ಸಾರಾಂಶ
ದೇಣಿಗೆ ಮೂಲಕ ಬಂದ 199 ಕೋಟಿ ರು. ಆದಾಯಕ್ಕೆ ತೆರಿಗೆ ವಿನಾಯಿತಿಯ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. 2018-19ನೇ ವರ್ಷದಲ್ಲಿ 199.15 ಕೋಟಿ ರು. ಆದಾಯಕ್ಕೆ ತೆರಿಗೆ ವಿನಾಯಿತಿ ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ಮೇಲ್ಮನವಿ ನ್ಯಾಯಮಂಡಳಿ(ಐಟಿಎಟಿ) ವಜಾಗೊಳಿಸಿದೆ.
ನವದೆಹಲಿ: ದೇಣಿಗೆ ಮೂಲಕ ಬಂದ 199 ಕೋಟಿ ರು. ಆದಾಯಕ್ಕೆ ತೆರಿಗೆ ವಿನಾಯಿತಿಯ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. 2018-19ನೇ ವರ್ಷದಲ್ಲಿ 199.15 ಕೋಟಿ ರು. ಆದಾಯಕ್ಕೆ ತೆರಿಗೆ ವಿನಾಯಿತಿ ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ(ಐಟಿಎಟಿ) ವಜಾಗೊಳಿಸಿದೆ.
ಕಾಂಗ್ರೆಸ್ 2019ರ ಫೆ.2ರಂದು ತನ್ನ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿತ್ತು. ಆದರೆ, 2018ರ ಡಿ.31ರಂದೇ ಗಡುವು ಮುಗಿದಿತ್ತು. ಅಲ್ಲದೆ, ಪ್ರತಿ ದಾನಿಯ ಮಿತಿಯಾದ 2,000 ರು.ಗಿಂತ ಹೆಚ್ಚಿನ ದೇಣಿಗೆಗಳನ್ನು ಚೆಕ್ ಅಥವಾ ಬ್ಯಾಂಕ್ ವರ್ಗಾವಣೆಯಂತಹ ಬ್ಯಾಂಕಿಂಗ್ ಮಾರ್ಗಗಳ ಮೂಲಕವೇ ಪಾವತಿಸಬೇಕು ಎಂಬ ಕಾನೂನನ್ನು ಉಲ್ಲಂಘಿಸಿ, ಕಾಂಗ್ರೆಸ್ ಪಕ್ಷವು 14.49 ಲಕ್ಷ ರು.ಗಳನ್ನು ನಗದು ರೂಪದಲ್ಲಿ ಸ್ವೀಕರಿಸಿದೆ ಎಂದು 2019ರ ಸೆಪ್ಟೆಂಬರ್ನಲ್ಲಿ ಮೌಲ್ಯಮಾಪನ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಹೀಗಾಗಿ ಇಡೀ ಮೊತ್ತಕ್ಕೆ ತೆರಿಗೆ ವಿಧಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಐಟಿಎಟಿಗೆ ಮೇಲ್ಮನವಿ ಸಲ್ಲಿಸಿತ್ತು. ಅದನ್ನೀಗ ನ್ಯಾಯಮಂಡಳಿ ವಜಾಗೊಳಿಸಿದ್ದು, ತೆರಿಗೆ ಪಾವತಿಸುವಂತೆ ಸೂಚಿಸಿದೆ.