ಚಿಕಿತ್ಸೆಗೆ ಸೋನಿಯಾ ಗಾಂಧಿ ಸ್ಪಂದನೆ, ಆರೋಗ್ಯ ಚೇತರಿಕೆ: ಆಸ್ಪತ್ರೆ

| N/A | Published : Jun 18 2025, 12:13 AM IST / Updated: Jun 18 2025, 06:23 AM IST

ಚಿಕಿತ್ಸೆಗೆ ಸೋನಿಯಾ ಗಾಂಧಿ ಸ್ಪಂದನೆ, ಆರೋಗ್ಯ ಚೇತರಿಕೆ: ಆಸ್ಪತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊಟ್ಟೆ ನೋವಿನಿಂದಾಗಿ ಆಸ್ಪತ್ರೆ ಸೇರಿದ್ದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ದೆಹಲಿಯ ಸರ್‌ ಗಂಗಾರಾಮ್‌ ಆಸ್ಪತ್ರೆ ತಿಳಿಸಿದೆ. ಆದರೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡುವುದು ದಿನಾಂಕವನ್ನು ಇನ್ನು ಬಹಿರಂಗಪಡಿಸಿಲ್ಲ.

ನವದೆಹಲಿ: ಹೊಟ್ಟೆ ನೋವಿನಿಂದಾಗಿ ಆಸ್ಪತ್ರೆ ಸೇರಿದ್ದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ದೆಹಲಿಯ ಸರ್‌ ಗಂಗಾರಾಮ್‌ ಆಸ್ಪತ್ರೆ ತಿಳಿಸಿದೆ. ಆದರೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡುವುದು ದಿನಾಂಕವನ್ನು ಇನ್ನು ಬಹಿರಂಗಪಡಿಸಿಲ್ಲ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಆಸ್ಪತ್ರೆಯ ಮುಖ್ಯಸ್ಥ ಅಜಯ್‌ ಸ್ವರೂಪ್‌, ‘ಸೋನಿಯಾ ಗಾಂಧಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರ ಆರೋಗ್ಯ ಚೇತರಿಸಿಕೊಳ್ಳುತ್ತಿದೆ. ಡಿಸ್ಚಾರ್ಜ್‌ ಮಾಡುವ ದಿನಾಂಕ ಇನ್ನೂ ನಿರ್ಧರಿಸಿಲ್ಲ. ನಮ್ಮ ವೈದ್ಯರು ಸೋನಿಯಾ ಗಾಂಧಿ ಅವರ ಆಹಾರ ಪದ್ಧತಿಯ ಬಗ್ಗೆ ನಿಗಾ ಹರಿಸಿದ್ದಾರೆ’ ಎಂದು ಹೇಳಿದ್ದಾರೆ.

ಸೋನಿಯಾ ಅವರ ಇತ್ತೀಚೆಗೆ ಶಿಮ್ಲಾದಲ್ಲಿ ಅಧಿಕ ರಕ್ತದೊತ್ತಡದಿಂದಾಗಿ ಆಸ್ಪತ್ರೆಗೆ ಸೇರಿದ್ದರು.

ಸೇವೆ ಮುಗಿಸಿದ ಅಗ್ನಿವೀರರ ಜವಾಬ್ದಾರಿ ಗೃಹ ಸಚಿವಾಲಯಕ್ಕೆ

ನವದೆಹಲಿ: ಸೇನೆಯಲ್ಲಿ ಯೋಧರ ವಯಸ್ಸನ್ನು ತಗ್ಗಿಸುವ ಉದ್ದೇಶದಿಂದ 2022ರಲ್ಲಿ ಆರಂಭಿಸಲಾದ ಅಗ್ನಿಪಥ ಯೋಜನೆಯಡಿ ಆಯ್ಕೆಯಾಗುವ ಅಗ್ನಿವೀರರ ಸೇವೆ ಮುಗಿದ ಬಳಿಕ, ಅವರ ಮುಂದಿನ ಪ್ರಗತಿಗಾಗಿ ಚಟುವಟಿಕೆಗಳನ್ನು ಸಂಘಟಿಸುವ ಜವಾಬ್ದಾರಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಲಾಗಿದೆ.

