆ ಕರೆಯುತ್ತಿದ್ದರು. ಪುಕ್ಕಟೆಯಾಗಿ ವಿದೇಶ ಪ್ರವಾಸ ಮಾಡಿಸುವುದಾಗಿ ಆಮಿಷ ಒಡ್ಡಿ ಅಥವಾ ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ಬೆದರಿಸಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು’ ಎಂದು ಸಂತ್ರಸ್ತ ವಿದ್ಯಾರ್ಥಿನಿಯರು ವಸಂತ ಕುಂಜ ಠಾಣೆಯಲ್ಲಿ ಆ.4ರಂದು ದೂರಿತ್ತಿದ್ದರು.
ಪೊಲೀಸರು ಇದರ ತನಿಖೆಗೆ ಇಳಿದಾಗ ಕಳೆದ 16 ವರ್ಷಗಳಿಂದ ಚೈತನ್ಯಾನಂದ ಸುಮಾರು 50 ಮಂದಿಯನ್ನು ಹೀಗೆ ಶೋಷಿಸಿರುವುದಕ್ಕೆ ಸಾಕ್ಷಿಯಾಗಿ ವಾಟ್ಸ್ಅಪ್ ಸಂದೇಶಗಳು ಲಭಿಸಿವೆ. ಸಿಸಿಟೀವಿ ಪರಿಶೀಲಿಸಲಾಗುತ್ತಿದ್ದು, ಹಲವು ಕಡೆ ದಾಳಿ ನಡೆಸಲಾಗಿದೆ. ಇದೇ ವೇಳೆ, ಪೊಲೀಸರ ದಾಳಿ ವೇಳೆ ನಕಲಿ ನಂಬರ್ ಪ್ಲೇಟ್ನ ಸ್ವಾಮಿಯ ಕಾರು ಪತ್ತೆಯಾಗಿದೆ.ತನಿಖೆಗಿಳಿದ ಪೊಲೀಸರು 32 ಸ್ನಾತಕೋತ್ತರ ಡಿಪ್ಲೊಮಾ ವಿದ್ಯಾರ್ಥಿನಿಯರ ಹೇಳಿಕೆ ಪಡೆದಿದ್ದು, ಅದರಲ್ಲಿ 17 ಮಂದಿ ಸ್ವಾಮಿಯಿಂದ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ಹೇಳಿದ್ದಾರೆ. ಜತೆಗೆ ಆ ಸಂಸ್ಥೆಯ ಸಿಬ್ಬಂದಿ ಸಹ ಸ್ವಾಮಿಯ ಬೇಡಿಕೆಗೆ ಸ್ಪಂದಿಸುವಂತೆ ವಿದ್ಯಾರ್ಥಿನಿಯರಿಗೆ ಒತ್ತಾಯಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ. ಆರ್ಥಿಕ ಮತ್ತು ಸಮಾಜಿಕವಾಗಿ ದುರ್ಬಲ ವರ್ಗದ ಮಹಿಳೆಯರೇ ಈ ಸ್ವಾಮಿಯ ಗುರಿಯಾಗಿದ್ದರು. ವಾಟ್ಸಾಪ್ ಅಥವಾ ಕರೆಯ ಮೂಲಕ ಅವರನ್ನು ಸಂಪರ್ಕಿಸುತ್ತಿದ್ದರು. ತಮ್ಮ ಕೋಣೆಗೆ ಕರೆಯುತ್ತಿದ್ದರು. ‘ರೂಮಿಗೆ ಬಂದರೆ ವಿದೇಶ ಯಾತ್ರೆ ಮಾಡಿಸುವೆ’ ಎಂಬುದು ಸೇರಿ ನಾನಾ ಆಮಿಷ ಒಡ್ಡುತ್ತಿದ್ದರು. ತಮ್ಮ ಬೇಡಿಕೆಗಳನ್ನು ಈಡೇರಿಸಲು ಅವರು ನಿರಾಕರಿಸಿದಲ್ಲಿ, ಬೆದರಿಕೆ ಒಡ್ಡಲು ಶುರು ಮಾಡುತ್ತಿದ್ದರು ಎನ್ನಲಾಗಿದೆ.
ಸ್ವಾಮಿಗಿದೆ ಕರಾಳ ಇತಿಹಾಸ
ಮೂಲತಃ ಒಡಿಶಾದವರಾದ ಸ್ವಾಮಿ ಚೈತನ್ಯಾನಂದ ಸರಸ್ವತಿ, ದಿಲ್ಲಿಯ ವಸಂತಕುಂಜದಲ್ಲಿ ಆಶ್ರಮ ಹೊಂದಿದ್ದು, ಶಾರದಾ ಕಾಲೇಜಿನ ಸಂಚಾಲಕರಾಗಿದ್ದರು. ಇವರ ವಿರುದ್ಧ 2009 ಮತ್ತು 2016ರಲ್ಲೂ ದೂರುಗಳು ದಾಖಲಾಗಿದ್ದವು. ಮೊದಲು ಕಿರುಕುಳ ಮತ್ತು ವಂಚನೆ ಪ್ರಕರಣ ದಾಖಲಾಗಿದ್ದು, ಅಲ್ಪಾವಧಿಗೆ ಸ್ವಾಮಿಯನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು. 2ನೇ ಬಾರಿ ವಸಂತ ಕುಂಜ ಆಶ್ರಮದಲ್ಲಿದ್ದ ಮಹಿಳೆಯೇ ಕೇಸ್ ದಾಖಲಿಸಿದ್ದರು. ಆದರೆ ಆಶ್ರಮ ಅಥವಾ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.
- ಸ್ವಾಮೀಜಿ ದಿಲ್ಲಿಯ ಶಾರದಾ ಶಿಕ್ಷಣ ಸಂಸ್ಥೆಯ ಸಂಚಾಲಕ
17 ಬಾಲಕಿಯರಿಂದ ಲೈಂಗಿಕ ಕಿರುಕುಳ ದೂರು
ಸ್ವಾಮಿ ಬಂಧನಕ್ಕೆ ಬಲೆ । ಇದರ ನಡುವೆ ಮಠದಿಂದ ಕಠಿಣ ಕ್ರಮ ಆಗಿದ್ದೇನು?
ಚೈತನ್ಯಾನಂದ ವಿರುದ್ಧ ಶಾರದಾ ಶಿಕ್ಷಣ ಸಂಸ್ಥೆಯ 17 ವಿದ್ಯಾರ್ಥಿನಿ ದೂರು
- ವಾಟ್ಸಾಪ್ ಕರೆ ಮಾಡಿ 16 ವರ್ಷದಿಂದ 50 ಮಹಿಳೆಯರಿಗೆ ಬಲೆ?
- ರೂಮಿಗೆ ಬಾ, ಫಾರಿನ್ಗೆ ಕರೆದೊಯ್ಯುತ್ತೇನೆ ಎಂದು ಸಂದೇಶ
- ಪ್ರಕರಣ ದಾಖಲು ಬೆನ್ನಲ್ಲೇ ಸ್ವಾಮಿ ಕಾಣೆ, ಲಂಡನ್ನಲ್ಲಿರುವ ಶಂಕೆ
- ಸ್ವಾಮಿ ಜತೆಗಿನ ಸಂಬಂಧ ಕಡಿದುಕೊಂಡ ಶೃಂಗೇರಿ ಪೀಠ