ಕೇಂದ್ರ ಸರ್ಕಾರವು ವ್ಯವಹಾರ ಹಂಚಿಕೆ ನಿಯಮ, 1961ಕ್ಕೆ ಸರ್ಕಾರ ತಿದ್ದುಪಡಿ ಮಾಡಿದ್ದು, ಕೇಂದ್ರ ಗೃಹ ಸಚಿವಾಲಯದ ರಾಜ್ಯಗಳ ಇಲಾಖೆಯ ಅಡಿಯ 2ನೇ ವೇಳಾಪಟ್ಟಿಯಲ್ಲಿ ಈ ಹೊಸ ಅಂಶವನ್ನು ಸೇರಿಸಲಾಗಿದೆ.

ಅಗ್ನಿಪಥದ ಅಡಿಯಲ್ಲಿ, ಸೇನೆಯ ಮೂರೂ ವಿಭಾಗಗಳಿಗೆ ಆಯ್ಕೆಯಾಗುವ 17.5ರಿಂದ 21 ವಯಸ್ಸಿನ ವೀರರು 4 ವರ್ಷ ಸೇವೆ ಸಲ್ಲಿಸುತ್ತಾರೆ. ಅದರಲ್ಲಿ ಶೇ.25ರಷ್ಟು ಜನ ಮಾತ್ರ ಇನ್ನೂ 15 ವರ್ಷ ಸೇವೆ ಸಲ್ಲಿಸಲು ಅವಕಾಶವಿದೆ. ಉಳಿದವರಿಗೆಲ್ಲ ಸಿಆರ್‌ಪಿಎಫ್‌, ಬಿಎಸ್‌ಎಫ್‌, ಸಿಐಎಸ್‌ಎಫ್‌, ಎಸ್‌ಎಸ್‌ಬಿ ಪಡೆಗಳಲ್ಲಿ ಶೇ.10ರಷ್ಟನ್ನು ಮೀಸಲಿರಿಸಲಾಗಿದೆ.

ಅಧಿಸೂಚನೆಯಲ್ಲಿ ‘ಜಾತಿಗಣತಿ’ ಕಾಣೆ: ಕೇಂದ್ರದ ವಿರುದ್ಧ ಮತ್ತೆ ಕಾಂಗ್ರೆಸ್ ಕಿಡಿ 

ನವದೆಹಲಿ: 2026-27ರಲ್ಲಿ ನಡೆಸಲು ನಿರ್ಧರಿಸಿರುವ ದೇಶದ 16ನೇ ಜನಗಣತಿಯ ಅಧಿಸೂಚನೆಯಲ್ಲಿ ಜಾತಿ ಗಣತಿಯನ್ನು ಉಲ್ಲೇಖಿಸದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಮತ್ತೆ ಆಕ್ಷೇಪ ವ್ಯಕ್ತಪಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್ ಪೈಲಟ್, ‘ಜನಗಣತಿಯ ಉದ್ದೇಶ ಕೇವಲ ವ್ಯಕ್ತಿಯ ಜಾತಿ ಕುರಿತ ದತ್ತಾಂಶವನ್ನು ಸಂಗ್ರಹಿಸುವುದಲ್ಲ. ಬದಲಿಗೆ ಕುಟುಂಬಗಳ ಸ್ಥಿತಿಗತಿಗಳನ್ನು ಅರಿತು, ಅವರ ಉನ್ನತಿಗಾಗಿ ನೀತಿಗಳನ್ನು ಜಾರಿಗೊಳಿಸುವುದು. ಭಾರತದ ಜನರ ಪರಿಸ್ಥಿತಿಯನ್ನು ನಿಖರವಾಗಿ ಅರಿಯಲು ಜಾತಿ ಗಣತಿಯು ಸೂಕ್ತ ಮಾರ್ಗವಾಗಿದೆ. ಸರ್ಕಾರ ಜಾತಿ ಜನಗಣತಿ ನಡೆಸುವುದಾಗಿ ಜನರಿಗೆ ಹೇಳುತ್ತಿದೆ. ಆದರೆ ಅಧಿಸೂಚನೆಯಲ್ಲಿ ಮಾತ್ರ ಈ ವಿಷಯ ಕಾಣೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.‘ಜನಗಣತಿ ನಡೆಸಲು 10,000 ಕೋಟಿ ರು.ಗಳ ಅಗತ್ಯವಿದೆ. ಆದರೆ ಸರ್ಕಾರ ಕೇವಲ 574 ಕೋಟಿ ರು.ಗಳನ್ನು ಮೀಸಲಿಟ್ಟಿದೆ. ಗಣತಿ ಕುರಿತು ಸರ್ಕಾರದ ಉದ್ದೇಶದ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ’ ಎಂದರು.

ವಾಟ್ಸ್ಯಾಪ್‌ನಲ್ಲಿ ಇನ್ನು ಜಾಹೀರಾತು ಪ್ರಸಾರ: ‘ಅಪ್‌ಡೇಟ್ಸ್‌’ನಲ್ಲಿ ಲಭ್ಯ

ಕ್ಯಾಲಿಫೋರ್ನಿಯಾ: ಟೆಕ್‌ ದೈತ್ಯ ಕಂಪನಿ ಮೆಟಾ ವಾಟ್ಸ್ಯಾಪ್‌ನಲ್ಲಿ ಮತ್ತೊಂದು ಹೊಸ ಫೀಚರ್‌ ಬಿಡುಗಡೆಗೆ ಮುಂದಾಗಿದ್ದು, ಈ ಮೆಸೇಜಿಂಗ್ ಆ್ಯಪ್‌ನಲ್ಲಿಯೂ ನಿಮಗೆ ಜಾಹೀರಾತುಗಳು ಕಾಣಿಸಿಕೊಳ್ಳಲಿವೆ. ಈ ಮೂಲಕ್ಕೆ ಆದಾಯ ಹೆಚ್ಚಸಿಕೊಳ್ಳಲು ಮೆಟಾ ಮುಂದಾಗಿದೆ. 

ನಿತ್ಯ150 ಕೋಟಿ ಜನರು ವಾಟ್ಸ್ಯಾಪ್‌ ಬಳಕೆ ಮಾಡುತ್ತಿದ್ದು, ಈ ಗ್ರಾಹಕರನ್ನು ಬಳಸಿಕೊಂಡು ಆದಾಯ ಹೆಚ್ಚಳಕ್ಕೆ ನಿರ್ಧರಿಸುವ ಮೆಟಾ ತನ್ನ ‘ಅಪ್‌ಡೇಟ್ಸ್‌’ ಟ್ಯಾಬ್‌ನಲ್ಲಿ ಜಾಹೀರಾತು ಪ್ರಸಾರ ಮಾಡಲಿದೆ.ಬಳಕೆದಾರರ ವಯಸ್ಸು, ಪ್ರದೇಶ, ಭಾಷೆಯ ಆಧಾರದಲ್ಲಿ ಜಾಹೀರಾತನ್ನು ಬಿತ್ತರಿಸಲಿದೆ. ಆದರೆ ಇದರಲ್ಲಿ ಯಾವುದೇ ಚಾಟ್‌ಗಳು ಬಹಿರಂಗವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮಾತ್ರವಲ್ಲದೇ ಮಾಸಿಕ ಶುಲ್ಕಕ್ಕೆ ವಿಶೇಷ ಅಪ್‌ಡೇಟ್‌ಗಳನ್ನು ನೀಡುವ ಮೂಲಕ ಸಬ್‌ಸ್ಕ್ರಿಪ್ಶನ್‌ಗೆ ಅನುವು ಮಾಡಿಕೊಡುತ್ತದೆ.

Read more Articles on